ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಬಸ್ತಿಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಮುಂಬರುವ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಮಂಗಳವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಬಸ್ತಿಕೊಪ್ಪ ಗ್ರಾಮದ ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಗ್ರಾಮಸ್ಥರು ಆಗ್ರಹಿಸಿ ಪ್ರತಿಭಟನೆ ನಡೆಸಿ, ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದ ಮುಖಂಡ ನಾಗರಾಜ ನಾಯ್ಕ್ ಮಾತನಾಡಿ, ಗಣಿಗಾರಿಕೆಯಿಂದಾಗಿ ಗ್ರಾಮಸ್ಥರು ಅಕ್ಷರಷಃ ನಲುಗಿ ಹೋಗಿದ್ದಾರೆ. ನಿತ್ಯ ನೂರಾರು ಲಾರಿಗಳು ಸಂಚರಿಸುತ್ತಿದ್ದು, ರಸ್ತೆಗಳು ಹಾಳಾಗಿದೆ. ಕಲ್ಲು ಗಣಿಗಾರಿಕೆ ಸ್ಫೋಟದ ಸದ್ದಿಗೆ ಭೂಮಿ ಕಂಪಿಸುತ್ತಿದೆ. ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಗ್ರಾಮಸ್ಥರು ಜೀವ ಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಅರಣ್ಯ ಭೂಮಿಯು ನಾಶವಾಗುತ್ತಿದ್ದು, ಕಾಡು ಪ್ರಾಣಿಗಳು ಗ್ರಾಮದತ್ತ ವಲಸೆ ಬರುತ್ತಿವೆ. ಕೂಡಲೇ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರಾದ ನೂರ್ ಆಹ್ಮದ್ ಮಾತನಾಡಿ, ರಸ್ತೆ ದುಸ್ಥಿತಿಯಿಂದಾಗಿ ತುರ್ತು ಸ್ಥಿತಿಯಲ್ಲಿ ಅಂಬ್ಯುಲೆನ್ಸ್ ಕೂಡ ಊರಿಗೆ ಬರದಂತಾಗಿದೆ. ಈ ಹಿಂದೆ ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೃಷಿ ಭೂಮಿ, ಕುಡಿಯುವ ನೀರು ಧೂಳಿನಿಂದ ಕಲುಷಿತವಾಗುತ್ತಿದೆ. ಸ್ಫೋಟದ ತೀವ್ರತೆಗೆ ಶಾಲಾ ಕೊಠಡಿಗಳು ಬಿರುಕುಬಿಟ್ಟಿವೆ. ಕೂಡಲೇ ಕಲ್ಲು ಗಣಿಗಾರಿಕೆ ಸ್ಥಗಿತ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿವಿಧ ಹಂತದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
Also read: 1.25 ಲಕ್ಷ ಕೋಟಿ ರೂ. ಕಪ್ಪು ಹಣ ವಶಕ್ಕೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಗ್ರಾಮಸ್ಥರಾದ ಡಿ. ಮಂಜಪ್ಪ ಮಾತನಾಡಿ, ಗಣಿ ಧೂಳು, ವಾಹನಗಳ ಧೂಳಿನಿಂದ ಜನ-ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ. ಜೊತೆಗೆ ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಆರೋಗ್ಯ ಮೇಲೆ ತೀವ್ರತರದ ಪರಿಣಾಮ ಬೀರುತ್ತಿದೆ. ಗಣಿಗಾರಿಕೆಯಿಂದ ತ್ಯಾಜ್ಯ ನೀರನ್ನು ನೇರವಾಗಿ ಕೃಷಿ ಜಮೀನುಗಳಿಗೆ ಹರಿಸುತ್ತಿರುವುದರಿಂದ ಜಮೀನುಗಳು ಹಾಳಾಗುತ್ತಿದೆ. ಗ್ರಾಮಸ್ಥರು ಮನವಿ ಸಲ್ಲಿಸಿದ ಸಂದರ್ಭದಲ್ಲಿ ನೆಪ ಮಾತ್ರಕ್ಕೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ. ವಿನಃ, ಯಾವುದೇ ಪರಿಹಾರ ದೊರಕಿಸಿಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸ್ತಿಕೊಪ್ಪದಲ್ಲಿ ಗ್ರಾಮಸ್ಥರ ವಿರೋಧದ ನಡುವೆಯೂ ಪುನಃ ಹೊಸದಾಗಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಇನ್ನೊಂದು ಗ್ರಾಮವನ್ನು ನಾಶಪಡಿಸುವ ಇಂತಹ ಕೆಲಸ ಪ್ರಜಾಪ್ರಭುತ್ವ ಕ್ಕೆ ಪೂರಕವಲ್ಲ. ಗಣಿಗಾರಿಕೆ ಸ್ಥಗಿತವಾಗದಿದ್ದಲ್ಲಿ ತಾಲೂಕು ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ರಾಜ್ಯ ಜೀವ ವೈವಿಧ್ಯ ಮಂಡಳಿಯ ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಗ್ರಾಮಸ್ಥರಾದ ಪರಶುರಾಮ್, ಜಿ. ಶಶಿಧರ್, ಲೋಕೇಶ್, ಮಂಜಪ್ಪ, ದೇವೇಂದ್ರ, ಪರಮೇಶ, ಕಮಲಾಕರ, ರಘುಪತಿ, ಭರ್ಮಪ್ಪ, ಗಣಪತಿ, ನಾರಾಯಣ, ರಾಜೇಂದ್ರ ಪ್ರವೀಣ್ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post