ಕಲ್ಪ ಮೀಡಿಯಾ ಹೌಸ್ | ಸಾಗರ |
ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಿರುವ ಒಕ್ಕಲಿಗ ಮಠಾಧಿಪತಿಗಳ ಕೋರಿಕೆಯಂತೆ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಶೀಘ್ರವೇ ಸರ್ಕಾರದಿಂದ ಅನುಮತಿ ದೊರೆಯಲಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಹೇಳಿದರು.
Also Read: ಜಾರಕಿಹೊಳಿ ಸಿಡಿ ಪ್ರಕರಣದ ಕಾಣದ ಆ ಕೈ ಈಶ್ವರಪ್ಪನವರಿಗೂ ಮುಳುವಾಯಿತೇ?
ಅವರು ಸಾಗರದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಒಕ್ಕಲಿಗರ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಉದ್ಯಮಶೀಲತೆ, ಕೌಶಲ್ಯಾಧಾರಿತ ಸೇವೆ, ವಿಜ್ಞಾನ – ತಂತ್ರಜ್ಞಾನ, ಉತ್ಪಾದನೆ, ಮಾರುಕಟ್ಟೆ, ಶಿಕ್ಷಣ, ಆರೋಗ್ಯ ಇನ್ನು ಹತ್ತು ಹಲವು ವಿಷಯಗಳಲ್ಲಿ ಬೆಂಗಳೂರು ವಿಶ್ವದ ಭೂಪಟದಲ್ಲಿ ಗುರುತಿಸಲಾಗುತ್ತಿದೆ. ಇಂತಹ ಬೃಹತ್ ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡ ಅವರೆಂಬುದು ನಮ್ಮ ಸಮುದಾಯಕ್ಕೆ ಹೆಮ್ಮೆ. ಕೆಂಪೇಗೌಡರು ಕೋಟೆ – ಪೇಟೆಗಳನ್ನು ನಿರ್ಮಿಸಿ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದ ವ್ಯಾಪಾರ ವಹಿವಾಟು ನಡೆಸಲು ಪೂರಕ ವಾತಾವರಣ ನಿರ್ಮಿಸಿದ್ದರು. ಅವರ ನೆನಪು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರು ನಾಮಕರಣ ಮಾಡಲಾಗಿದೆ ಅಲ್ಲದೆ ವಿಮಾನ ನಿಲ್ದಾಣದ ಎದುರಿನ ವಿಶಾಲ ಆವರಣದಲ್ಲಿ ಕೆಂಪೇಗೌಡರ ದೇಶದ ಅತಿದೊಡ್ಡ ಪುತ್ಥಳಿಯನ್ನು ಜೂನ್ ತಿಂಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ದೇಶ ವಿದೇಶಗಳಲ್ಲಿರುವ ನಮ್ಮ ಸಮುದಾಯದ ಪ್ರತಿನಿಧಿಗಳು ಸಂಘಟಿತರಾಗಿ ನಾಡು ಕಟ್ಟುವ ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಸಂತಸ ಸಂಗತಿ. ಒಕ್ಕಲಿಗ ಸಮುದಾಯದವರ ಅಭಿವೃದ್ಧಿಗಾಗಿ ಸರ್ಕಾರವು ಈಗಾಗಲೇ ಒಕ್ಕಲಿಗರ ಅಭಿವೃದ್ಧಿ ಕಾರ್ಪೊರೇಷನ್ ಸ್ಥಾಪಿಸಿದ್ದು ಅವರ ಅಭಿವೃದ್ಧಿಗಾಗಿ ಕೆಲಸ ನಿರ್ವಹಿಸಲಿದೆ. ಪ್ರಸ್ತುತ ಈ ಕಾರ್ಪೊರೇಷನ್ ನಲ್ಲಿ 50ಕೋಟಿ ರೂ.ಗಳ ಅನುದಾನವಿದೆ ಎಂದ ಅವರು ನಾಡಿನ ಎಲ್ಲಾ ವರ್ಗದ ಜನರ ಸರ್ವಾಂಗೀಣ ವಿಕಾಸಕ್ಕೆ ಮತ್ತು ಅವರ ಆಶೋತ್ತರಗಳಿಗೆ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದರು.
ನಾಯಕತ್ವದ ಗುಣಗಳು ಒಕ್ಕಲಿಗ ಸಮುದಾಯಕ್ಕೆ ರಕ್ತಗತವಾಗಿ ಬಂದಿವೆ. ಯಾರೊಬ್ಬರೂ ಅಸಹಾಯಕವಾಗಬಾರದು. ನಾವು ಸ್ವಪ್ರಯತ್ನದಿಂದ ಸಮಾಜದಲ್ಲಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಸಮುದಾಯದ ಹಿರಿಯರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದಿಂದ ಉಜ್ವಲ ಭವಿಷ್ಯವಿದೆ. ಅಗತ್ಯಗಳಿಗೆ ಸಕಾಲದಲ್ಲಿ ಗುರುಗಳ ಮಾರ್ಗದರ್ಶನ ದೊರೆಯಲಿದೆ ಎಂದರು.
