ನವದೆಹಲಿ: ರಾಫೆಲ್ ಡೀಲ್ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕಿಸುತ್ತಿರುವ ಬೆನ್ನಲ್ಲೇ ತಿರುಗಿಬಿದ್ದಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಕೈ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಆಗ ಬೊಫೋರ್ಸ್ ಹಗರಣದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಆದರೆ, ಈಗ ರಾಫೆಲ್ ಡೀಲ್’ನಿಂದಾಗಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಸತ್ಯಕ್ಕೆ ಹೆದರುತ್ತದೆ. ರಾಷ್ಟ್ರೀಯ ಭದ್ರತೆ ಅತ್ಯಂತ ಮಹತ್ವದ್ದು. ಅಂಕಿ, ಅಂಶಗಳಿಂದ ನಾವು ಓಡಿ ಹೋಗುತ್ತಿಲ್ಲ ಎಂದು ಕಟಕಿಯಾಡಿದರು.
ರಾಫೇಲ್ ಡೀಲ್ ಅನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನನೆಗುದಿಗೆ ಹಾಕಿತ್ತು. ಕಾರಣ ಕಾಂಗ್ರೆಸ್’ಗೆ ಲಂಚದ ಹಣ ಸಿಕ್ಕಿರಲಿಲ್ಲ. ಅಂತೆಯೇ ಅದು ರಾಷ್ಟ್ರದ ಭದ್ರತೆಯನ್ನು ಕಡೆಗಣಿಸಿತು. ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಯಾವುದೇ ದಲ್ಲಾಳಿಗಳಿಲ್ಲದೆ ರಕ್ಷಣಾ ಪರಿಕರಗಳನ್ನು ಖರೀದಿಸಿದೆ. ರಫೇಲ್ ನಿರ್ಧಾರವು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ತೆಗೆದುಕೊಂಡ ನಿರ್ಧಾರವಾಗಿದೆ ಎಂದು ದೂರಿದರು.
ಮೋದಿ ನೇತೃತ್ವ ಸರ್ಕಾರ ಈಗ ಮಹತ್ವದ ಕ್ರಮ ಕೈಗೊಂಡಿದ್ದು, ಅದರಂತೆ ಸೆಪ್ಟೆಂಬರ್ 2019ರಲ್ಲಿ ಮೊದಲ ರಾಫೆಲ್ ಯುದ್ಧ ವಿಮಾನದ ಡೆಲಿವೆರಿ ಆಗಲಿದೆ. ನಂತರ 2022ರ ವೇಳೆಗೆ ಎಲ್ಲಾ 36 ವಿಮಾನಗಳು ಡೆಲಿವೆರಿ ಆಗಲಿದೆ. 14 ತಿಂಗಳಲ್ಲಿ ರಾಫೆಲ್ ಒಪ್ಪಂದದ ಮಾತುಕತೆ ಮುಗಿದಿದೆ ಎಂದವರು ಲೋಕಸಭೆಗೆ ತಿಳಿಸಿದ್ದಾರೆ.

















