ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಮಹಿಳೆಯರ ಜೀವನದಲ್ಲಿ ಮದುವೆ ಮತ್ತು ಉದ್ಯೋಗ ಎರಡು ಮುಖ್ಯ ದಾರಿಗಳಾಗಿವೆ. ಬಹಳಷ್ಟು ಮಹಿಳೆಯರು ಉನ್ನತ ಶಿಕ್ಷಣ ಪಡೆದಿದ್ದರೂ ಮದುವೆ ಅಥವಾ ಹೆರಿಗೆಯಾದ ಬಳಿಕ ಉದ್ಯೋಗವನ್ನು ಮೊಟಕುಗೊಳಿಸುತ್ತಿರುವುದು ವಿಷಾದನೀಯ ಎಂದು ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯ ವೈದ್ಯೆ ಡಾ. ಅಪರ್ಣಾ ಶ್ರೀವತ್ಸ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಬುಧವಾರ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ಎಸ್ಎಲ್ಸಿ, ಪಿಯುಸಿ, ಮೆಡಿಕಲ್, ಎಂಜಿನಿಯರಿಂಗ್ ನಂತಹ ವೃತ್ತಿಪರ ಕೋರ್ಸ್ ಗಳ ಪರೀಕ್ಷೆಯ ಫಲಿತಾಂಶಗಳಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿರುತ್ತಾರೆ. ಆದರೆ ಪಡೆದ ಶಿಕ್ಷಣವನ್ನು ಸದುಪಯೋಗ ಮಾಡಿಕೊಂಡು ಉದ್ಯೋಗ ಗಿಟ್ಟಿಸಿಕೊಳ್ಳುವವರ ಸಂಖ್ಯೆ ಮಾತ್ರ ಅಲ್ಪಪ್ರಮಾಣದಲ್ಲಿದೆ ಎಂದರು.
Also read: ಸಾಧಕಿಯರನ್ನು ಗುರುತಿಸಿ, ಬೆಳೆಸಿ ಪ್ರೋತ್ಶಾಹಿಸಬೇಕು: ಶಂಕರ್ ಶೇಟ್ ಅಭಿಪ್ರಾಯ
ಒಟ್ಟು ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳುವವರ ಪೈಕಿ ಶೇ. 50ರಷ್ಟು ಮಹಿಳೆಯರಿರುತ್ತಾರೆ. ಆದರೆ ವೈದ್ಯಕೀಯ ಶಿಕ್ಷಣದಲ್ಲಿ ಉದ್ಯೋಗ ಪಡೆದುಕೊಳ್ಳುವ ಮಹಿಳೆಯರ ಸಂಖ್ಯೆ ಮಾತ್ರ ಶೇ. 20ರಷ್ಟಿದೆ. ಪುರುಷನಿಗೆ ಉದ್ಯೋಗ, ಮಹಿಳೆಗೆ ಮನೆ ಜವಾಬ್ದಾರಿ ಎಂಬ ಹಳೇ ಸಂಪ್ರದಾಯಕ್ಕೆ ನಮ್ಮ ಸಮಾಜ ಇನ್ನೂ ಕಟ್ಟುಬಿದ್ದಿದೆ. ಕೆಲವೇ ಪ್ರಮಾಣದಲ್ಲಿರುವ ಉದ್ಯೋಗಸ್ಥ ಮಹಿಳೆಯರು ಕಚೇರಿ ಜೊತೆಗೆ ಮನೆಕೆಲಸ ನಿರ್ವಹಣೆಯ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಪುರುಷರು ಮನೆಕೆಲಸಗಳನ್ನು ಹಂಚಿಕೊಳ್ಳುವ, ಉದ್ಯೋಗ ನಿರ್ವಹಣೆಗೆ ಬೆಂಬಲವಾಗಿ ನಿಲ್ಲುವ ಧೋರಣೆಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆಯಿತ್ತರು.
