ಗೌರಿಬಿದನೂರು: ಬೆಳೆಯುವ ಮಕ್ಕಳಿಗೆ ಉತ್ತಮ ಪೋಷಕಾಂಶಯುಕ್ತ ಆಹಾರವನ್ನು ನೀಡುವ ಮೂಲಕ ಅವರ ಆರೋಗ್ಯವನ್ನು ಬಲಪಡಿಸಿದಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಶಕ್ತರಾಗಲು ಸಹಕರಿಯಾಗುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆ ಮಂಜುಳಾ ತಿಳಿಸಿದರು.
ತಾಲೂಕಿನ ತೊಂಡೇಬಾವಿ ಹೋಬಳಿಯ ಕಲ್ಲಿನಾಯಕನಹಳ್ಳಿಯಲ್ಲಿ ಅಂಗನವಾಡಿಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಪೋಷಣಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಂದು ಮಗುವಿಗೂ ಹುಟ್ಟಿನಿಂದ 3 ವರ್ಷ 6 ತಿಂಗಳವರೆಗೆ ಪೋಷಕಾಂಶಯುಕ್ತ ಆಹಾರವು ಅತ್ಯವಶ್ಯಕವಾಗಿದೆ. ಕೇಂದ್ರದಲ್ಲಿ ಮಾತೃವಂದನೆ ಹಾಗೂ ಮಾತೃಶ್ರೀ ಯೋಜನೆಯಡಿಯಲ್ಲಿ ಎಲ್ಲಾ ತಾಯಂದಿರನ್ನು ಸೇರಿಸಿ ಪೌಷ್ಟಿಕ ಆಹಾರದ ಬಗ್ಗೆ ತಿಳಿಸಬೇಕಾಗಿದೆ ಎಂದರು.
ಅಲ್ಲದೇ, ಇದರ ಜೊತೆಯಲ್ಲಿ ತಾಯಿಯ ಎದೆ ಹಾಲನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳ ಆರೋಗ್ಯಕ್ಕೆ ಸಹಕಾರಿಯಾಗಬಲ್ಲ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವುದು, 5 ರಿಂದ 6 ತಿಂಗಳ ಮಕ್ಕಳಿಗೆ ಅನ್ನ ಪ್ರಾಶನ ಮಾಡುವ ವಿಧಾನ ಹಾಗೂ ಗರ್ಭಿಣಿಯರಲ್ಲಿ ರಕ್ತಹೀನತೆ ಕಡಿಮೆ ಮಾಡುವ ಮಾರ್ಗೋಪಾಯಗಳನ್ನು ತಿಳಿಸುವುದು ಅತ್ಯವಶ್ಯಕವಾಗಿದೆ. ಇದರಿಂದ ಮಗುವಿಗೆ ಜನ್ಮ ನೀಡುವಂತಹ ತಾಯಿ ಹಾಗೂ ಹುಟ್ಟಿದ ನಂತರ ಮಗುವಿನ ಆರೋಗ್ಯ ಎರಡೂ ಉತ್ತಮವಾಗಿರಲು ಸಹಕಾರಿಯಾಗಿದೆ ಎಂದರು.
ಹಿರಿಯ ಆಶಾ ಕಾರ್ಯಕರ್ತೆ ಮಂಗಳಮ್ಮ ಮಾತನಾಡಿ, ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡಬೇಕಾದರೆ ಕಾಲಕಾಲಕ್ಕೆ ತೆಗೆದುಕೊಳ್ಳುವ ಆಹಾರ ಸ್ಪಚ್ಛತೆ ಮತ್ತು ಪೌಷ್ಟಿಕಾಂಶಗಳಿಂದ ಕೂಡಿರಬೇಕು. ಜೊತೆಗೆ ಮನೆಯ ಸುತ್ತಲೂ ಸ್ಪಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಬೇಕಾಗಿದೆ. ಗರ್ಭಿಣಿ ಸ್ತ್ರೀಯರು ಸಕಾಲದಲ್ಲಿ ವೈದ್ಯರು ಸೂಚಿಸಿದ ಚುಚ್ಚುಮದ್ದುಗಳನ್ನು ಸಮರ್ಪಕವಾಗಿ ತೆಗೆದುಕೊಳ್ಳಬೇಕಾಗಿದೆ. ಮಗು ಬೆಳೆದಂತೆ ಶಾಲಾ ಪೂರ್ವದಲ್ಲಿ ದಾಖಲಾತಿ ಮಾಡಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಬೇಕಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯಾದ ಶಾಂತಮ್ಮ, ಸಹಾಯಕಿಯರಾದ ರಾಧಮ್ಮ, ಪುಷ್ಪ ಹಾಗೂ ಮಕ್ಕಳ ತಾಯಂದಿರು ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post