ರಾಣಿಬೆನ್ನೂರು: ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ರಾಣೆಬೆನ್ನೂರು ಕ್ಷೇತ್ರಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಈ. ಕಾಂತೇಶ್ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಎನ್ನಲಾಗಿದೆ.
ಇಂತಹ ವಿಚಾರ ಪಕ್ಷದ ಮೊಗಸಾಲೆಯಲ್ಲಿ ಹರಿದಾಡುತ್ತಿದ್ದು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ವಲಯದಲ್ಲಿ ಮಾತ್ರ ಕಾಂತೇಶ್’ಗೆ ಟಿಕೆಟ್ ನೀಡುವಂತೆ ವ್ಯಾಪಕ ಒತ್ತಡ ಕೇಳಿಬಂದಿದೆ.
ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಐತಿಹಾಸಿಕ ಗೆಲುವು ಸಾಧಿಸಿದ್ದರು ಕಾಂತೇಶ್. ಜಿಪಂ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀರಿಸಿದ ನಂತರ ಜಿಲ್ಲೆಯಾದ್ಯಂತ ಪಾದರಸದಂತೆ ಸಂಚಾರ ಮಾಡುತ್ತಾ, ನಿರಂತರವಾಗಿ ಸಭೆಗಳನ್ನು ನಡೆಸುತ್ತಾ ತಮಗೆ ದೊರೆತ ಅಧಿಕಾರದ ಮೂಲಕ ಜನಹಿತಕ್ಕಾಗಿ ಶ್ರಮಿಸುತ್ತಿದ್ದಾರೆ.
ದಲಿನಿಂದಲೂ ರಾಣೆಬೆನ್ನೂರು ಕ್ಷೇತ್ರದ ಜೊತೆಯಲ್ಲಿ ಅವಿನಾಭಾವ ಸಂಬಂಧ ಹೊಂದಿರುವ ಕಾಂತೇಶ್ ಅಲ್ಲಿ ಅಪಾರ ಅಭಿಮಾನಿಗಳು ಹೊಂದಿದ್ದು, ವ್ಯಾಪಕ ಬೆಂಬಲ ಹೊಂದಿದ್ದಾರೆ. ತಮ್ಮ ಜನಪರ ಕೆಲಸಗಳು, ಕಷ್ಟ ತೋಡಿಕೊಂಡು ಬಂದವರಿಗೆ ಸಹಾಯ ಮಾಡುವ ಮೂಲಕವೇ ಶಿವಮೊಗ್ಗ ಮಾತ್ರವಲ್ಲದೇ ರಾಣೆಬೆನ್ನೂರಿನಲ್ಲೂ ಸಹ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಕಾಂತೇಶ್. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿ ವಲಯದಿಂದ ಕಾಂತೇಶ್’ಗೆ ಟಿಕೇಟ್ ನೀಡುವಂತೆ ತೀವ್ರ ಒತ್ತಡ ಕೇಳಿಬಂದಿದ್ದು, ಅವಕಾಶ ದೊರೆತರೆ ಇವರ ಗೆಲುವು ಬಹುತೇಕ ನಿಶ್ಚಿತ ಎನ್ನಲಾಗಿದೆ.
ಅತೃಪ್ತರ ಪ್ರಕರಣದ ತೀರ್ಪಿನ ಮೇಲೆ ನಿರ್ಧಾರ:
ಇನ್ನೊಂದೆಡೆ ಉಪಚುನಾವಣೆಯಲ್ಲಿ ಅತೃಪ್ತ ಶಾಸಕರು ಸ್ಪರ್ಧಿಸುವಂತಿಲ್ಲ ಎಂದು ರಾಜ್ಯ ಚುನಾವಣಾಧಿಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಉಪಚುನಾವಣೆಯನ್ನು ಮುಂದೂಡುವಂತೆ ಕೋರಿ ನಾಳೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಲಿದೆ.
ಅನರ್ಹಗೊಂಡ ಕರ್ನಾಟಕದ ಒಟ್ಟು 15 ಶಾಸಕರು ಉಪ ಚುನಾವಣೆಯನ್ನು ಮುಂದೂಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದ್ದು, ಇದೇ ಕಾರಣಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ತುರ್ತು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಉಪಚುನಾವಣೆಗೆ ನಾಳೆ ಕೋರ್ಟ್’ನಲ್ಲಿ ತಡೆ ದೊರೆತರೆ ಕಾಂತೇಶ್ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಲಿದೆ. ಒಂದು ವೇಳೆ ತಡೆ ದೊರೆಯದೇ, ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದಾದರೆ ಕಾಂತೇಶ್ ಸ್ಪರ್ಧೆ ಬಹುತೇಕ ನಿಶ್ಚಿತ ಎಂಬ ಮಾತುಗಳು ಕೇಳಿಬರುತ್ತಿವೆ.
















