ಕಲ್ಪ ಮೀಡಿಯಾ ಹೌಸ್
ಸಾಗರ: ಕೊರೋನಾ ಮತ್ತೆ ಎರಡನೇ ಅಲೆ ಪ್ರಾರಂಭಿಸಿದ್ದು, ಇದರ ಹಿನ್ನೆಲೆಯಲ್ಲಿ ತಾಲೂಕಿನ ಆನಂದಪುರ ಸಮೀಪದ ಶಿವಗಂಗೆಯಲ್ಲಿ ಕ್ಯಾನ್ಸರ್ ಪೀಡಿತರಿಗೆ ನೀಡುತ್ತಿದ್ದ ನಾಟಿ ಔಷಧಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಇದನ್ನು ಅರಿಯದೆ ದೂರದ ಮಹಾರಾಷ್ಟ್ರ, ಕೇರಳ, ತಮಿಳುನಾಡು, ತಿರುಪತಿ ಹಾಗೂ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ರೋಗಿಗಳಿಗೆ ಇಂದು ಶಾಕ್ ಕಾದಿತ್ತು.
ಕೊರೋನಾ ಈಗಾಗಲೇ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಆನಂದಪುರದ ಗ್ರಾಮಪಂಚಾಯತ್ ನೀಡಿರುವಂತಹ ನೋಟಿಸ್ನ ಅನುಸಾರ ಔಷಧಿ ಕೊಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಇದರ ಪರಿಣಾಮವಾಗಿ ದೂರದ ಊರಿನಿಂದ ಬಂದಂತಹ ರೋಗಿಗಳಿಗೆ ನಿರಾಶೆ ಉಂಟಾಯಿತು.
ಔಷಧಿ ಪಡೆಯಲು ಬಂದಿದ್ದ ರೋಗಿಗಳು ಆನಂದಪುರದ ಗ್ರಾಮ ಪಂಚಾಯಿತಿ ಎದುರು ಜಮಾಯಿಸಿದರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಹಾಗೂ ಸದಸ್ಯರುಗಳಿಗೆ ಔಷಧಿ ನೀಡುವಂತೆ ಒತ್ತಾಯಿಸಿದರು. ಆದರೆ ಇದಕ್ಕೆ ಮಣಿಯದ ಗ್ರಾಮಾಡಳಿತ ಕೊರೋನಾ ಸೋಂಕು ಮತ್ತೆ ಹೆಚ್ಚಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ತಾತ್ಕಾಲಿಕವಾಗಿ ಔಷಧಿಕೊಡುವುದನ್ನು ನಿಲ್ಲಿಸುವಂತೆ ನೋಟಿಸ್ ನೀಡಲಾಗಿದೆ ದಯಮಾಡಿ ಇಲ್ಲಿಂದ ಎಲ್ಲರೂ ಹೊರಡಿ ಎಂದು ತಿಳಿಸಿದರು.
ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಬಂದಂತಹ ರೋಗಿಗಳಿಗೆ ಸಮಾಧಾನದಿಂದ ವಾಪಸ್ ತೆರಳುವಂತೆ ಸೂಚಿಸಿದರು.
ಸಾವಿರಾರು ಕಿಲೋಮೀಟರ್ ದೂರದಿಂದ ಬಂದಿದ್ದ ರೋಗಿಗಳು ಬೇಸರದಿಂದ ವಾಪಸ್ ತೆರಳಿದರು.
ವರದಿ : ಪವನ್ ಕುಮಾರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post