ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಎಚ್ಪಿಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಇಂದು ಆರಕ್ಷಕ ಇಲಾಖೆ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಪಿಐ ಶ್ರೀ ಎಲ್. ರಾಜಶೇಖರ್ ಅವರು ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ಅಪಾಯಗಳ ಕುರಿತು ವಿವರಿಸಿ, ನಂತರ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು. ವಿದ್ಯಾರ್ಥಿಗಳು ಮಾದಕವಸ್ತುಗಳನ್ನು ಸೇವಿಸುವುದಿಲ್ಲ ಹಾಗೂ ಈ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವದಾಗಿ ಪ್ರತಿಜ್ಞೆ ತೆಗೆದುಕೊಂಡರು.
ಸಿಪಿಐ ರಾಜಶೇಖರ್ ಮಾತನಾಡಿ “ಯುವಪೀಳಿಗೆ ವಿವಿಧ ಕಾರಣಗಳಿಂದಾಗಿ ಮಾದಕ ದ್ರವ್ಯಗಳ ವ್ಯಸನಕ್ಕೆ ತುತ್ತಾಗುತ್ತಿದೆ. ಮಾದಕವಸ್ತುಗಳ ಪಿಡುಗು ಸಮಾಜದಲ್ಲಿ ಆಳವಾಗಿ ಬೇರೂರಿದ್ದು, ಇಡೀ ಪೀಳಿಗೆಯ ಭವಿಷ್ಯವನ್ನು ನಾಶಮಾಡುವ ಸ್ಥಿತಿಯಲ್ಲಿದೆ. ಈ ಹಿನ್ನಲೆಯಲ್ಲಿ ಪ್ರತಿವರ್ಷ ಜೂನ್ 26 ರಂದು ಜಾಗತಿಕ ಮಟ್ಟದಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ,” ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ಪ್ರಾಂಶುಪಾಲೆ ಮೇಘಶ್ರಿ ಎಂ, ಅವರು, “ಮಾದಕ ದ್ರವ್ಯಗಳ ದೀರ್ಘಾವಧಿಯ ಬಳಕೆ ಮಾನಸಿಕ ಅಸ್ವಸ್ಥತೆ, ದೈಹಿಕ ಕ್ಷೀಣತೆ ಮತ್ತು ಸಾವಿಗೂ ಕಾರಣವಾಗಬಹುದು. ಈ ಹಿನ್ನಲೆಯಲ್ಲಿ ಯುವಜನತೆಯಲ್ಲಿ ಜಾಗೃತಿ ಮೂಡಿಸುವುದು ಬಹುಮುಖ್ಯವಾಗಿದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಶಿವಾನಂದ ಎಸ್ ನಾಯ್ಕ, ಉಪನ್ಯಾಸಕೀಯರಾದ ಭಾಗ್ಯ, ಅಶ್ವಿನಿ,ಪಲ್ಲವಿ, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಫೋಟೊ: ಅಂತರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನದ ಅಂಗವಾಗಿ ಸಿಪಿಐ ರಾಜಶೇಖರ್ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post