Also Read: ಏ.16ರಂದು ಗಾಯಕಿ ಸೂರ್ಯ ಗಾಯತ್ರಿ ಅವರಿಂದ ವಿಶೇಷ ಭಕ್ತಿ ಸಂಗೀತ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಮರಣಸಂಚಿಕೆ ಬಿಡುಗಡೆಗೊಳಿಸಿದ ನಂತರ ಮಾತನಾಡಿ, ಸಮಾಜದ ಎಲ್ಲಾ ಸ್ಥರದ ಜನರಿಗೆ ಬೇದ-ಭಾವ ತೋರದೆ ಅನ್ನ, ಅಕ್ಷರ, ಆಶ್ರಯ ನೀಡುತ್ತಿರುವ ಒಕ್ಕಲಿಗ ಮಠಾಧಿಪತಿಗಳ ಕಾರ್ಯ ಅಭಿನಂದನಾರ್ಹ ಎಂದರು.
ವಿಶ್ವಮಾನವ ಅದ್ಭುತ ಕಲ್ಪನೆ ಹೊಂದಿದ, ಸರ್ವರನ್ನು ಆಲಂಗಿಸಿಕೊಳ್ಳುವ ಸಮುದಾಯ ನಮ್ಮದು ಎಂದ ಅವರು ಅನ್ಯ ಧರ್ಮಗಳ ಬೆಳವಣಿಗೆಗೆ ಅವಕಾಶ ನೀಡಿದೆ ಮಾತ್ರವಲ್ಲ ಎಲ್ಲಾ ಧರ್ಮಗಳನ್ನು ಜೊತೆಗಿರಿಸಿಕೊಂಡುವ ಮುಂದೆ ಸಾಗುವ ಧರ್ಮ ನಮ್ಮದಾಗಿದೆ ಎಂದರು.
ಸಂಘಟನೆಗೆ ಭೌತಿಕ ರೂಪದ ಅಗತ್ಯವಿದೆ. ಅದಕ್ಕಾಗಿ ಸರ್ಕಾರ 30ಲಕ್ಷ ರೂ.ಗಳ ಸಹಾಯಧನ ನೀಡಿದೆ. ಸಂಘಟನೆ ಸಮರ ಸಾರುವುದಕ್ಕಲ್ಲ ಬದಲಾಗಿ ಸ್ನೇಹ ಮತ್ತು ಸಹಾಯ ಹಸ್ತಕ್ಕೆ ಎಂದರು.
ಸಂಘಟನೆಯಿಂದ ಶಿಕ್ಷಣ ಮತ್ತಿತರ ವಿಷಯಗಳಗೆ ಪ್ರೋತ್ಸಾಹ ನೀಡಲಾಗುತ್ತಿದೆ. ವೈಯಕ್ತಿಕ ಬೆಳವಣಿಗೆಗೆ ವಿಫುಲ ಅವಕಾಶಗಳಿವೆ. ಕೀಳಿರಿಮೆ ಆತಂಕ ಬಿಟ್ಟು ಇರುವ ಅವಕಾಶವನ್ನು ಬಳಸಿಕೊಂಡು ಬೆಳೆಯಬೇಕು ಎಂದರು.
ಅವಕಾಶ ಮತ್ತು ಸೌಲಭ್ಯಗಳಿಗಾಗಿ ಮತಾಂತರದ ಪ್ರಕ್ರಿಯೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಮತಾಂತರ ಗಂಭೀರವಾದ ವಿಷಯ ಹಾಗೂ ಭಯಾನಕ ಸ್ಥಿತಿ ಎಂದ ಅವರು, ಹಿಂದೂ ಸಮಾಜದ ಉಳಿವಿಗೆ, ಮತಾಂತರ ನಿಯಂತ್ರಣಕ್ಕೆ ಮಠಾಧಿಪತಿಗಳು ಮುಂದಾಳತ್ವ ವಹಿಸಿಕೊಳ್ಳಬೇಕೆಂದರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಶಾಸಕ ಹರತಾಳು ಹಾಲಪ್ಪ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಒಕ್ಕಲಿಗರ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಆರ್.ಎಂ.ಮಂಜುನಾಥಗೌಡ, ಡಾ॥ಅಂಜನಪ್ಪ, ಧರ್ಮೇಶ್ ಸಿರಿಬೈಲು, ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post