ಕಲ್ಪ ಮೀಡಿಯಾ ಹೌಸ್
ಶಂಕರಘಟ್ಟ: ಅಸಮಾನತೆ, ಅಭಿವೃದ್ಧಿ ಕುಂಠಿತತೆ, ನಿರುದ್ಯೋಗದಂತಹ ಸಮಾಜದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳುವ ಮೂಲಕ ವಿಶ್ವವಿದ್ಯಾಲಯಗಳು ಮತ್ತು ಸಂಶೋಧಕರು ಸಮಾಜಹಿತದ ಜವಾಬ್ದಾರಿ ನಿಭಾಯಿಸಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ವಿವಿಯ ಸಮಾಜಶಾಸ್ತ್ರ ವಿಭಾಗವು ಮೈಸೂರಿನ ಸಮೃದ್ಧಿ ಫೌಂಡೇಶನ್ ಜತೆಗೂಡಿ ಸಮಾಜ ವಿಜ್ಞಾನ ವಿಭಾಗಗಳ ಪಿಹೆಚ್ಡಿ ವಿದ್ಯಾರ್ಥಿಗಳಿಗೆ ಸಂಶೋಧನಾ ವೈಧಾನಿಕತೆ ಕುರಿತಂತೆ ಕನ್ನಡದಲ್ಲಿ ಜುಲೈ 1ರಿಂದ 11ರವರೆಗಿನ 11 ದಿನಗಳ ಆನ್ಲೈನ್ ಕಾರ್ಯಾಗಾರ ಸರಣಿಯನ್ನು ಆಯೋಜಿಸಿದ್ದು, ಬುಧವಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೈಯಕ್ತಿಕ ಹಿತಾಸಕ್ತಿ ಅಥವಾ ಕೇವಲ ಕೆಲವರ ಲಾಭಕ್ಕಾಗಿ ಸಂಶೋಧನೆ ಕೈಗೊಳ್ಳುವಂತದ್ದಲ್ಲ. ವಸ್ತುನಿಷ್ಠ ಮಾದರಿಯಲ್ಲಿ ಮಾತ್ರ ನಡೆಸುವ ಸಂಶೋಧನೆಯ ಕೇಂದ್ರ ಉದ್ದೇಶವು ಸಮಾಜದ ಉದ್ಧಾರವಾಗಿರುತ್ತದೆ ಎಂದು ತಿಳಿಸಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಿರುವಂತೆ ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ನೊಂದಾವಣಿ ಮಾಡಿಕೊಳ್ಳುವ ವಿಧ್ಯಾರ್ಥಿಗಳ ಸಂಖ್ಯೆ ಶೇ.26ರಷ್ಟಿದೆ. ಪಿಹೆಚ್ಡಿ ಸೇರಿದಂತೆ ವಿವಿಧ ಸಂಶೋಧನೆಗಳಿಗೆ ಮುಂದಾಗುವವರ ಪಾಲು ಶೇ.5 ಎಂಬುದು ವಿಷಾದನೀಯ ಸಂಗತಿ.
ವಿವಿಧ ಭಾಷೆ, ವರ್ಗ, ಸಮುದಾಯ, ಜಾತಿ-ಧರ್ಮಗಳಿರುವ ಭಾರತದಂತಹ ವಿಸ್ತಾರವಾದ ದೇಶದಲ್ಲಿ ಸಾಮಾಜಿಕ ವಿಷಯಗಳು ಸರಳವಾಗಿರುವುದಿಲ್ಲ. ಇವುಗಳ ಸೂಕ್ತ ಅರ್ಥೈಸುವಿಕೆ, ಅಧ್ಯಯನ, ಸಮಸ್ಯೆಗಳ ಪರಿಹಾರೋಪಾಯಕ್ಕಾಗಿ ಸಮಾಜಹಿತದ್ದೇಶದ ಸಂಶೋಧನೆಯ ಅಗತ್ಯವಿದೆ. ವಿದ್ಯಾರ್ಥಿಗಳು, ಸಂಶೋಧಕರು ತುರ್ತಾಗಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ ವಿಭಾಗದ ಪ್ರೊ. ಎ. ರಾಮೇಗೌಡ, ಪ್ರೊ. ಎಂ. ಗುರುಲಿಂಗಯ್ಯ, ಪ್ರೊ. ಅಂಜನಪ್ಪ, ಪ್ರೊ. ಚಂದ್ರಶೇಖರ್ ಹಾಗೂ ಸಮೃದ್ಧಿ ಫೌಂಡೇಶನ್ನ ಕಾರ್ಯದರ್ಶಿ ಡಾ. ಶಾಂತಿ ಹಾಜರಿದ್ದರು.
11 ದಿನಗಳ ಕಾರ್ಯಗಾರದಲ್ಲಿ ಪ್ರೊ. ಮುಝಫರ್ ಅಸ್ಸಾದಿ, ಪ್ರೊ.ಇಂದಿರಾ, ಡಾ. ಕೆ. ಜಿ. ಗಾಯತ್ರಿ ದೇವಿ, ಪ್ರೊ. ಛಾಯ ಕೆ. ದೇಗಾಂವಕರ್, ಪ್ರೊ. ಸಿ.ಎ. ಸೋಮಶೇಖರಪ್ಪ, ಪ್ರೊ. ಟಿ.ಬಿ.ಬಿ.ಎಸ್.ವಿ. ರಮಣಯ್ಯ ಸೇರಿದಂತೆ ಸಮಾಜ ವಿಜ್ಞಾನ ವಿಷಯಗಳ ೧೫ ಕ್ಕೂ ಹೆಚ್ಚು ತಜ್ಞರು ವಿವಿಧ ಸಂಶೋಧನಾ ವಿಷಯಗಳ ಮೇಲೆ ಉಪನ್ಯಾಸ ನೀಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post