ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಎನ್ಎಸ್ಎಸ್ ಶಿಬಿರದಲ್ಲಿ ಭಾಗವಹಿಸುವುದರ ಮೂಲಕ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ, ಸಹಬಾಳ್ವೆ, ತಾಳ್ಮೆ ಮುಂತಾದ ಸದ್ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಕುವೆಂಪು ವಿಶ್ವವಿದ್ಯಾಲಯ Kuvempu University ಹಣಕಾಸು ಅಧಿಕಾರಿ ಪ್ರೊ. ವೈ. ಎಲ್. ರಾಮಚಂದ್ರ ಹೇಳಿದರು.
ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ 2023ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಎನ್ಎಸ್ಎಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾವೂ ವಿದ್ಯಾರ್ಥಿಯಾಗಿದ್ದಾಗ ಎನ್ಎಸ್ಎಸ್ ಸ್ವಯಂಸೇವಕನಾಗಿದ್ದೆ. ನಾವು ಎನ್ಎಸ್ಎಸ್ ಕಾರ್ಯಕ್ರಮಗಳಲ್ಲಿ, ಶಿಬಿರಗಳಲ್ಲಿ ಭಾಗವಹಿಸುವಾಗ ಯಾವುದೇ ಜಾತಿ, ಧರ್ಮ, ಮತ, ಬಡವ, ಶ್ರೀಮಂತ ಎಂಬ ಬೇಧ ಭಾವಗಳು ನನ್ನನ್ನು ಭಾಧಿಸಲಿಲ್ಲ ಎಂದರು.
ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ ಮಾತನಾಡಿ, ಎನ್ಎಸ್ಎಸ್ ಶಿಬಿರಗಳ ಮೂಲಕ ವಿದ್ಯಾರ್ಥಿಗಳು ಸೇವಾ ಮನೋಭಾವ, ಸ್ವಚ್ಛತೆ ಬಗ್ಗೆ ಅರಿವು, ಪರಿಸರ ಜಾಗೃತಿ ಮೈಗೂಡಿಸಿಕೊಳ್ಳಲು ಸಹಾಯವಾಗುತ್ತದೆ. ಸ್ವಯಂ ಸೇವಕರು ತಾವು ಜಾಗೃತರಾಗುವುದರ ಜೊತೆಗೆ ತಮ್ಮ ಅಕ್ಕಪಕ್ಕದ ಸಮುದಾಯದ ಜನರಲ್ಲಿಯೂ ಸಾಮಾಜಿಕ ಜಾಗೃತಿ ಮೂಡಿಸುತ್ತಾರೆ. ಗಿಡ ನೆಡುವುದು, ರಕ್ತದಾನ ಮುಂತಾದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದರು.
Also read: ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ರಾಘ್ನಿ, ವಿವಾನ್ಗೆ ಬೆಳ್ಳಿ ಪದಕ
ಅಧ್ಯಕ್ಷತೆ ವಹಿಸಿದ್ದ ಎಸ್ಎಂಆರ್ ಕಾಲೇಜಿನ ಪ್ರಾಂಶುಪಾಲ ಧರ್ಮೇಗೌಡ ಮಾತನಾಡಿ, ಎನ್ಎಸ್ಎಸ್ ಶಿಬಿರಗಳ ಮೂಲಕ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿಯುತ್ತಾರೆ ಮತ್ತು ಸಾಮಾಜಿಕ ಪಿಡುಗಗಳನ್ನು ತೊಡೆದು ಹಾಕಲು ಶ್ರಮಿಸುತ್ತಾರೆ ಎಂದರು.
ಶಿಬಿರದ ಅಂಗವಾಗಿ ವ್ಯಕ್ತಿತ್ವ ವಿಕಸನ, ರಕ್ತದಾನದ ಮಹತ್ವ, ಆರೋಗ್ಯ ಮತ್ತು ಆನಂದ, ಪರಿಸರದ ಸಂರಕ್ಷಣೆಯ ಮಹತ್ವ ಮುಂತಾದ ವಿಷಯಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಶಿಬಿರದಲ್ಲಿ ಪ್ರತಿದಿನ ಶ್ರಮದಾನದ ಅಂಗವಾಗಿ, ವಿಶ್ವವಿದ್ಯಾಲಯ ಆವರಣ, ಶಂಕರಘಟ್ಟ ಗ್ರಾಮದ ಮುಖ್ಯ ಬೀದಿಗಳು ಮತು ಭದ್ರಾ ಜಲಾಶಯದ ಕೆಳಭಾಗದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಯಿತು. ಪ್ಲಾಸ್ಟಿಕ್ ಆಯುವ ಮೂಲಕ ಅಂದಾಜು 60 ಬ್ಯಾಗುಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಗ್ರಾಮ ಪಂಚಾಯತಿಗೆ ನೀಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post