ಕಲ್ಪ ಮೀಡಿಯಾ ಹೌಸ್ | ಸೊರಬ |
ಪಶ್ಚಿಮಘಟ್ಟದ ಹೃದಯಭಾಗ ಆಗುಂಬೆ ಹತ್ತಿರ ಕಂದಾಯ ಅರಣ್ಯ ಭೂಮಿ ಕಬಳಿಕೆಗೆ ತಯಾರಿ ನಡೆದಿದೆ, ಖಾಸಗಿಯವರು ಕಟ್ಟಡ ನಿರ್ಮಾಣ, ಅರಣ್ಯ ಕಟಾವು ಮಾಡಿ ತಂತಿ ಬೇಲಿ ಕಾಮಗಾರಿ ನಡೆಸಿದ್ದಾರೆ. ವೃಕ್ಷಲಕ್ಷ ಆಂದೋಲನ ಈ ದುಷ್ಕೃತ್ಯವನ್ನು ಖಂಡಿಸುತ್ತದೆ ಎಂದು ಆಂದೋಲನದ ಅಧ್ಯಕ್ಷ ಅನಂತಹೆಗಡೆ ಅಶಿಸರ ಹೇಳಿದರು.
ಸಾಗರದ ಎಸಿ ಕಚೇರಿಯಲ್ಲಿ ಅರಣ್ಯಭೂಮಿ ಕಬಳಿಕೆ ತಡೆಯುವಂತೆ ಆಗ್ರಹಿಸಿ ಮನವಿ ನೀಡಿದರು.
600 ಎಕರೆ ಅರಣ್ಯ ಭೂಮಿ ಮಾರಾಟಕ್ಕೆ ಹುನ್ನಾರ: ಶಿವಮೊಗ್ಗಾ ಜಿಲ್ಲೆ ಆಗುಂಬೆ- ಮಾಸ್ತಿ ಕಟ್ಟೆ ಮಧ್ಯೆ ಕಟ್ಟೆಕೊಪ್ಪ ಗ್ರಾಮದ 600 ಎಕರೆ ದಟ್ಟಾರಣ್ಯ ಖಾಸಗಿಯವರ ಪಾಲಾಗಿ ವಿನಾಶದ ಅಂಚಿಗೆ ಸರಿಯುತ್ತಿದೆ. ಅರಣ್ಯ ಇಲಾಖೆ ಮೇಗರವಳ್ಳಿ ವ್ಯಾಪ್ತಿಯಲ್ಲಿ ಇರುವ ಕಟ್ಟೆಕೊಪ್ಪದ ಅರಣ್ಯ ಪ್ರದೇಶ ಹೊಸನಗರ ತಾ. ನಗರ ಹೋಬಳಿ ಯಡೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿದೆ. ಕಟ್ಟೆಕೊಪ್ಪ ಗ್ರಾಮ ಸರ್ವೆ ನಂ. 98 ರಲ್ಲಿ ಸ.ನಂ. 72 ರಲ್ಲಿ ಸ.ನಂ 115 ನಲ್ಲಿ ಕಂದಾಯ ಅರಣ್ಯ ಪ್ರದೇಶವಿದೆ. ಈ ಭೂಮಿ ನಾಲ್ಕಾಣಿ ಕಂದಾಯ ಭೂಮಿ ಎಂದು ಹೆಸರು ಪಡೆದಿದೆ. 2018-19 ರಲ್ಲಿ ಇವುಗಳನ್ನು ಡೀಮ್ ಅರಣ್ಯ ಪಟ್ಟಗೆ ಸೇರ್ಪಡೆ ಮಾಡಲಾಗಿದೆ. ಈ ಗ್ರಾಮ ಅರಣ್ಯ ಪ್ರದೇಶ ನಿತ್ಯ ಹರಿದ್ವರ್ಣದ ಅರಣ್ಯ ಎನಿಸಿಕೊಂಡಿತ್ತು. ವರಾಹಿ ಆಣಿಕಟ್ಟು ಮತ್ತು ಮಾಣಿ ಅಣಿಕಟ್ಟು ಹಿನ್ನೀರು ಪ್ರದೇಶಕ್ಕೆ ತಾಗಿಕೊಂಡಿದೆ. ಶರಾವತಿ ಅಭಯಾರಣ್ಯ, ಸೋಮೇಶ್ವರ ಅಭಯಾರಣ್ಯ, ಅಂಬಾರ ಗುಡ್ಡ ಜೀವ ವೈವಿಧ್ಯ ತಾಣ, ಕೊಡಚಾದ್ರಿ, ಆಗುಂಬೆ ಈ ಎಲ್ಲ ಸೂಕ್ಷ್ಮ ಅರಣ್ಯ ಪ್ರದೇಶಗಳ ಮಧ್ಯೆ ಇರುವ ಪಶ್ಚಿಮ ಘಟ್ಟದ ಹೃದಯಭಾಗದಲ್ಲಿರುವ ಕಟ್ಟೆಕೊಪ್ಪ ಗ್ರಾಮದ 600 ಎಕರೆ ಅರಣ್ಯ ಖಾಸಗಿಯವರ ಕೈಯಲ್ಲಿ ಸಿಲುಕಿದೆ. ಈಗಾಗಲೇ ಅಲ್ಲಿ 60ಎಕರೆ ಪ್ರದೇಶ ಧ್ವಂಸವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅರಣ್ಯದಲ್ಲಿ ಕಾಮಗಾರಿ, ಭೂದಾಖಲೆ ತಿದ್ದುಪಡಿ : 2ವರ್ಷ ಹಿಂದೇ ಮಾಡಿರುವ ಮನವಿಗೆ ಕ್ರಮ ಇಲ್ಲ !
