ಕೊಚ್ಚಿ: ಕೇರಳ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೋ ಮುಳಕಲ್ ವಿರುದ್ಧ ಸಾಕ್ಷಿ ಹೇಳಿದ್ದ ಪಾದ್ರಿಯೊಬ್ಬರು ಅನಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇಂದು ಅವರ ಮೃತದೇಹ ಪತ್ತೆಯಾಗಿದೆ.
ಪ್ರಕರಣದಲ್ಲಿ ಫ್ರಾಂಕೋ ವಿರುದ್ಧ ಸಾಕ್ಷಿ ಹೇಳಿದ್ದ ಕುರಿಯಕೋಸ್ ಕಟ್ಟುಥಾರ ಎನ್ನುವ ಪಾದ್ರಿಯ ಮೃತದೇಹ ಜಲಂಧರ್ ಬಳಿಯ ಚರ್ಚ್ನಲ್ಲಿ ಇಂದು ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇನ್ನು ಈ ಕುರಿತಂತೆ ಮಾತನಾಡಿರುವ ಕುರಿಯಕೋಸ್ ಅವರ ಸಹೋದರ ಜೋಸ್, ನಮ್ಮ ಸಹೋದರನ ಸಾವಿನ ಹಿಂದೆ ದೊಡ್ಡ ಪಿತೂರಿ ಇದೆ. ಫ್ರಾಂಕೋ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೇ, ನಮ್ಮ ಸಹೋದರ ಆತ್ಮಹತ್ಯೆಗೆ ಶರಣಾಗುವವರಲ್ಲ. ತಪ್ಪು ಚಟುವಟಿಕೆ ನಡೆಸಿದ್ದ ಬಿಷಪ್ ಫ್ರಾಂಕೋ ಮುಲಕ್ಕಳ್ ವಿರುದ್ಧ ಧೈರ್ಯ ತೋರಿ ಹೇಳಿಕೆ ನೀಡಿದ್ದರು. ಬಳಿಕ ಸಾಕಷ್ಟು ಬೆದರಿಕೆ ಕರೆಗಳು ಬರಲಾರಂಭಿಸಿದ್ದವು. ಹಲವಾರು ಕ್ರೈಸ್ತ ಸನ್ಯಾಸಿಯರು ಫಾದರ್ ಕುರಿಯಾಕೋಸೆ ಬಳಿ ತಾವು ಫ್ರಾಂಕೋ ಅವರಿಂದಾಗಿ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ನೋವು ತೋಡಿಕೊಂಡಿದ್ದರು.
ಪೊಲೀಸರು ಕುರಿಯಕೋಸ್ ಅವರ ಶವವನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.















