ಕಲ್ಪ ಮೀಡಿಯಾ ಹೌಸ್ | ಕಲ್ಮನೆ(ಶಿಕಾರಿಪುರ) |
ಅಣಬೆ ಬೆಳೆಗಾರಿಕೆಯಲ್ಲಿ ಅಲ್ಪ ಹೂಡಿಕೆಯಿಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಡಾ.ಶಿಲ್ಪ ಹೇಳಿದರು.
ಕಲ್ಮನೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಅಂತಿಮ ವರ್ಷದ ಬಿಎಸ್’ಸಿ(ಹಾನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಅಣಬೆ ಬೇಸಾಯ ಮಹತ್ವದ ಕುರಿತು ಗುಂಪು ಚರ್ಚೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳು ಅಣಬೆ ಬೆಳೆಗಾರಿಕೆಯ ವೈಜ್ಞಾನಿಕ ವಿಧಾನಗಳು, ಪೋಷಕಾಂಶಗಳ ಮಹತ್ವ, ಅಲ್ಪ ಹೂಡಿಕೆಯಿಂದ ಹೆಚ್ಚಿನ ಲಾಭ ಗಳಿಸಬಹುದಾದ ಕೃಷಿ ಪರ್ಯಾಯವೆಂದು ಅದರ ಪ್ರಾಮುಖ್ಯತೆ ಕುರಿತು ವಿವರಿಸಿದರು.
ಅಣಬೆ ಬೆಳೆಯಲು ಅಗತ್ಯವಾದ ತಾಪಮಾನ, ತೇವಾಂಶ, ಬೆಳವಣಿಗೆಯ ಅವಧಿ ಹಾಗೂ ಮಾರುಕಟ್ಟೆ ಅವಕಾಶಗಳ ಬಗ್ಗೆ ರೈತರಿಗೆ ಸವಿಸ್ತಾರ ಮಾಹಿತಿ ನೀಡಲಾಯಿತು.
ಇದೇ ವೇಳೆ ವಿದ್ಯಾರ್ಥಿಗಳು ಅಣಬೆ ಬ್ಯಾಗ್ ತುಂಬುವ ವಿಧಾನ ಪ್ರದರ್ಶನವನ್ನು ನೀಡಿ, ಭತ್ತದ ಹುಲ್ಲು ಮತ್ತು ಬೀಜಗಳನ್ನು ಬಳಸಿ ಬ್ಯಾಗ್ಗಳನ್ನು ಹೇಗೆ ತುಂಬಬೇಕು, ಹೇಗೆ ಕಟ್ಟಬೇಕು ಹಾಗೂ ಬೆಳವಣಿಗೆಗೆ ಸೂಕ್ತವಾದ ಪರಿಸರವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿದರು.
ಈ ಪ್ರದರ್ಶನವನ್ನು ರೈತರು ಆಸಕ್ತಿಯಿಂದ ವೀಕ್ಷಿಸಿದರು. ಅಣಬೆ ಬೆಳೆಗಾರಿಕೆ ಕುರಿತು ಹಲವು ಪ್ರಶ್ನೆಗಳನ್ನು ಕೇಳಿ ತಮ್ಮ ಸಂಶಯಗಳನ್ನು ನಿವಾರಿಸಿಕೊಂಡರು.
ಆಹಾರ ವಿಜ್ಞಾನ ವಿಭಾಗದ ಡಾ. ಜ್ಯೋತಿ ರಾಥೋಡ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ರೈತರಿಗೆ ಅಣಬೆ ಬೆಳೆಗಾರಿಕೆ ಮನೆಯಲ್ಲೇ ಪ್ರಾರಂಭಿಸಬಹುದಾದ ಸಣ್ಣಮಟ್ಟದ ಉದ್ಯಮವಾಗಿದ್ದು, ಇದರಿಂದ ಮಹಿಳೆಯರು ಹಾಗೂ ಯುವಕರು ಸ್ವಾವಲಂಬಿಯಾಗಿ ಮುಂದುವರೆಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ವೇಳೆ ಕಲ್ಮನೆ ಗ್ರಾಮಸ್ಥರಾದ ಪುಷ್ಪ, ಶಾರದಾ, ರೇಖಾ, ವೀಣಾ , ನಾಗರಾಜ್ ಹಾಗೂ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















