ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಆಧುನಿಕ ಕನ್ನಡ ಸಾಹಿತ್ಯಕ್ಕೆ ‘ಇಂಗ್ಲಿಷ್ ಗೀತಗಳು’ ಕೃತಿಯ ಮೂಲಕ ನವಚೈತನ್ಯ ತುಂಬಿದವರು ಬಿಎಂಶ್ರೀ. ಈ ಕೃತಿಗೆ ಕನ್ನಡದ ಸಾಂಸ್ಕೃತಿಕ ಜಗತ್ತಿನಲ್ಲಿ ಐತಿಹಾಸಿಕ ಮಹತ್ವವಿದೆ ಎಂದು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಮಣ್ಯ ಅಭಿಪ್ರಾಯಪಟ್ಟರು.
‘ಇಂಗ್ಲಿಷ್ ಗೀತಗಳು’ ಕೃತಿಗೆ ನೂರು ವರ್ಷ ತುಂಬಿದ ಸವಿ ನೆನಪಿಗೆ ಕುವೆಂಪು ವಿಶ್ವವಿದ್ಯಾಲಯದ Kuvempu University ಕನ್ನಡ ಭಾರತಿ ವಿಭಾಗವು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ‘ಬಿಎಂಶ್ರೀ ಮಾರ್ಗ’ ಕುರಿತು ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನವೋದಯ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದು, ತನ್ಮೂಲಕ ಅಂದಿನ ಉದಯೋನ್ಮುಖ ಬರಹಗಾರರಿಗೆ ಹೊಸ ಮಾರ್ಗ ಹಾಕಿಕೊಟ್ಟವರು ಬಿಎಂಶ್ರೀ. ನಂತರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಹೇಗೆ ವಿಕಸನ ಹೊಂದಿತು ಎಂಬುದು ಇತಿಹಾಸ.
ಕನ್ನಡ ಸಾಹಿತ್ಯ ಪರಂಪರೆಯ ಬಗ್ಗೆ ಮಾತನಾಡಿ, ಪರಂಪರೆಯ ಬಗ್ಗೆ ಅವಜ್ಞೆ ಸರಿಯಾದ ಕ್ರಮವಲ್ಲ. ಸದ್ಯದ ಸವಾಲುಗಳು ಮತ್ತು ಬಿಕ್ಕಟ್ಟುಗಳ ನಿರ್ವಹಣೆಗೆ ಪರಂಪರೆಯ ಜೊತೆಗಿನ ಅನುಸಂಧಾನ ಅತ್ಯಗತ್ಯ. ಕನ್ನಡ ಸಾಹಿತ್ಯಕ್ಕೆ 12ನೇ ಶತಮಾನ ಮತ್ತು 20ನೇ ಶತಮಾನ ಪ್ರಮುಖವಾದ ಕಾಲಘಟ್ಟಗಳು. ವಚನಚಳವಳಿ ಸಂಸ್ಕೃದಿಂದ ಬಿಡುಗಡೆ ನೀಡಿದರೆ, ವಸಾಹುಶಾಹಿ ಧೋರಣೆಯಿಂದ ಮುಕ್ತಿ ದೊರಕಿದ್ದು 20ನೇ ಶತಮಾನದಲ್ಲಿ ಎಂದು ಪ್ರತಿಪಾದಿಸಿದರು.
Also read: ದೊಡ್ಡಬಳ್ಳಾಪುರ: ಜು.13ರಂದು ಗುರು ಪೌರ್ಣಮಿ ನಿಮಿತ್ತ ರಾಯರ ಸನ್ನಿಧಿಯಲ್ಲಿ ವಿಶೇಷ ಕಾರ್ಯಕ್ರಮ
ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳು ಐತಿಹಾಸಿಕವಾಗಿ ಕರ್ನಾಟಕ ಮತ್ತು ಕನ್ನಡ ಅಸ್ಮಿತೆಗೆ ಗುರುತರ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಅದು ವಚನ ಸಾಹಿತ್ಯ ಇರಬಹುದು, ನವೋದಯ, ನವ್ಯ, ದಲಿತ-ಬಂಡಾಯ ಚಳುವಳಿಗಳಿರಬಹುದು, ಕನ್ನಡ ಸಾಹಿತ್ಯದ ಕೃಷಿ, ಕರ್ನಾಟಕದ ಸಾಂಸ್ಕೃತಿಕ ಜಗತ್ತಿಗೆ ಅನನ್ಯವಾದ ಕೊಡುಗೆ ನೀಡಿದೆ ಎಂದರು.
ನಂತರ ನಡೆದ ಗೋಷ್ಠಿಗಳಲ್ಲಿ ಡಾ. ಬೈರಮಂಗಳ ರಾಮೇಗೌಡ, ಡಾ. ಗೀತಾ ವಸಂತ, ಡಾ. ಕೆ. ಸಿ. ಶಿವಾರೆಡ್ಡಿ, ಡಾ. ಎ. ರಘುರಾಂ ಬಿಎಂಶ್ರೀ ಸಾಹಿತ್ಯದ ವಿವಿಧ ಆಯಾಮಗಳ ಬಗ್ಗೆ ವಿಚಾರ ಮಂಡಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ. ವಿ. ವಸಂತಕುಮಾರ್ ಮಾತನಾಡಿದರು. ಕನ್ನಡ ಭಾರತಿ ನಿರ್ದೇಶಕ ಡಾ. ಜಿ. ಪ್ರಶಾಂತ ನಾಯಕ, ಪ್ರೊ. ಶಿವಾನಂದ ಕೆಳಗಿನಮನಿ, ಡಾ. ನೆಲ್ಲಿಕಟ್ಟೆ ಸಿದ್ದೇಶ್, ಮಾರ್ಷಲ್ ಶರಾಂ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post