ಶೋಪಿಯಾನ್: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ ನಾಲ್ವರು ಉಗ್ರರನ್ನು ಬೇಟೆಯಾಡಿದೆ. ಆದರೆ, ಘಟನೆಯಲ್ಲಿ ಓರ್ವ ಯೋಧ ವೀರಸ್ವರ್ಗ ಸೇರಿದ್ದಾರೆ.
ಶೋಪಿಯಾನ್ ಜಿಲ್ಲೆಯ ನಂದಿಗ್ರಾಮದಲ್ಲಿ ಭಾರತೀಯ ಸೇನೆ ಹಾಗೂ ಉಗ್ರರೊಂದಿಗೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ನಾಲ್ವರು ಉಗ್ರರನ್ನು ಎನ್ಕೌಂಟರ್ ಮಾಡುವಲ್ಲಿ ಸೇನೆ ಯಶಸ್ವಿಯಾಗಿದೆ. ದುರ್ದೈವವೆಂದರೆ ಪ್ಯಾರಾ ಕಮಾಂಡೋಗೆ ಸೇರಿದ ಯೋಧರೋರ್ವರಿಗೆ ಭಾರೀ ಗುಂಡಿನ ಗಾಯಗಳಾಗಿತ್ತು. ಇವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ವೀರಸ್ವರ್ಗ ಸೇರಿದ್ದಾರೆ. ಇದೇ ವೇಳೆ ಇಬ್ಬರು ಯೋಧರಿಗೆ ಗುಂಡಿನ ಗಾಯಗಳಾಗಿವೆ.
ಉಗ್ರರ ಚಲನವಲನ ಮಾಹಿತಿ ಪಡೆದು ಇಂದು ನಸುಕಿನ 3 ಗಂಟೆಯಿಂದಲೇ ಸೇನೆ ಮಿಂಚಿನ ಕಾರ್ಯಾಚರಣೆ ಆರಂಭಿಸಿತು. ಈ ವೇಳೆ ಉಗ್ರರು ನಡೆಸಿದ ಗುಂಡಿನ ದಾಳಿಗೆ ಪ್ರತಿಯಾಗಿ ಸೇನೆ ಭಾರೀ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಒಟ್ಟು ನಾಲ್ವರು ಉಗ್ರರನ್ನು ಸಂಹರಿಸಲಾಗಿದೆ.
ಭಾರತೀಯ ಸೇನೆ, ಸಿಆರ್ಪಿಎಫ್ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಇದೇ ವೇಳೆ ಪೂಂಚ್ ಸೆಕ್ಟರ್ನಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದೆ ಎಂದು ವರದಿಯಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ದೊರಕಬೇಕಿದೆ.
Discussion about this post