ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದ ಎಸ್. ಬಂಗಾರಪ್ಪ ಕ್ರೀಡಾಂಗಣದಲ್ಲಿ ಭಾನುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಆಯ್ಕೆಯ ಕ್ರೀಡಾಕೂಟ Dasara Sports Event ಅವ್ಯವಸ್ಥೆಯ ಆಗರವಾಗಿತ್ತು.
ಸ್ವಚ್ಛತೆಯ ಕೊರತೆ, ಕುಡಿಯುವ ನೀರಿಗೆ ಪರದಾಟ, ವಿದ್ಯಾರ್ಥಿನಿಯರಿಗೆ ಬಟ್ಟೆ ಬದಲಿಸಲು ಸಹ ಕೊಠಡಿ ಇರದೇ ಮುಜುಗರ ಅನುಭವಿಸುವ ಸ್ಥಿತಿ, ಪ್ರಥಮ ಚಿಕಿತ್ಸೆಯ ಸೌಲಭ್ಯವೂ ಇರಲಿಲ್ಲ. ಇನ್ನೂ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು ಅಂಕಣಕ್ಕೆ ಇಳಿಯಲು ಸಹ ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿತ್ತು. ತಾಲೂಕಿನ ವಿವಿಧ ಭಾಗಗಳಿಂದ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಪಾಲ್ಗೊಂಡಿರುವುದು ಕಂಡು ಬಂದಿತು.
ಕ್ರೀಡಾಂಗಣದಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಕ್ರೀಡಾಂಗಣದಲ್ಲಿ ತೆಗ್ಗು ಉಬ್ಬುಗಳಿದ್ದು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗುತ್ತಿಲ್ಲ. ಅನೇಕ ಕ್ರೀಡಾಪಟುಗಳು ಗಾಯಗೊಂಡಿದ್ದಾರೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕ್ರೀಡಾಂಗಣ ಜಾನುವಾರುಗಳನ್ನು ಮೇಯಿಸುವ ಮೈದಾನದಂತಿದೆ. ಯಾವುದೇ ಕ್ರೀಡಾಂಗಣದ ಅಂಕಣಗಳು ಸಮರ್ಪಕವಾಗಿಲ್ಲ. ಉತ್ತಮ ಕ್ರೀಡಾಂಗಣ ಸೌಲಭ್ಯ ಕಲ್ಪಿಸಿದರೆ ತಾಲೂಕಿನಲ್ಲಿಯೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳಾಗಿ ಹೊರ ಹೊಮ್ಮಲಿದ್ದಾರೆ. ಸಂಬಂಧ ಪಟ್ಟ ಇಲಾಖೆಯವರು ಕ್ರೀಡಾಂಗಣಕ್ಕೆ ಸೂಕ್ತ ಸೌಲಭ್ಯ ಒದಗಿಸಬೇಕು.
ಪ್ರಶಾಂತ್ ಮತ್ತು ಪ್ರಮೋದ್, ಕ್ರೀಡಾಪಟುಗಳುಕ್ರೀಡಾಂಗಣದಲ್ಲಿ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ಸಮರ್ಪಕ ಶೌಚಗೃಹ ವ್ಯವಸ್ಥೆ ಇಲ್ಲ. ಕ್ರೀಡಾಂಗಣದಲ್ಲಿ ಕಲ್ಲುಗಳು ತುಂಬಿ ಹೋಗಿದೆ. ವಿದ್ಯಾರ್ಥಿಯರು ಗಾಯಗೊಂಡರೆ ಪ್ರಾಥಮಿಕ ಚಿಕಿತ್ಸಾ ಸೌಲಭ್ಯವಿಲ್ಲದೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತ ಸಂದರ್ಭವಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ರಾಜ್ಯದ ವಿವಿಧಡೆ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ, ಹೋಲಿಕೆ ಮಾಡಿದಾಗ ಕ್ರೀಡಾಕೂಟದ ವ್ಯವಸ್ಥೆ ನೋಡಿದರೆ ಬೇಸರ ಬರುತ್ತದೆ. ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವ ಬದಲು ಆಯೋಜಿಸದ್ದರೆ ಒಳಿತು.
