ಶಿಕಾರಿಪುರ: ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮೊದಲು ಗುಜರಾತ್ನಲ್ಲಿ ಹ್ಯಾಟ್ರಿಕ್ ಮುಖ್ಯಮಂತ್ರಿಯಾಗಿದ್ದರು. ಈಗ ದೇಶದ ಹ್ಯಾಟ್ರಿಕ್ ಪ್ರಧಾನ ಮಂತ್ರಿಯಾಗಲಿದ್ದಾರೆ. ಅಲ್ಲದೆ ದೇಶದ ಜನತೆಯು ನರೇಂದ್ರ ಮೋದಿಯವರನ್ನೇ ಪ್ರಧಾನಮಂತ್ರಿಯನ್ನಾಗಿ ಕಾಣಲು ಬಯಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಕೆ.ಎಸ್. ಅರುಣ್ ಕುಮಾರ್ ಎಂದರು.
ಮಾಳೇರ ಕೇರಿಯಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ದೇಶದಲ್ಲಿ ಹಿಂದೆಂದೂ ಕಾಣದಂತಹ ಅಪಾರ ಜನಗೊಂದಲವನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ನಾಲ್ಕೂವರೆ ವರ್ಷಗಳಿಂದ ಸಂವಿಧಾನ ಬದ್ಧ ಆಡಳಿತ ನಡೆಸಿ ದೇಶದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ ಜನಬೆಂಬಲ ಪಡೆದಿದ್ದಾರೆ. ಇವರು ಗುಜರಾತ್ನಲ್ಲಿ ಹ್ಯಾಟ್ರಿಕ್ ಮುಖ್ಯ ಮಂತ್ರಿಯಾದಂತೆ ದೇಶದ ಹ್ಯಾಟ್ರಿಕ್ ಪ್ರಧಾನಮಂತ್ರಿಯಾಗವುದು ಖಚಿತವಾಗಿದೆ ಎಂದರು.
ರಾಷ್ಟ್ರೀಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡಿ ಕಳೆದ 70 ವರ್ಷದ ಅವಧಿಯಲ್ಲಿ 50 ರಿಂದ 60 ವರ್ಷ ಆಳಿದ ಕಾಂಗ್ರೆಸ್ ಪಕ್ಷವು ಪ್ರತೀ ಚುನಾವಣೆಯ ಸಂದರ್ಭದಲ್ಲಿ ಪ್ರಣಾಳಿಕೆ ಹೊರಡಿಸುವಾಗ ಗರೀಧಿ ಹಠಾವ್ ಯೋಜನೆ ಜಾರಿಗೆ ತರುವುದಾಗಿ ತಿಳಿಸುತ್ತಾ ಬಂದದಿದ್ದು, ಆದರೆ ದೇಶದಲ್ಲಿ ರೈತರು ರೈತರಾಗಿಯೇ ಉಳಿದಿದ್ದಾರೆ. ಹಿಂದುಳಿದ ವರ್ಗದವರಿಗೆ ಯಾವುದೇ ರೀತಿಯಾ ಸಹಾಯ ಮಾಡಲಿಲ್ಲ ಎಂದ ಅವರು, ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ನಂತರ ಸ್ವಚ್ಚ ಭಾರತ್, ಮುದ್ರಾ ಯೋಜನೆ, ಸಂಧ್ಯಾ ಸುರಕ್ಷತೆ, ಸುಕನ್ಯಾ ಯೋಜನೆ ಸೇರಿದಂತೆ ನೂರಾರು ಯೋಜನೆಗಳನ್ನು ಜಾರಿಗೆ ತಂದು ಬಡವರಿಗೆ, ಹಿಂದುಳಿದವರಿಗೆ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಮುದ್ರಾ ಯೋಜನೆಯಲ್ಲಿ ಶೇಕಡಾ 70ರಷ್ಟು ಹಿಂದುಳಿದ ವರ್ಗದವರಿಗೆ ಸಾಲ ಕೊಡಲಾಗಿದೆ, ಅದರಲ್ಲಿ ಶೇಕಡಾ 70 ರಷ್ಟು ಮಹಿಳೆಯರಿಗೆ ಅನುಕೂಲವಾಗಿದೆ ಎಂದರು.
ಕಳೆದ 2014 ರ ಚುನಾವಣೆಯಲ್ಲಿ ಸರಿ ಸುಮಾರು 17.8 ಕೋಟಿ ಮತಗಳು ಬಿಜೆಪಿಗೆ ಬಂದಿದ್ದು, ಅದರಲ್ಲಿ 8 ಕೋಟಿಯಷ್ಟು ಬಹು ಪಾಲು ಹಿಂದುಳಿದ ವರ್ಗಗಳ ಮತವಾಗಿದ್ದವು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡ ಒಬ್ಬ ಹಿಂದುಳಿದ ವರ್ಗದವರಾಗಿದ್ದು ಎಲ್ಲಾ ಸಂಸದರ ಕ್ಷೇತ್ರದಲ್ಲಿ ಅತೀ ಹಿಂದುಳಿದ ವರ್ಗಗಳ ಪ್ರದೇಶದಲ್ಲಿ ಆದರ್ಶ ಗ್ರಾಮ ಯೋಜನೆ ಜಾರಿಗೆ ತಂದಿದ್ದಾರೆ. ಬಿಜೆಪಿಯು ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಅವಕಾಶ ಕೊಟ್ಟಿದ್ದು, ಕೇವಲ ಭರವಸೆ ಕೊಡದೆ ಹಿಂದುಳಿದ ಸಮಾಜಕ್ಕೆ ಆರ್ಥಿಕವಾಗಿ, ರಾಜಕೀಯವಾಗಿ ಎಲ್ಲಾ ಅವಕಾಶಗಳನ್ನು ಕೊಟ್ಟಿದೆ ಎಂದರು.