ಉದ್ಯೋಗಸ್ಥ ಮಹಿಳೆಯರು ಕಚೇರಿ ಮತ್ತು ಮನೆಯ ಕೆಲಸಗಳೆರಡರ ಒತ್ತಡದಲ್ಲಿ ಆರೋಗ್ಯದ ಕಡೆಗೆ ಗಮನ ನೀಡುತ್ತಿಲ್ಲ. ಇದರಿಂದ ಅವರಲ್ಲಿ ಅನ್ನನಾಳ, ಜಠರ, ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್ಗಳು ಬರುವ ಸಾಧ್ಯತೆಗಳು ಅಧಿಕವಿವೆ. ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚಾಗುತ್ತಿದ್ದು, ಊತ, ಗಡ್ಡೆ, ರಕ್ತಸ್ರಾವ, ಸ್ತನ ಕ್ಯಾನ್ಸರ್ನ ಸಾಮಾನ್ಯ ಲಕ್ಷಣವಾಗಿವೆ. ಆದ್ದರಿಂದ ಮಹಿಳೆಯರು ದೇಹದಲ್ಲಿ ನಡೆಯುವ ಬದಲಾವಣೆಗಳ ಕುರಿತು ಸೂಕ್ಷ್ಮತೆ ತೋರಬೇಕು ಹಾಗೂ ಅಗತ್ಯವಿದ್ದಾಗ ನಿರ್ಲಕ್ಷಿಸದೇ ಸೂಕ್ತ ವೈದ್ಯರನ್ನು ಸಂಪರ್ಕಿಸಬೇಕು ಎಂದರು.
30 ವಯಸ್ಸಿನ ನಂತರ ಕ್ಯಾನ್ಸರ್ ಬರುವ ಸಾಧ್ಯತೆಗಳಿರುತ್ತವೆ. ಆಲ್ಕೊಹಾಲ್, ತಂಬಾಕು, ಆಹಾರ ಶೈಲಿ
ಕ್ಯಾನ್ಸರ್ಗೆ ಮುಖ್ಯ ಕಾರಣವಾಗಿವೆ. ಕಾರ್ಪೋರೇಟ್ ಕಂಪನಿಗಳು ಇವುಗಳ ಬಳಕೆ ಉತ್ತೇಜಿಸುತ್ತಿವೆ ಆದರೆ ಮಹಿಳೆಯರು ಹೆಚ್ಚು ತರಕಾರಿಗಳ ಬಳಕೆ, ನಿಯಮಿತ ಆಹಾರ ಸೇವನೆ, ವ್ಯಾಯಾಮ ಸೇರಿದಂತೆ ಶಿಸ್ತಿನ ಜೀವನಶೈಲಿ ರೂಢಿಸಿಕೊಳ್ಳುವುದು ಉತ್ತಮ ಎಂದು ಸಲಹೆಯಿತ್ತರು.
ವಿವಿಯ ಕುಲಸಚಿವೆ ಪ್ರೊ. ಗೀತಾ ಸಿ ಮಾತನಾಡಿ, ವೇದಗಳಲ್ಲಿ, ಸಾಹಿತಿಗಳ ಕವಿತೆಗಳಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ, ಬಣ್ಣನೆಗಳಿವೆ ಆದರೆ ವಾಸ್ಥವ ತದ್ವಿರುದ್ಧವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರವೇಶಕ್ಕಿರುವ ಅಡೆತಡೆಗಳ ಕುರಿತು ಗಂಭೀರ ಪರಾಮರ್ಶನ ಅಗತ್ಯವಿದೆ. ಮಹಿಳೆಗೆ ಮನೆ ಮತ್ತು ಉದ್ಯೋಗ ಎಂತಾದರೆ, ಪುರುಷರಿಗೆ ಕೇವಲ ಉದ್ಯೋಗದ ಕಡೆ ಗಮನ ಎಂಬ ಧೋರಣೆಯಿದ್ದು, ಇದು ಬದಲಾಗಬೇಕು. ತಾವು ದುಡಿದ ಹಣ ಬಳಸುವ ಸಂಪೂರ್ಣ ಅಧಿಕಾರ ಅವರಿಗೆ ನೀಡಬೇಕು. ತಂತ್ರಜ್ಞಾನವು ಮಹಿಳೆಯರಿಗೆ ದೊರಕಿರುವ ವರದಾನವಾಗಿದ್ದು, ಅದನ್ನು ಯಥೇಚ್ಛವಾಗಿ, ಸುರಕ್ಷಿತವಾಗಿ ಬಳಸಿಕೊಂಡು ಉದ್ಯೋಗಕ್ಷೇತ್ರದಲ್ಲಿ ಮುಂಚೂಣ ಗೆ ಬರಬೇಕು ಎಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ ಕುಲಪತಿ ಪ್ರೊ. ಬಿ ಪಿ ವೀರಭದ್ರಪ್ಪ, ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಹೀನಾ ಕೌಸರ್ ಸೇರಿದಂತೆ ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ಮಹಿಳಾ ಸಿಬ್ಬಂದಿ, ವಿದ್ಯಾರ್ಥಿನಿಯರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















