ನವದೆಹಲಿ: ಪ್ರತಿಷ್ಠಿತಿ ಪವಿತ್ರ ಕ್ಷೇತ್ರ ಗೋಕರ್ಣ ದೇವಾಲಯವನ್ನು ಮತ್ತೆ ಶ್ರೀ ರಾಮಚಂದ್ರಾಪುರ ಮಠದ ಸುಪರ್ದಿಗೆ ನೀಡಿ ಎಂದು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಇಂದು ಮಧ್ಯಂತರ ಆದೇಶ ನೀಡಿದ್ದು, ಶ್ರೀಮಠದ ಪ್ರಯತ್ನಕ್ಕೆ ಜಯ ದೊರೆತಿದೆ.
ಈ ಕುರಿತಂತೆ ಮಧ್ಯಂತರ ಆದೇಶ ಹೊರಡಿಸಿರುವ ನ್ಯಾಯಾಲಯ, ಮುಂದಿನ ಆದೇಶದವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ.
ಗೋಕರ್ಣ ಮಠವನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಬೇಕೆಂಬ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಶ್ರೀರಾಮಚಂದ್ರಾಪುರ ಮಠ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಕಳೆದ 10 ವರ್ಷಗಳಿಂದಲೂ ಗೋಕರ್ಣ ದೇವಾಲಯ ಶ್ರೀಮಠದ ಸುಪರ್ದಿನಲ್ಲಿದ್ದು, ಇಲ್ಲಿನ ಆಡಳಿತ ಸೇರಿದಂತೆ ಪ್ರತಿಯೊಂದೂ ಶಿಸ್ತುಬದ್ದವಾಗಿ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ ದೇವಾಲಯವನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಆದರೆ, ಈಗ ಸುಪ್ರೀಂ ಆದೇಶದಂತೆ ದೇವಾಲಯ ಮತ್ತೆ ಶ್ರೀಮಠದ ಸುಪರ್ದಿಗೆ ಬರಲಿದೆ.
