ರಾಜ್ಯದಲ್ಲಿಯೂ ಬಿ.ಎಸ್. ಯಡಿಯೂರಪ್ಪನವರು ಮುಖ ಮಂತ್ರಿಯಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಿದ್ದರು, ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ಸಾವಿರ ಕೋಟಿ ಅನುಧಾನವನ್ನು ಕೊಟ್ಟಿದ್ದಾರೆ. ಅದರ ಪರಿಣಾಮವಾಗಿ ಹಿಂದುಳಿದ ವರ್ಗಗಳ ಸಣ್ಣ ಯೋಜನೆಯ ಮೂಲಕ ಅವರ ಅಭಿವೃದ್ಧಿಗೆ ಕಾರಣ ಕರ್ತರಾಗಿದ್ದಾರೆ. ಅವರು ಮುಖ್ಯ ಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 75 ಕೋಟಿ ವಿಶೇಷ ಅನುಧಾನ ಕೊಡ್ಡಿದ್ದರು.
ಬಿ.ವೈ. ರಾಘವೇಂದ್ರರವರು ಸಂಸದರಾದ ನಂತರ 4 ತಿಂಗಳಲ್ಲಿ ಈಎಸ್’ಐ ಆಸ್ಪತ್ರೆ ಜಾರಿಗೆ ತಂದರು. ಭದ್ರಾವತಿಯ ವಿಐಎಸ್’ಎಲ್ ಕಾರ್ಖಾನೆಗೆ 150 ಎಕರೆ ಗಣಿಕಾರಿಕೆಯನ್ನು ಜಾರಿಗೆ ತಂದರು. ಜನಶತಾಬ್ಧಿ ರೈಲು ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟರು ಆದ ಕಾರಣ ಜಿಲ್ಲೆಯ ಜನತೆಯು 2 ಲಕ್ಷಕ್ಕೂ ಅಧಿಕ ಮತ ಅಂತರಗಳಿಂದ ಬಿ.ವೈ. ರಾಘವೇಂದ್ರ ಅವರನ್ನು ಆಯ್ಕೆ ಮಾಡಬೇಕೆಂದು ತಿಳಿಸಿದರು.
ವಿ. ರಾಜು ಮಾತನಾಡಿ ದೇಶವನ್ನು ರಾಷ್ಟ್ರ ಮಟ್ಟದಲ್ಲಿ ಉನ್ನತ ಸ್ಥಾನದತ್ತ ಸಾಗಿಸುವಲ್ಲಿ ನರೇಂದ್ರ ಮೋದಿಯವರು ಮುಂದಾಗಿದ್ದಾರೆ. ವಿಶ್ವವೇ ನರೇಂದ್ರ ಮೋದಿಯವರ ಆಳ್ವಿಕೆಯನ್ನು ಪ್ರಶಂಶಿಸುತ್ತಿದೆ. ಅವರು ನೀಡುತ್ತಿರುವ ಅನೇಕ ಯೋಜನೆಗಳು ಬಡವರ ಮತ್ತು ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೆರವಾಗುತ್ತಿದೆ. ತಂತ್ರಜ್ಞಾನ, ಜಲಾಶಯ, ರಾಷ್ಟ್ರೀಯ ಹೆದ್ದಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
ಪ್ರಧಾನಮಂತ್ರಿ ಮೋದಿಯವರು ಬಡವರಿಗಾಗಿ ಹೃದಯ ಸಂಬಂಧಿ ಖಾಯಿಲೆಗಳಿಗೆ ಚಿಕಿತ್ಸಾ ವೆಚ್ಚವನ್ನು ಭರಿಸುವ ಯೋಜನೆ ಜಾರಿಗೆ ತಂದಿದ್ದಾರೆ. ಜನೌಷಧಿ ಮಳಿಗೆಯನ್ನು ತೆರೆದು ಕಡಿಮೆ ದರದಲ್ಲಿ ಔಷಧಿಗಳನ್ನು ದೊರೆಯುವಂತೆ ಮಾಡಿದ್ದಾರೆ. ವಂಶಪಾರಂಪರ್ಯ ಆಡಳಿತ ನಡೆಸುತ್ತಾ ಬಂದ ಕಾಂಗ್ರೆಸ್ ವಿರೋಧ ಪಕ್ಷದಲ್ಲೂ ಕೂರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಪ್ರಧಾನ ಮಂತ್ರಿಯಾದವರ ಪೈಕಿ 18 ಗಂಟೆಗಳ ಕಾಲ ಸುಧೀರ್ಘ ನಿದ್ರಿಸದೆ ಆಡಳಿತ ನಡೆಸಿದ ಏಕೈಕ ವ್ಯಕ್ತಿ ಎಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾತ್ರ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಣ್ಣ, ಈಶ್ವರಪ್ಪ, ಕೆ. ಹಾಲಪ್ಪ, ಚಾರಗಲ್ಲಿ ಪರಶುರಾಮ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಜರಿದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Discussion about this post