ಹೊಸಪೇಟೆ: ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಕಿರ್ಲೋಸ್ಕರ್ ವಸುಂಧರಾ ಪರಿಸರ ರಕ್ಷಕರು(ಇಕೋ ರೇಂಜರ್ಸ್) ತಂಡಗಳ ಸ್ಥಾಪನೆಯಾಗಿದ್ದು, ಇದರ ಉದ್ಘಾಟನೆ ಇತ್ತೀಚೆಗೆ ನಡೆಯಿತು.
ಬಂಡಿ ಹರ್ಲಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳದ ಶ್ರೀ ಗವಿ ಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮಹಿಳಾ ಪದವಿ ಪೂರ್ವ ಕಾಲೇಜಿನಿಂದ ಆಯ್ದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪರಿಸರ ರಕ್ಷಕರಾಗಿ (ಇಕೋ ರೇಂಜರ್ಸ್) ಈ ಸಮಾರಂಭದಲ್ಲಿ ಸೇರ್ಪಡೆಯಾಗಿದ್ದಾರೆ.
ಈ ಕಾರ್ಯಕ್ರಮವನ್ನು ಕೊಪ್ಪಳದ ಶ್ರೀಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮನೋಹರ್ ದಾದ್ಮಿ ಅವರು ಉದ್ಘಾಟಿಸಿದರು.
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಹಿರಿಯ ಉಪಾಧ್ಯಕ್ಷ ಪಿ. ನಾರಾಯಣ ಮಾತನಾಡಿ, ಸುಮಾರು 25 ವರ್ಷಗಳ ಹಿಂದೆ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಹಾಗೂ ಬರುಡು ಪ್ರದೇಶವಾದ ಈ ಭಾಗದಲ್ಲಿ ಮೊಟ್ಟ ಮೊದಲನೆಯದಾಗಿ ಕಿರ್ಲೋಸ್ಕರ್ ಸಮೂಹ ಸಂಸ್ಥೆಯವರು ಕಿರ್ಲೋಸ್ಕರ್ ಕಾರ್ಖಾನೆಯನ್ನು ಸ್ಥಾಪಿಸಿದ್ದು ಇದರಿಂದಾಗಿ ಈ ಭಾಗದ ಜನರಿಗೆ ಉದ್ಯೋಗ, ಗುತ್ತಿಗೆ ಕೆಲಸ ನೇರ ಸಿಕ್ಕಿದ್ದು. ನೇರ ಹಾಗೂ ಪರೋಕ್ಷವಾಗಿ ಸಾಕಷ್ಟು ಜನರಿಗೆ ಅನುಕೂಲವಾಗಿದೆ ಎಂದರು.
ಕಾರ್ಖಾನೆಯ ಸ್ವಲ್ಪ ಲಾಭಾಂಶವನ್ನು ಸಿಎಸ್’ಆರ್ ಚಟುವಟಿಕೆಗಳಿಗೆ ಬಳಸಬೇಕೆಂದು ಸರ್ಕಾರವು ಆದೇಶ ನೀಡುವ ಸುಮಾರು 9 ವರ್ಷಕ್ಕಿಂತಲೂ ಮುಂಚೆಯೇ ಕಿರ್ಲೋಸ್ಕರ್ ಕಾರ್ಖಾನೆಯು ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ದಿ ಸಂಸ್ಥೆಯನ್ನು ಸ್ಥಾಪಿಸಿ ಸಾಕಷ್ಟು ಸಾಮಾಜಿಕ ಅಭಿವೃದ್ದಿ ಕೆಲಸಗಳನ್ನು ಕೈಗೊಂಡಿದೆ. ಪರಿಸರ ಸಂರಕ್ಷಣೆಯನ್ನು ಮಾಡಬೇಕೆನ್ನುವ ದೃಷ್ಟಿಕೋನದಿಂದ ವಸುಂಧರಾ ಕ್ಲಬ್ ಜೊತೆಗೂಡಿ ಕಿರ್ಲೋಸ್ಕರ್ ವಸುಂಧರಾ ಎಂಬ ವೇದಿಕೆ ಅಡಿಯಲ್ಲಿ ಈ ಅಂತಾರಾಷ್ಟೀಯ ಚಲನಚಿತ್ರೋತ್ಸವನ್ನು ಆಯೋಜಿಸುತ್ತಾ ಬಂದಿದೆ. ಮುಂದಿನ ಪೀಳಿಗೆಗಾಗಿ ಪೃಥ್ವಿಯನ್ನು ಉಳಿಸಿ ಬೆಳೆಸಬೇಕೆನ್ನುವುದು ಮೂಲ ಉದ್ದೇಶವಾಗಿದೆ. ಪ್ಲಾಸ್ಟಿಕ್ ತ್ಯಜಿಸಿ, ಪೃಥ್ವಿಯನ್ನು ಸಂರಕ್ಷಿಸಿ, ಎಂಬುದು ಈ ವರ್ಷದ ಧ್ಯೇಯವಾಕ್ಯವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಪರಿಸರವನ್ನು ಸಂರಕ್ಷಿಸಲು ಪರಿಸರದ ಸೂಕ್ಷ್ಮ ಪ್ರಜ್ಞೆಯುಳ್ಳ ಯುವ ಪೀಳಿಗೆಯು ಸಕಾರಾತ್ಮಕ ಕೊಡುಗೆಯನ್ನು ನೀಡಲು ಸಾಮಾನ್ಯ ವೇದಿಕೆಯನ್ನು ನಿರ್ಮಿಸುವುದು ನಮ್ಮ ದೃಷ್ಟಿಕೋನವಾಗಿದ್ದು, ಕಾರಣ, ಈ ಕಿರ್ಲೋಸ್ಕರ್ ವಸುಂಧರಾ ಪರಿಸರ ರಕ್ಷಕರು ಎಂಬ ತಂಡಗಳನ್ನು ರಚಿಸಿ, ಇವರಿಗೆ ಪರಿಸರ ತಜ್ಞರಿಂದ ಹಾಗೂ ಹಲವಾರು ವಿಷಯಗಳಲ್ಲಿ ನುಜರಿತ ವ್ಯಕ್ತಿಗಳಿಂದ ಮಾರ್ಗದರ್ಶನವನ್ನು ನೀಡಲಾಗುವುದು. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಕಾಲೇಜು ಪರಿಸರವನ್ನು ಹಸಿರು ಕಾಲೇಜು-ಸ್ವಚ್ಚ ಕಾಲೇಜು ಎಂದು ನಿರ್ಮಾಣ ಮಾಡುವ ನಿಟ್ಟಿನಲ್ಲಿ ತೊಡಗುವುದರಲ್ಲಿ ಸಂದೇಶವಿಲ್ಲ. ವರ್ಷದುದ್ದಕ್ಕೂ ಆಯೋಜಿಸುವ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೂಂಡು ಪರಿಸರ ಸಂರಕ್ಷಿಸುವ ವಿಷಯದಲ್ಲಿ ನಿಪುಣರಾಗುತ್ತಾರೆ. ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗುತ್ತಾರೆ ಎಂದರು.
ಶ್ರೀ ಗವಿ ಸಿದ್ದೇಶ್ವರ ಕಾಲೇಜಿನ ಪ್ರಾಂಶುಪಾಲ ಮನೋಹರ್ ದಾದ್ಮಿ ಮಾತನಾಡಿ, ವಿವಿಧ ಕಾಲೇಜುಗಳ ಉತ್ಸಾಹಿ ಯುವಕ-ಯುವತಿಯರನ್ನು ತಂಡವನ್ನಾಗಿ ಮಾಡಿ ಪರಿಸರ ಸಂರಕ್ಷಣೆಯ ಕುರಿತು ಅವರಿಗೆ ತಿಳುವಳಿಕೆಯನ್ನು ಮೂಡಿಸುತ್ತಿರುವ ಕಿರ್ಲೋಸ್ಕರ್ ಸಂಸ್ಥೆಯ ಈ ಪಾತ್ರ ಬಹಳ ಮಹತ್ವವಾದದು. ಪ್ಲಾಸ್ಟಿಕ್ ಒಂದು ವಿನಾಶಕಾರಿ ವಸ್ತುವಾಗಿದ್ದು, ಸಾವಿರಾರು ವರ್ಷವಾದರೂ ಅದು ಕೊಳೆತು ಹೋಗದ ಕಾರಣ, ಅದು ಮುಂಬರುವ ಪೀಳಿಗೆಗ ಮರಣ ಗಂಟೆಯಾಗಲಿದೆ. ನಾವು ಇಂದಿನಿಂದಲೇ ಪ್ಲಾಸ್ಟಿಕ್ ನಿರ್ಮೂಲ ಮಾಡುವ ಆಂದೋಲನವನ್ನು ಪ್ರಾರಂಭ ಮಾಡೋಣ, ಇಂತಹ ವಿಷಯಗಳತ್ತ ಆದ್ಯತೆ ನೀಡಿ ಪರಿಸರವನ್ನು ಸಂರಕ್ಷಿಸುವಲ್ಲಿ ಸತತ ಪ್ರಯತ್ನ ಮಾಡುತ್ತಿರುವ ಕಿರ್ಲೋಸ್ಕರ್ ಕಾರ್ಖಾನೆಯೊಂದಿಗೆ ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ಡಾ.