ಕಲ್ಪ ಮೀಡಿಯಾ ಹೌಸ್ | ಸೊರಬ |
ವಿದ್ಯಾರ್ಥಿಗಳಲ್ಲಿ ಮೊಬೈಲ್ ಗೀಳು ದೊಡ್ಡ ಪಿಡುಗಾಗಿದೆ. ಇದನ್ನು ಕಡಿಮೆ ಮಾಡದಿದ್ದರೆ ಮುಂದೆ ಬಹುದೊಡ್ಡ ವಿಪತ್ತು ಕಾದಿದೆ. ಮೊಬೈಲ್ ಬಳಕೆ ಹೆಚ್ಚಾದಲ್ಲಿ ಕೈಯಲ್ಲಿರುವ ನರಗಳು ಸವೆದುಹೋಗಿ ಕೆಲಸ ಮಾಡಲು ಅಶಕ್ತತೆ ತಲೆದೋರುತ್ತದೆ ಎಂದು ಶಿವಮೊಗ್ಗ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ರಾಜಶೇಖರ್ ಹೆಬ್ಬಾರ್ ಹೇಳಿದರು.
ಪಟ್ಟಣದ ಡಾ.ರಾಜ್ ಕಲಾಕ್ಷೇತ್ರ ರಂಗಮಂದಿರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2021ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ನೆಸ್ಸೆಸ್, ಯುವ ರೆಡ್ಕ್ರಾಸ್, ರೋವರ್ಸ್, ರೇಂಜರ್ಸ್ ವೇದಿಕೆಗಳ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಗರ್ಲ್ ಮತ್ತು ಬಾಯ್ಫ್ರೆಂಡ್ಗಳಿಗಾಗಿ ಸಮಯವನ್ನು ಹಾಳು ಮಾಡಿಕೊಳ್ಳದೇ ಉತ್ತಮ ಹವ್ಯಾಸವನ್ನು ಬೆಳೆಸಿಕೊಂಡು ಓದಿನ ಆಸಕ್ತಿಯನ್ನು ಹೆಚ್ಚಿಸಿಕೊಂಡು ಕ್ರಿಯಾಶೀಲತೆ ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ದೇಶದ ಶಕ್ತಿಯಾಗಿದ್ದು, ಅವರಿಗೆ ತಂದೆ-ತಾಯಿ ಮೊದಲ ಗುರುವಾದರೆ, ಶಿಕ್ಷಕರು ಎರಡನೇ ಗುರುವಾಗಿರುತ್ತಾರೆ. ಮನಸ್ಸನ್ನು ಮುದಗೊಳಿಸುವ ಒಳ್ಳೆಯ ಪುಸ್ತಕಗಳನ್ನು ಓದುವ ಪರಿಪಾಠವನ್ನು ಬೆಳೆಸಿಕೊಳ್ಳಿ. ಮನಸ್ಸನ್ನು ಕೆರಳಿಸುವ ಪುಸ್ತಕ ಮತ್ತು ಸಾಮಾಜಿಕ ಜಾಲತಾಣಗಳ ಕಡೆಗೆ ವಾಲದಿರಿ ಎಂದು ಎಚ್ಚರಿಕೆ ನೀಡಿದರು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜು ಸಹ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಮಾತನಾಡಿ, ಎಲ್ಲ ವಿದ್ಯಾರ್ಥಿಗಳು ಕ್ರಿಯಾಶೀಲತೆ ಉಳ್ಳವರೇ ಆಗಿರುತ್ತಾರೆ. ಅವರು ಮನಸ್ಸು ಮಾಡಿದರೆ ಓದಿನ ಜೊತೆಗೆ ಕಥೆ, ಕವನ, ಚಿತ್ರ ಇನ್ಯಾವುದೇ ಅವರಿಗೆ ಆಸಕ್ತಿ ಇರುವ ವಿಷಯಗಳಲ್ಲಿ ಸಾಧನೆ ಮಾಡಬಲ್ಲರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಎಎಸ್, ಐಎಎಸ್ ಇನ್ನೂ ಹಲವಾರು ಪರೀಕ್ಷೆಗಳನ್ನು ಎದುರಿಸಲು ಸಿದ್ಧರಾಗಬೇಕಿದೆ ಎಂದರು.
ಪ್ರಾಂಶುಪಾಲೆ ಸೀಮಾ ಕೌಸರ್ ಅಧ್ಯಕ್ಷತೆ ವಹಿಸಿದ್ದರು. ನೌಕರ ಸಂಘದ ಅಧ್ಯಕ್ಷ ಮಂಜುನಾಥ.ಎಸ್, ಕಾಲೇಜು ಅಭಿವೃದ್ಧಿ ಸಮಿತಿಯ ಕೆ.ಶಿವಾನಂದ, ತಿಮ್ಮೇಶಪ್ಪ, ಕೆ.ಪಾಂಡುರಂಗ, ಉಪನ್ಯಾಸಕರಾದ ವಿಶ್ವನಾಥ್, ಮಧುರಾ ಯಾದವ್, ಶಂಕರ ನಾಯ್ಕ್, ರಾಜಪ್ಪ ಎಂ.ಹೆಚ್, ಪೂರ್ಣಿಮಾ ಭಾವೆ, ಶೋಯಬ್ ಅಹ್ಮದ್, ಸಂತೋಷ್ ಕುಮಾರ್ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post