ಕಲ್ಪ ಮೀಡಿಯಾ ಹೌಸ್ | ಹಾಸನ |
ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ #Prajwal Revanna ಮೇ 31ರಂದು ಬೆಂಗಳೂರಿಗೆ ಬಂದು ವಿಚಾರಣೆಗೆ ಸಹಕರಿಸುವ ಹೇಳಿಕೆ ನೀಡಿದ ಬೆನ್ನಲ್ಲೇ ಮಹತ್ವದ ದಾಖಲೆ ಸಂಗ್ರಹಿಸಲು ಎಸ್ಐಟಿ ಮುಂದಾಗಿದೆ.
ಹಾಸನ ನಗರದ ಆರ್.ಸಿ. ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಸತತ 10 ಗಂಟೆಗಳ ಕಾಲ ಎಸ್ಐಟಿ ಹಾಗೂ ಎಫ್ಎಸ್ಎಲ್ ತಂಡ ಪರಿಶೀಲನೆ ನಡೆಸಿದ್ದು, ಪ್ರಜ್ವಲ್ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಪು ಹಾಗೂ ಇತರೆ ವಸ್ತುಗಳನ್ನು ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಎಸ್ಐಟಿ ತಂಡ ತನಿಖೆಗೆ ಸಂಬಂಧಪಟ್ಟ ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಬೆಂಗಳೂರಿಗೆ ಹೊರಟಿದೆ.
ಪೆನ್ಡ್ರೈವ್ ಹಂಚಿದ ಇಬ್ಬರ ಬಂಧನ
ಅಶ್ಲೀಲ ವೀಡಿಯೋಗಳಿದ್ದ ಪೆನ್ಡ್ರೈವ್ ಹಂಚಿದ ಪ್ರಕಣದಲ್ಲಿ ನವೀನ್ಗೌಡ ಹಾಗೂ ಚೇತನ್ ಎಂಬ ಇಬ್ಬರು ಪ್ರಮುಖ ಆರೋಪಿಗಳನ್ನು ಎಸ್ಐಟಿ #SIT ಅಧಿಕಾರಿಗಳು ಬಂಧಿಸಿದ್ದು, ನಿನ್ನೆ ರಾತ್ರಿಯೇ ಹಾಸನಕ್ಕೆ ಕರೆತಂದಿದ್ದಾರೆ.
ನವೀನ್ ಹಾಗೂ ಚೇತನ್ ಇಬ್ಬರೂ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಹಿನ್ನೆಲೆ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಕೋರ್ಟ್ಗೆ ಹಾಜರುಪಡಿಸಿ ಬಳಿಕ ಕಸ್ಟಡಿಗೆ ಪಡೆದು ನಂತರ ವಿಚಾರಣೆ ಹಾಗೂ ಸ್ಥಳ ಮಹಜರು ನಡೆಸಲು ಎಸ್ಐಟಿ ಯೋಜಿಸಿದೆ.
ಪೊಲೀಸ್ ಕಸ್ಟಡಿಗೆ ಪಡೆದ ಬಳಿಕ ಇಬ್ವರು ಆರೋಪಿಗಳನ್ನು ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆಯಿದೆ. ಬೇಲೂರು ತಾಲ್ಲೂಕಿನ, ನೆಲ್ಕೆ ಗ್ರಾಮದ ನವೀನ್ಗೌಡನ ನಿವಾಸ ಹಾಗೂ ಇದೇ ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿರುವ ನವೀನ್ಗೌಡನ ನಿವಾಸಗಳಲ್ಲಿ ಸ್ಥಳ ಮಹಜರು ಮಾಡಲಿದ್ದಾರೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















