ಕಲ್ಪ ಮೀಡಿಯಾ ಹೌಸ್ | ಸೊರಬ |
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾನು ಈಗಾಗಲೇ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನಕ್ಕಾಗಿ ರಾಘವೇಂದ್ರ ಹಾಗೂ ಗೀತಾ ಶಿವರಾಜಕುಮಾರ್ ಅವರ ನಡುವೆ ಪೈಪೋಟಿಯಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಹೇಳಿದ್ದಾರೆ.
ಸೊರಬದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಲೋಕಸಭಾ ಚುನಾವಣಾ #LoksabhaElection2024 ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ನನ್ನ ಸ್ಪರ್ಧೆ ನಿಶ್ಚಿತ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ನಾನು ಈಗಾಗಲೇ ಮೊದಲ ಸ್ಥಾನದಲ್ಲಿದ್ದೇನೆ. ಇನ್ನೇನಿದ್ದರೂ 2ನೇ ಸ್ಥಾನಕ್ಕೆ ರಾಘವೇಂದ್ರ #BYRaghavendra ಹಾಗೂ ಗೀತಾ ನಡುವೆ ಪೈಪೋಟಿ ನಡೆಯಲಿದೆ ಎಂದರು.
ಹಿಂದೆ ಮೋದಿಯವರ ಗೆಲುವಿಗಾಗಿ ರಾಯಣ್ಣ ಬ್ರಿಗೇಡ್ ಮಾಡಿದ್ದೆವು. ಆದರೆ, ಆನಂತರ ಅವರುಗಳು ಸೇರಿಕೊಂಡು ಅದನ್ನು ಬದಿಗೆ ಸರಿಸಿದರು ಎಂದರು.
ರಾಜ್ಯದಲ್ಲಿ ಎನ್’ಡಿಎ ಅಭ್ಯರ್ಥಿಗಳು 27 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಾರೆ. ನಾನೂ ಸಹ ಗೆದ್ದು ಮೋದಿಗಾಗಿ ಕೈ ಎತ್ತುತ್ತೇನೆ ಎಂದರು.
ವರಿಷ್ಠರು ಕರೆದರೆ ಮತ್ತೆ ಹೋಗ್ತೀನಿ
ದೆಹಲಿಗೆ ಬನ್ನಿ ಎಂದು ಕರೆದಿದ್ದರು. ದೊಡ್ಡವರ ಮಾತಿಗೆ ಬೆಲೆ ಕೊಟ್ಟು ಹೋಗಿದ್ದೆ. ಆದರೆ, ಅವರು ನನ್ನನ್ನು ಭೇಟಿಯಾಗಲಿಲ್ಲ. ಆಂದರೆ, ನನ್ನ ಸ್ಪರ್ಧೆಗೆ ಪರೋಕ್ಷ ಸಮ್ಮತಿ ಇದೆ ಎಂಬ ಸಂದೇಶ ಸಿಕ್ಕಂತಾಗಿದೆ ಎಂದರು.
ಒಂದು ವೇಳೆ ಬಿಜೆಪಿ ವರಿಷ್ಠರು ಮತ್ತೆ ಕರೆದರೆ ದೆಹಲಿಗೆ ಹೋಗಿ ಬರುತ್ತೇನೆ. ಆದರೆ, ನನ್ನ ಸ್ಫರ್ಧೆ ಮಾತ್ರ ನಿಶ್ಚಿತ ಎಂದು ಪುನರುಚ್ಛರಿಸಿದರು.
ಮಗನಿಗೆ ಟಿಕೇಟ್ ಸಿಗದಿದ್ದಕ್ಕೆ ಹೀಗೇನಾ?
ನಿಮ್ಮ ಮಗನಿಗೆ ಟಿಕೇಟ್ ಸಿಗದಿದ್ದಕ್ಕೆ ಈ ರೀತಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಅದು ಹಾಗಲ್ಲ. ದಶಕಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದೇನೆ. ವರಿಷ್ಠರು ಹೇಳಿದ ಎಲ್ಲ ಮಾತಿಗೂ, ಎಲ್ಲ ಸೂಚನೆಗೂ ತಲೆ ಬಾಗಿದ್ದೇನೆ. ಆದರೆ, ಅವರಿಂದ ನನಗೆ ಸರಿಯಾದ ಸ್ಪಂದನೆ ದೊರೆಯಲಿಲ್ಲ ಹೀಗಾಗಿ, ಸ್ವತಂತ್ರ ಸ್ಪರ್ಧೆ ಅನಿವಾರ್ಯವಾಯಿತು ಎಂದರು.
ಪ್ರಭಾಕರ್ ರಾಯ್ಕರ್, ಚಿದಾನಂದಗೌಡ, ಮಹೇಶ್ ಗೌಳಿ,ಅಣ್ಣಪ್ಪ, ರವಿಗುಡಿಗಾರ್, ಶರತ್, ಅಣ್ಣಾಜಿ ಗೌಡ ಜಡೆ, ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷೆ ಹೇಮಾ ರವಿ, ಮಂಜುನಾಥ್ ಸಾಗರ, ಪರಮೇಶ್ ಸೇರಿ ಹಲವರು ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