ಇಲ್ಲಿ ಕಟ್ಟಡಗಳ ನಿರ್ಮಾಣವಾಗಿದೆ. ಅರಣ್ಯ ಭೂಮಿಗೆ ಖಾಸಗಿಯವರು ತಂತಿ ಬೇಲಿ. ಗೇಟ್ಗಳನ್ನು ಅಳವಡಿಸಿದ್ದಾರೆ. ಬೆಂಗಳೂರಿನ ಭೂಮಾಫಿಯಾ ಪ್ರವೇಶವಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಅಕ್ರಮ ಭೂ ದಾಖಲೆ ತಿದ್ದುಪಡಿಗಳು ನಡೆಯುತ್ತಿವೆ ಎಂದು ಸುತ್ತಲಿನ ಹಳ್ಳಿಗಳ ರೈತರು ಹೇಳುತ್ತಾರೆ. ಎಕ್ಕದ್ದೆ, ಕೈನಲ್ಲಿ ದಿಂಡ, ದೊಡ್ಡಿನಮನೆ, ಕರುಣಾಪುರ ಗ್ರಾಮಗಳ ರೈತರು 2020-21 ರಲ್ಲಿ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ಜಿಲ್ಲಾಡಳಿತದ ಗಮನ ಸೆಳೆಯಲಾಗಿತ್ತು. ಆ ಹಂತದಲ್ಲೇ ಕ್ರಮ ಕೈಗೊಂಡಿದ್ದರೆ ನೂರಾರು
ಎಕರೆ ಅರಣ್ಯ ನಾಶವಾಗುವುದು ನಿಲ್ಲುತ್ತಿತ್ತು ಎಂದು ಸುತ್ತಲಿನ ಹಳ್ಳಿಗಳ ಜನರು ಅಭಿಪ್ರಾಯ ಪಡುತ್ತಾರೆ.
Also read: ಬಂದೂಕಿನಿಂದ ಗುಂಡು ಹಾರಿಸಿ ಮಾವನನ್ನೇ ಕೊಂದ ಸೊಸೆ
ಮನವಿ ಆಗ್ರಹ : ಜಿಲ್ಲಾಡಳಿತ, ಜಿಲ್ಲಾ ಅರಣ್ಯ ಇಲಾಖೆ ತುರ್ತಾಗಿ ಸ್ಥಳ ಪರಿಶೀಲನೆ ಮಾಡಿ 600 ಎಕರೆ ಡೀಮ್ ಅರಣ್ಯ, 25 ಲಕ್ಷ ಗಿಡಮರಗಳು ನಾಶವಾಗದಂತೆ ರಕ್ಷಣೆ ನೀಡಬೇಕು. ಕಂದಾಯ ಕಾಗದ ಪತ್ರ ತಿದ್ದುಪಡಿ ಅಕ್ರಮ ಮಾಡದಂತೆ ತಡೆ ಹಾಕಬೇಕು. ಯಾವುದೇ ಮರ ಗಿಡ ಕಟಾವಿಗೆ ಹಾಗೂ ಕಾಮಗಾರಿಗೆ ಅವಕಾಶ ನೀಡಬಾರದು ಎಂದು ಗ್ರಾಮಗಳ ಜನ ಜಿಲ್ಲಾಧಿಕಾರಿಗಳಿಗೆ
ಮನವಿ ಮಾಡಿದ್ದಾರೆ. ಕಂದಾಯ ಕಾಯಿದೆ, ಅರಣ್ಯ ಕಾಯಿದೆ, ಜೀವ ವೈವಿಧ್ಯ ಕಾಯಿದೆ ಜಾರಿ ಮಾಡಿ ಸೂಕ್ಷ್ಮ ಅರಣ್ಯಗಳ ರಕ್ಷಣೆ ಮಾಡಬೇಕು ಎಂದಿದ್ದಾರೆ.
