ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ವೈಜ್ಞಾನಿಕ ಮಾದರಿಯ ಬೇಸಾಯ ಕ್ರಮದಿಂದ ಶುಂಠಿ ಬೆಳಯಲ್ಲಿ ಉತ್ತಮವಾದ ಕೃಷಿ ಮಾಡಿ, ಒಳ್ಳೆಯ ಇಳುವರಿ ತೆಗೆಯಬಹುದಾಗಿದೆ ಎಂದು ಕೃಷಿ ವಿದ್ಯಾರ್ಥಿಗಳು ರೈತರಿಗೆ ತಿಳಿಸಿದರು.
ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿಎಸ್’ಸಿ (ಆನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಶುಂಠಿ ಬೆಳೆಯಲ್ಲಿ ಸುಧಾರಿತ ಸಮಗ್ರ ಬೇಸಾಯ ಕ್ರಮಗಳು ಕುರಿತು ಹಮ್ಮಿಕೊಳ್ಳಲಾಗಿದ್ದ ಗುಂಪು ಚರ್ಚೆಯಲ್ಲಿ ಮಾತನಾಡಿದರು.
ಶುಂಠಿ ನಮ್ಮ ದೇಶದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇದು ಆಹಾರ, ಔಷಧಿ ಮತ್ತು ಕೈಗಾರಿಕಾ ಉಪಯೋಗಕ್ಕಾಗಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಈ ಭಾಗದಲ್ಲಿ ಅಡಿಕೆ ಜೊತೆಗೆ ಶುಂಠಿ ಕೂಡ ಒಂದು ಪ್ರಮುಖ ಬೆಳೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ , ರೋಗ ಮತ್ತು ಕೀಟ ಬಾಧೆ ಹಾಗೂ ವೈಜ್ಞಾನಿಕ ಬೇಸಾಯ ಕ್ರಮಗಳು ಕೊರತೆಯಿಂದಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಶುಂಠಿ ಬೆಳೆಯಲ್ಲಿ ಸುಧಾರಿತ ಸಮಗ್ರ ಬೇಸಾಯ ಕ್ರಮಗಳು ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ರೈತ ಸಂಪರ್ಕ ಕೇಂದ್ರ, ಹಿತ್ತಲ ಕೃಷಿ ಅಧಿಕಾರಿಯಾದ ಸಂಜನಾ, ತೋಟಗಾರಿಕಾ ಅಧಿಕಾರಿಯಾದ ದೊರೆರಾಜರವರು ಹಾಗೂ ಅತಿಥಿಯಾಗಿ ಪ್ರಗತಿಪರ ರೈತರಾದ ಶಿವಕುಮಾರರವರು ಆಗಮಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಜನಾ, ರೈತರಿಗೆ ರೈತ ಸಂಪರ್ಕ ಕೇಂದ್ರದಿಂದ ಸಿಗುವ ಸೌಲಭ್ಯಗಳ ಕುರಿತು ವಿವರಿಸಿದರು.
ನಂತರ ಪ್ರಗತಿಪರ ರೈತರಾದ ಶಿವಕುಮಾರರವರು ತಾವು ಹೇಗೆ ಸಾವಯುವ ವಿಧಾನದಿಂದ ಶುಂಠಿ ಬೆಳೆಯಲ್ಲಿ ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ವಿವರಿಸಿದರು.
ತೋಟಗಾರಿಕಾ ಅಧಿಕಾರಿಯಾದ ದೊರೆರಾಜರವರು ಶುಂಠಿ ಬೆಳೆಯ ಸಂಪೂರ್ಣ ಮಾಹಿತಿ ನೀಡಿದರು.
ಮೊದಲಿಗೆ ಭೂಮಿಯ ಸಿದ್ಧತೆ, ಗೆಡ್ಡೆಯ ಆಯ್ಕೆ, ಬೀಜೋಪಚಾರ, ನೀರು ಮತ್ತು ಪೋಷಕಾಂಶಗಳ ನಿರ್ವಹಣೆ, ಕಳೆ ನಿರ್ವಹಣೆ, ಕೀಟ ರೋಗಗಳ ನಿರ್ವಹಣೆ ಮುಂತಾದವುಗಳ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ನೀಡಿದರು. ಕಾರ್ಯಕ್ರಮದ ಅಂತ್ಯದಲ್ಲಿ ನೆರೆದಿದ್ದ ರೈತರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