ಆಶ್ವತ್ಥ್ ಕುಮಾರ್ ಮಾತನಾಡಿ, ಪರಿಸರ ಸಂರಕ್ಷಣೆಯನ್ನು ನಾವು ಯಾಕೆ ಮಾಡಬೇಕು, ನಮ್ಮ ನಮ್ಮ ಜವಾಬ್ದಾರಿಗಳೇನು, ದಿನನಿತ್ಯದ ಕೆಲಸಗಳಲ್ಲಿ ನಾವು ಬಳಸುತ್ತಿರುವ ಪ್ಲಾಸಿಕ್ ಬದಲಾಗಿ ಪರ್ಯಾಯ ವಸ್ತುಗಳನ್ನು ಹೇಗೆ ಬಳಸಬಹುದು, ತನ್ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ಹೇಗೆ ಕ್ರಮೇಣವಾಗಿ ನಿರ್ಮೂಲ ಮಾಡಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಕುಮಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ವಷೀಣಿ ಸಂಕ್ಲಾಪುರ ಪರಿಸರ ಗೀತೆಯನ್ನು ಹಾಡುವುದರ ಮೂಲಕ ಗಮನ ಸೆಳೆದರು. ಮುರಳೀಧರ್ ನಾಡಿಗೇರ್ ಕಾರ್ಯಕ್ರಮ ನಿರೂಪಿಸಿದರು. ವಸುಂಧರ್ ಪ್ರೇಮಿಗಳಾದ ಪ್ರಕಾಶ್ ಮಲಪನಗುಡಿ, ಮೇಘರಾಜ್, ಉದವ್ ಕುಲಕರ್ಣಿ, ಉನ್ನತಾ ಕುಲಕರ್ಣಿ, ಕಿರಣ್ ಶೇಜೆಕರ್, ಲಕ್ಷ್ಮೀ ನಾರಾಯಣ, ಶಿಲ್ಪ ಶ್ರೀವತ್ಸನ್, ಸುಮಾ ನಾಗರಾಜ್, ಗೀತಾ ನಾಗರಾಜ್, ಮಹೇಶ್ವರಿ ಕೋರಿ, ಶೈಲಜಾ ಗೋಣಿ ಮತ್ತು ಅನೇಕ ಮಹಿಳಾ ಪರಿಸರ ಪ್ರೇಮಿಗಳು ಭಾಗವಹಿಸಿದ್ದರು. ಸರ್ವೋದಯ ಗ್ರಾಮೀಣಾಭಿವೃದ್ದಿ ಸಂಸ್ಥೆ ಕೊಪ್ಪಳದ ಸದಸ್ಯರು ಭಾಗವಹಿಸಿದ್ದರು.
ಕಿರ್ಲೋಸ್ಕರ್ ವಸುಂಧರಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ನಿರ್ದೇಶಕ ವಿರೇಂದ್ರ ಚಿತ್ರವ್, ಮುನಿರಾಬಾದ್’ನ ಪಶು ಸಂಗೋಪನಾ ಕೇಂದ್ರದ ಅಧಿಕಾರಿ ಡಾಕ್ಟರ್ ಅಶ್ವತ್ಕುಮಾರ್, ಕೆಎಫ್’ಐಎಲ್ ಆಫೀಸರ್ಸ್ ಲೇಡೀಸ್ ಕ್ಲಬ್’ನ ರಚನಾ ಏಕತಾರೆ, ಸರ್ವೋದಯ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಪ್ರತಿನಿಧಿಗಳು, ಕ್ಲಬ್’ನ ಸದಸ್ಯರುಗಳು, ವಿವಿಧ ಕಾಲೇಜುಗಳ ಅಧಿಕಾರಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
(ವರದಿ: ಮುರಳೀಧರ್ ನಾಡಿಗೇರ್, ಹೊಸಪೇಟೆ)
















