ನವದೆಹಲಿ: ಕಾಂಗ್ರೆಸ್ ಹಾಗೂ ಎಡಪಕ್ಷಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ರಕ್ತ ಹೊಂದಿರುವ ಯಾರೂ ಸಹ ಬಾಲಾಕೋಟ್ ದಾಳಿಯನ್ನು ಸಂಶಯಿಸುವುದಿಲ್ಲ ಎಂದಿದ್ದಾರೆ.
ನೋಯ್ಡಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಜೈಷ್ ಉಗ್ರ ಸಂಘಟನೆಯ ವಿರುದ್ಧ ಭಾರತ ಬಾಲಾಕೋಟ್’ನಲ್ಲಿ ನಡೆಸಿದ ದಾಳಿಯನ್ನು ಭಾರತೀಯ ರಕ್ತವಿದ್ದವರು ಸಂಶಯಿಸುವುದಿಲ್ಲ. ಬದಲಾಗಿ ಅದನ್ನು ಬೆಂಬಲಿಸುತ್ತಾರೆ ಎಂದರು.
ಮುಂಬೈ ದಾಳಿಯ ನಂತರ ನಮ್ಮ ಸೇನಾಪಡೆಗಳು ಉಗ್ರರ ವಿರುದ್ಧ ಪ್ರತೀಕಾರಕ್ಕೆ ಸಿದ್ಧವಾಗಿದ್ದವು. ಆದರೆ ಹಿಂದಿನ ಯುಪಿಎ ಸರ್ಕಾರ ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಸೇನಾಪಡೆಗಳು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
2016ರಲ್ಲಿ ಉರಿ ಉಗ್ರ ದಾಳಿಯ ನಂತರ ನಾವು ಮೊದಲ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಉಗ್ರರಿಗೆ ಪಾಠ ಕಲಿಸಿದೆವು. ಭಾರತ ಈಗ ಹೊಸ ರೀತಿ ಮತ್ತು ನೀತಿಯೊಂದಿಗೆ ಕೆಲಸ ಮಾಡುತ್ತಿದೆ ಎಂದರು.

















