ಕಲ್ಪ ಮೀಡಿಯಾ ಹೌಸ್ | ತಿರುವನಂತಪುರ |
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೇರಳ ರಾಜ್ಯದ ಹಲವು ಭಾಗಗಳು ತತ್ತರಿಸಿದ್ದು, ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಪ್ರವಾಹಕ್ಕೆ ಸಿಲುಕಿ ಕೂಟ್ಟಿಕಲ್ ಪ್ರದೇಶದಲ್ಲಿ 12 ಹಾಗೂ ಕೊಟ್ಟಾಯಂ ಜಿಲ್ಲೆಯಲ್ಲಿ 13 ಮಂದಿ ಮೃತರಾಗಿದ್ದರೆ, ಭೂಕುಸಿತದಲ್ಲಿ 11 ಮಂದಿ ಬಲಿಯಾಗಿದ್ದಾರೆ. ಕೂವಪಲ್ಲಿ ಜಿಲ್ಲೆಯಲ್ಲಿ ಪ್ರವಾಹದ ನೀರಿನಲ್ಲಿ ಮತ್ತೊಬ್ಬ ವ್ಯಕ್ತಿ ಕೊಚ್ಚಿ ಹೋಗಿದ್ದರೆ, ಇಡುಕ್ಕಿ ಜಿಲ್ಲೆಯಲ್ಲಿ 6 ಮಂದಿ ಕೊಕ್ಕಯಾರ್ ಭೂಕುಸಿತಕ್ಕೆ ಮೃತಪಟ್ಟಿದ್ದಾರೆ. ಮಗುವೊಂದು ನಾಪತ್ತೆಯಾಗಿದೆ. ಕೊಕ್ಕರ್ಯ ಮತ್ತು ಪೆರುವಂತನಮ್ ಗ್ರಾಮಗಳಲ್ಲಿ ಇಬ್ಬರು ವ್ಯಕ್ತಿಗಳು ಮಳೆ ಸಂಬಂಧಿ ಅವಘಡಗಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ತೊಡುಪುಝದಲ್ಲಿ ಕಾರು ನೀರಿನಲ್ಲಿ ಕೊಚ್ಚಿ ಹೋಗಿ ಇಬ್ಬರು ನಾಪತ್ತೆಯಾಗಿದ್ದಾರೆ. ಭೂಕುಸಿತದಿಂದ ಮಣ್ಣಿನ ಅವಶೇಷಗಳಡಿ ಸಿಕ್ಕಿಹಾಕಿಕೊಂಡವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಇನ್ನು ಬುಧವಾರದಿಂದ ಕೇರಳದ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