ನೇರಳೆ, ಧೂಪ, ತೇಗ, ಹೊನ್ನೆ, ಹಲಸು, ಬೆಲ್ಲವಾರ, ಗುಳಮಾವು, ಬಚ್ಚಾಣಿ, ಭೋಗೆ, ಹೈಗ, ಹುಲುಚಪ್ಪ, ಹೆಬ್ಬಲಸು, ಹರಳು, ಗುರಿಗೆ, ತಾರೆ, ಸುರಹೊನ್ನೆ, ನೆಟ್ಟುಗಾರ, ಬೈನೆ, ಸಂಪಿಗೆ, ಗಣಪೆ, ಬೂರಿ. ಘನತೆ, ದೇವದಾರು, ಕೆಂದಲ, ನಂದಿ, ರಾಮಪತ್ರೆ, ಮಂಗಪ್ಪ, ಇಪ್ಪ ಇತ್ಯಾದಿ ವಿನಾಶದ ಅಂಚಿನ ನೂರಾರು ವೃಕ್ಷ ವೈವಿಧ್ಯ ಇಲ್ಲದೆ. IUCN Red list ನಲ್ಲಿ ಬರುತ್ತವೆ. ಈ ಪ್ರದೇಶ 1940-50 ರಲ್ಲಿ ಕಾನು ಅರಣ್ಯ ಆಗಿತ್ತು . ಆನಂತರ ಖಾಸಗಿಯವರು ಭೂ ದಾಖಲೆ ತಿದ್ದುಪಡಿ ಮಾಡಿಸಿಕೊಂಡಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿ ಕಂದಾಯ ಇಲಾಖೆ ಅರಣ್ಯ ಇಲಾಖೆಯ ಜಂಟಿ ಪರಿಶೀಲನೆಗೆ ಜಿಲ್ಲಾಧಿಕಾರಿ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬೇಕು. ಭೂದಾಖಲೆ
ಆರ್.ಆರ್.56ನಲ್ಲಿ ಇಬ್ಬರು ಖಾಸಗಿಯವರಿಗೆ ತಲಾ 300 ಎಕರೆ ಭೂಮಿ ಹೇಗೆ ಸರ್ಕಾರ ನೀಡಲು ಸಾಧ್ಯ. ಈ ಬಗ್ಗೆ ಯಾವ ಉಲ್ಲೇಖವೂ ಇಲ್ಲ ಎಂದು ಭೂ ದಾಖಲೆ ತಜ್ಞರು ಅಭಿಪ್ರಾಯ ನೀಡುತ್ತಾರೆ. ಈ ಪ್ರದೇಶವನ್ನು ಜಿಲ್ಲಾ ಅರಣ್ಯ ಎಂದು ಸರ್ಕಾರ ಘೋಷಿಸಬಹುದು. ಜೀವವೈವಿಧ್ಯ ತಾಣಪಟ್ಟಿಗೆ ಸೇರ್ಪಡೆ ಮಾಡಬಹುದು ಎಂದು ಜೀವವೈವಿಧ್ಯ ಮಂಡಳಿ ಸದಸ್ಯ ಕೆ. ವೆಂಕಟೇಶ ಹೇಳಿದ್ದಾರೆ.
ಇಂಥ 10-15 ಪ್ರಕರಣಗಳು ಶಿವಮೊಗ್ಗ ಜಿಲ್ಲೆಯಲ್ಲಿ ಇವೆ. ಸರ್ಕಾರ ಪಶ್ಚಿಮ ಘಟ್ಟದ ಇಂಥ ಸೂಕ್ಷ್ಮ ಅರಣ್ಯಗಳ ಸಂರಕ್ಷಣೆ, ನೀತಿ, ನಿರೂಪಣೆಗೆ ಅಧಿಕಾರಿಗಳು ತಜ್ಞರ ಸಮಿತಿ ನಿಯುಕ್ತಿ ಮಾಡಿ ವರದಿ ಆಧಾರದಲ್ಲಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಕಾರ್ಯಕರ್ತ ಶ್ರೀಪಾದ ಬಿಚ್ಚುಗತ್ತಿ ಹೇಳಿದ್ದಾರೆ.
ಈ ವೇಳೆ ವೃಕ್ಷಲಕ್ಷ ಆಂದೋಲನದ ಆನೆಗುಳಿ ಸುಬ್ರಾವ್ ಮೊದಲಾದವರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post