ಪ್ರೀತಿ, ರಾಷ್ಟ್ರ ಮಟ್ಟದ ಕ್ರೀಡಾಪಟು
ಕ್ರೀಡಾಂಗಣದಲ್ಲಿ ಆಯೋಜಕರು ಕ್ರೀಡಾಕೂಟ ಆಯೋಜಿಸುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕನಿಷ್ಟ ಗಮನವನ್ನು ನೀಡದೇ ಇರುವುದು ಕಂಡು ಬಂದಿತು. ಕ್ರೀಡಾಕೂಟಗಳಲ್ಲಿ ಅನೇಕರು ಬಿದ್ದು ಎದ್ದು ಗಾಯಗೊಂಡರೆ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆ ಸಹ ಇರಲಿಲ್ಲ. ಕ್ರೀಡಾಕೂಟಗಳನ್ನು ಆಯೋಜಿಸುವಾಗ ಅಂಬ್ಯುಲೆನ್ಸ್ ವ್ಯವಸ್ಥೆ ಇರಬೇಕು ಎನ್ನುವ ಬಗ್ಗೆ ಗಮನ ನೀಡದೇ ಸಮೀಪದಲ್ಲಿ ಸರ್ಕಾರಿ ಆಸ್ಪತ್ರೆ ಇದೆ ಎಂದು ಆಯೋಕರು ಬೇಜವಾಬ್ದಾರಿ ತನದಿಂದ ವರ್ತಿಸಿದರು ಎಂಬುದು ಕ್ರೀಡಾಪಟುಗಳ ಆರೋಪ.
Also read: ಭರಮಸಾಗರದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ಸಂಪನ್ನ
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಖೋಖೋ, ಕಬಡ್ಡಿ, ವಾಲಿಬಾಲ್, ಥ್ರೋಬಾಲ್ ಪಂದ್ಯಾವಳಿಗಳನ್ನು ಯುವಕ-ಯುವತಿಯರಿಗೆ ಆಯೋಜಿಸಲಾಗಿತ್ತು. ಆದರೆ, ಅಥ್ಲೆಟಿಕ್ಸ್ ಕ್ರೀಡಾಪಟುಗಳು ರನ್ನಿಂಗ್ ಟ್ರ್ಯಾಕ್ ಸಮರ್ಪಕವಾಗಿಲ್ಲದೇ ಅನೇಕರು ಗಾಯಗೊಂಡರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ ಕ್ರೀಡಾಪಟುಗಳು ಸಹ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗದೆ ಬೇಸರ ವ್ಯಕ್ತಪಡಿಸುವ ಸ್ಥಿತಿ ಎದುರಾಯಿತು. ಇನ್ನು ಖೋಖೋ, ಕಬಡ್ಡಿ ಅಂಕಣಗಳಂತೂ ಕ್ರೀಡಾಪಟುಗಳಿಗೆ ವ್ಯತಿರಿಕ್ತ ಪರಿಣಾಮ ಬೀರಿತು. ಎಲ್ಲೆಂದರಲ್ಲಿ ಬೆಳೆದ ಹುಲ್ಲುಗಳು, ಕಲ್ಲು ಮಿಶ್ರಿತ (ಗೊಚ್ಚು ಕಲ್ಲು) ಅಂಕಣದಿಂದಾಗಿ ಕ್ರೀಡಾಪಟುಗಳಿಗೆ ಸ್ಪರ್ಧೆಯ ಹುಮ್ಮಸ್ಸು ಮೊಟಕುವಾಗುವಂತೆ ಮಾಡಿತು ಎಂಬುದು ಕ್ರೀಡಾಭಿಮಾನಿಗಳ ಆರೋಪವಾಗಿದೆ.
ಕ್ರೀಡಾಂಗಣದಲ್ಲಿ ಸಮರ್ಪಕ ಶೌಚಗೃಹ ಇಲ್ಲದೇ ವಿದ್ಯಾರ್ಥಿನಿಯರು ಮತ್ತು ಯುವತಿಯರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಯೂ ಸಹ ಇಲ್ಲದಿರುವುದು ಕಂಡು ಬಂದಿತು. ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದ್ದು, ಆಯೋಜಕರಿಗೆ ಅನುಕೂಲ ಸಿಂಧುವಾಗಿತ್ತು. ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡಿರುವ ಬಗ್ಗೆ ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post