ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ (ಆನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಅಡಿಕೆಯಲ್ಲಿ ಅಂತರ ಬೆಳೆ ಪದ್ಧತಿ ಕುರಿತು ಗುಂಪು ಚರ್ಚೆಯನ್ನು ಚಿಕ್ಕಜೋಗಿಹಳ್ಳಿಯ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಡಿಕೆ ಬೆಳೆ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕತೆ, ಉದ್ಯೋಗ ಮತ್ತು ಮಾರುಕಟ್ಟೆ ಬೇಡಿಕೆ ದೃಷ್ಟಿಯಿಂದ ಈ ಭಾಗದ ಅತ್ಯಂತ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ರೈತರಿಗೆ ಅಡಿಕೆ ನೆಟ್ಟ 5 ರಿಂದ 7 ವರ್ಷಗಳವರೆಗೆ ಯಾವುದೇ ಇಳುವರಿ ಬರುವುದಿಲ್ಲ ಅದಕ್ಕೆ ಅಡಿಕೆಯಲ್ಲಿ ಅಂತರ ಬೆಳೆ ಅಥವಾ ಮಿಶ್ರಬೆಳೆ ಅನುಸರಿಸುವುದರಿಂದ ಪ್ರಾರಂಭಿಕ ಹಂತದಲ್ಲಿ ಇದರಿಂದ ಆದಾಯವನ್ನು ಪಡೆಯಬಹುದು. ಇದರ ಜೊತೆಗೆ ಮಣ್ಣಿನಲ್ಲಿನ ಪೋಷಕಾಂಶಗಳ ಸಂಪೂರ್ಣ ಬಳಕೆಯಾಗುತ್ತದೆ. ಅದಕ್ಕೋಸ್ಕರ ರೈತರು ಅಡಿಕೆಯಲ್ಲಿ ಅಂತರ ಬೆಳೆ ಪದ್ಧತಿಯನ್ನು ಅನುಸರಿಸಿ ಹೆಚ್ಚಿನ ಆದಾಯ ಪಡೆಯಬೇಕೆಂದು ಕೃಷಿ ವಿದ್ಯಾರ್ಥಿಗಳು ತಿಳಿಸಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕರಾದ ಡಾ.ರವಿಕುಮಾರ್ ರವರು ಆಗಮಿಸಿದ್ದರು. ಅಂತರ ಬೆಳೆಯಿಂದ ಜಮೀನಿನ ಸಮರ್ಪಕ ಬಳಕೆ ಜಲ ಮತ್ತು ಪೋಷಕಾಂಶಗಳ ಸಮತೋಲನ ಹಾಗೂ ಕೀಟ ರೋಗ ನಿರ್ವಹಣೆಗೆ ಇದು ಪರಿಣಾಮಕಾರಿ ಎಂದು ಹೇಳಿದರು. ಅಡಿಕೆಯಲ್ಲಿ ಶುಂಠಿ, ಬಾಳೆ, ಕಾಳುಮೆಣಸು, ತರಕಾರಿ ಮತ್ತು ಪಪ್ಪಾಯವನ್ನು ಅಂತರ ಬೆಳೆಯಾಗಿ ಬೆಳೆದು ಹೆಚ್ಚಿನ ಲಾಭ ಪಡೆಯಬೇಕೆಂದು ಸಲಹೆ ನೀಡಿದರು. ಜೊತೆಗೆ ಅಡಿಕೆಯ ಸುಧಾರಿತ ಸಮಗ್ರ ಬೇಸಾಯ ಕ್ರಮಗಳ ಕ್ರಮಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ನೆರೆದಿದ್ದ ರೈತರು ತಮ್ಮ ಪ್ರಸ್ತುತ ಅಂತರ ಬೆಳೆಯಲ್ಲಿ ಬಂದಿರುವ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















