ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದ ದಂಡಾವತಿ ಬ್ಲಾಕ್ನಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ ಹಿಂಭಾಗದ ಉದ್ಯಾನದಲ್ಲಿ ಜಯಂತಿ ಗ್ರಾಮದ ನಿವಾಸಿ ಸಂದ್ಯಾ ಮತ್ತು ಬಸವರಾಜ್ ದಂಪತಿ ತಮ್ಮ ಎರಡನೇ ಮಗುವಿನ ನಾಮಕರಣ ಹಿನ್ನೆಲೆಯಲ್ಲಿ ಸಸಿ ನೆಡುವ ಮೂಲಕ ಪರಿಸರ ಪ್ರೇಮ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಬಸವರಾಜ್ ಅವರು, ಪರಿಸರ ಉಳಿದರೆ ಮಾತ್ರ ಮನುಕುಲದ ಉಳಿವು ಸಾಧ್ಯವಾಗುತ್ತದೆ. ಮರಗಳು ಪರಿಸರಕ್ಕೆ ಪೂರಕವಾಗಿ ಹಣ್ಣು-ಆಹಾರ ಒದಗಿಸುತ್ತಾ, ಪಕ್ಷಿ-ಪ್ರಾಣಿ ಸಂಕುಲಕ್ಕೆ ನೆರವನ್ನು ನೀಡುತ್ತಿರುತ್ತವೆ. ಅಂತೆಯೇ ತಮ್ಮ ಪುತ್ರ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಸಮಾಜಕ್ಕೆ ಮಾದರಿಯಾಗಬೇಕು ಎನ್ನುವ ಉದ್ದೇಶದಿಂದ ಸಸಿಗಳನ್ನು ನೆಡಲಾಗುತ್ತಿದೆ. ಇದಕ್ಕೆ ಪತ್ನಿ ಸಂದ್ಯಾ ಅವರೇ ಸ್ಫೂರ್ತಿಯಾಗಿದ್ದಾರೆ ಮತ್ತು ನೆಮ್ಮದಿ ಗ್ರುಪ್ ಆಫ್ ಸರ್ವಿಸಸ್ ನವರು, ಪರಿಸರಾಸಕ್ತರು ಕೈ ಜೋಡಿಸಿದರು ಎಂದರು.
ಪರಿಸರ ತಜ್ಞ ಮತ್ತು ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಪ್ರತಿಯೊಬ್ಬರು ಬೆಳೆಯುವುದೇ ಪ್ರಕೃತಿಯೊಂದಿಗೆ. ಪ್ರಕೃತಿ ಹಾಳಾದಲ್ಲಿ ಸಂಸ್ಕೃತಿಯ ಮೇಲೆಯು ಪರಿಣಾಮ ಭೀರುತ್ತದೆ. ಮುಂದಿನ ಪೀಳಿಗೆಗೆ ಪೃಕೃತಿಯನ್ನು ಅರ್ಥೈಸುವ ಜೊತೆಗೆ ಬೆಳೆಸುವಂತಹ ಕೆಲಸವನ್ನು ಮಾಡಬೇಕಾಗುತ್ತದೆ. ಮಗುವಿನ ನಾಮಕರಣ ಕಾರ್ಯಕ್ರಮದಲ್ಲಿ ಸಸಿ ನೆಡುವ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ ಮತ್ತು ಶ್ಲಾಘನೀಯವಾಗಿದೆ. ಶುಭ ಸಂದರ್ಭಗಳಲ್ಲಿ ಸಸಿ ನೆಡುವ ಪರಿಪಾಠ ಉತ್ತಮವಾದ ಬೆಳವಣಿಗೆ. ಪರಿಸರ ನಮಗೇನು ನೀಡಿದೆ ಎನ್ನುವದಕ್ಕಿಂತ ನಮ್ಮಗಳ ಕೊಡುಗೆ ಏನು ಎಂಬುದು ಮುಖ್ಯವಾಗುತ್ತದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದರು.
Also read: ಮಾರ್ಚ್ ಅಂತ್ಯದೊಳಗೆ ಜಲ ಜೀವನ ಮಿಷನ್ ಕಾಮಗಾರಿ ಪೂರ್ಣಗೊಳಿಸಿ
ನೆಮ್ಮದಿ ಗ್ರುಪ್ ಆಫ್ ಸರ್ವಿಸಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೆಮ್ಮದಿ ಸುಬ್ಬು ಮಾತನಾಡಿ, ಪರಿಸರಕ್ಕೆ ಪೂರಕವಾದ ಕೊಡುಗೆಗಳನ್ನು ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅಂತೆಯೇ ಈ ಒಂದು ನಾಮಕರಣ ಶಾಸ್ತ್ರವನ್ನು ಸಸಿ ನೆಡುವ ಮೂಲಕ ಚಾಲನೆ ನೀಡುವ ಜೊತೆಗೆ ನೆಮ್ಮದಿ ಇವೆಂಟ್ಸ್ಗೂ ಸಹ ಆರಂಭಗೊಳಿಸಲಾಗುತ್ತಿದೆ ಎಂದರು.
ನಂತರ ಕುಟುಂಬಸ್ಥರು ಮತ್ತು ಪೋಷಕರು ಶಾಸ್ತ್ರ್ರೋಕ್ತವಾಗಿ ಮಗುವಿಗೆ ‘ಸ್ಕಂದ’ ಎಂದು ನಾಮಕರಣ ಮಾಡಿದರು. ಈ ಸಂದರ್ಭದಲ್ಲಿ ಪರಿಸರಕ್ಕೆ ಪೂರಕವಾದ ಕಲ್ಪವೃಷ್ಷ, ಮಾವು, ಹಲಸು, ನೋನಿ, ನೆರಳಿನ ಗಿಡಗಳು ಸೇರಿದಂತೆ ಹಲವು ಬಗೆಯ ಸಸಿಗಳನ್ನು ನೆಡಲಾಯಿತು. ಗಿಡಕ್ಕೆ ನಿತ್ಯ ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ಕುರಿತು ಪರಿಸರಾಸಕ್ತರು ಭರವಸೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಿ.ಡಿ. ನಾಗರಾಜ, ಸರೋಜಮ್ಮ, ಶಾಂತಮ್ಮ, ಶಿಲ್ಪಾ ರವಿಶಂಕರ್, ಸವಿತಾ ನಾಗರಾಜ್, ಸುಜಾತ ಅಣ್ಣಪ್ಪ, ನಾಗರತ್ನಾ ದಾಮೋಧರ, ನಿರಂಜನ್, ಕವಿತಾ, ಹಿರಿಯಪ್ಪ, ಉಷಾ, ರೂಪಾ ಸತೀಶ್, ನೆಮ್ಮದಿ ಗ್ರುಪ್ ಆಫ್ ಸರ್ವಿಸಸ್ ಮುಖ್ಯಸ್ಥೆ ಅನಿತಾ ಸುಬ್ಬು, ಶ್ರೀರಕ್ಷಾ ಸುಬ್ಬು, ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಮಹೇಶ್ ಖಾರ್ವಿ, ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯ ಮಧುಕೇಶ್ವರ, ನಾಗರಾಜ ಹಿರೇಶಕುನ ಸೇರಿದಂತೆ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post