ಸೊರಬ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದರೂ ಸಹ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿರುವುದರಿಂದ ತಾಲೂಕಿನ ಅಭಿವೃದ್ದಿಯ ಕನಸನ್ನು ನನಸಾಗಿಸಲು ಉತ್ತಮ ಅವಕಾಶ ಸಿಕ್ಕಂತಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದರು.
ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರದಲ್ಲಿ ಪ್ರಥಮ ಬಾರಿಗೆ ತಾಲೂಕಿಗೆ ಭೇಟಿ ನೀಡಿ, ಪ್ರವಾಸಿ ಮಂದಿರದ ಮುಂಭಾಗದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮತ್ತು ಮತದಾರರಿಗೆ ಅಭಿನಂದನೆ ಯನ್ನು ಸಲ್ಲಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ನಾನು ಸೋತಿರಬಹುದು ಆದರೆ ರಾಜ್ಯದಲ್ಲಿ ಗೆದ್ದಿದ್ದೇವೆ. ರಾಜ್ಯದ ಜನರ ನಿರೀಕ್ಷೆಯಂತೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.
ಸೋಲಿನ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ರಾಜಕಾರಣದ ಶೈಲಿಯೇ ಬೇರೆ. ನಂಬಿದ ಜನರನ್ನು ಹಾಗೂ ಕಾರ್ಯಕರ್ತರನ್ನು ಎಂದಿಗೂ ಕೈ ಬಿಡುವ ಪ್ರಶ್ನೆಯೇ ಇಲ್ಲ. ಮತದಾರರ ತೀರ್ಪುನ್ನು ಗೌರವಿಸಬೇಕಾಗಿರುವುದು ನಮ್ಮ ಧರ್ಮ. ಚುನಾವಣೆಯಲ್ಲಿ ನಮ್ಮ ಸೋಲಿಗೆ ಕಾರಣವಾಗಿರುವ ವಿಷಯಗಳ ಬಗ್ಗೆ ಪರಸ್ಪರ ವೈಯಕ್ತಿಕವಾಗಿ ಚರ್ಚಿಸಿಕೊಳ್ಳದೇ, ತಮ್ಮ ತಮ್ಮ ಬೂತ್ ಮಟ್ಟದಲ್ಲಿ ವಿಮರ್ಶೆ ಮಾಡಿಕೊಳ್ಳುವುದು ಒಳಿತು ಎಂದರು.
ಶಾಸಕನಾಗಿದ್ದ ಐದು ವರ್ಷದ ಅಧಿಕಾರಾವಧಿಯಲ್ಲಿ ಪ್ರತಿಪಕ್ಷದ ಶಾಸಕನಾಗಿದ್ದರೂ ಆಡಳಿತ ಪಕ್ಷದಲ್ಲಿದ್ದ ಮಂತ್ರಿಗಳ ಮನೆ ಬಾಗಿಲಿಗೆ ಹೋಗಿ ಅನುದಾನಗಳನ್ನು ತರುವ ಮೂಲಕ ತಾಲ್ಲೂಕನ್ನು ಸಾಕಷ್ಟು ಅಭಿವೃದ್ದಿ ಪಡಿಸಿದ ತೃಪ್ತಿ ನನಗಿದೆ. ಈ ಬಾರಿ ಚುನಾವಣೆಯಲ್ಲಿ ಹಿಂದುತ್ವದ ಅಲೆ ಕೆಲಸ ಮಾಡಿದೆ. ಪಕ್ಷ ಮತ್ತು ಅಭ್ಯರ್ಥಿಯನ್ನು ನೋಡಿ ಮತದಾರರು ಆಯ್ಕೆ ಮಾಡಿಕೊಳ್ಳಲು ಮುಂದಾಗಬೇಕಿತ್ತು. ಉತ್ತಮ ಕೆಲಸ ಮಾಡುವ ಮನೋಭಾವ ಹೊಂದಿರುವ ವ್ಯಕ್ತಿಯಾದ ನನ್ನನ್ನು ತಿರಸ್ಕರಿಸುವುದರಿಂದ ಕ್ಷೇತ್ರಕ್ಕೆ ಅನ್ಯಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಾಕಷ್ಟು ಅಭಿವೃದ್ಧಿ ಮಾಡಿದ ಹಿರಿಯರಾದ ಕಾಗೋಡು ತಿಮ್ಮಪ್ಪನವರು ಸೇರಿದಂತೆ ಅನೇಕರು ಚುನಾವಣೆಯಲ್ಲಿ ಸೋತಿದ್ದಾರೆ, ಸೋಲು ಗೆಲುವು ಸಹಜ. ಸೋಲಿನಿಂದ ಯಾರೂ ಎದೆಗುಂದಬೇಕಿಲ್ಲ. ನಾನು ಶಾಸಕನಾಗುವ ಪೂರ್ವದಲ್ಲಿ ಎರಡು ಚುನಾವಣೆಯಲ್ಲಿ ಸೋತಿದ್ದೇನೆ ಆದರೂ ಕುಗ್ಗಿರಲಿಲ್ಲ. ತಾಲ್ಲೂಕಿನ ಜನರ ಜೊತೆ ಸತತವಾಗಿ ಒಡನಾಟವಿಟ್ಟುಕೊಂಡು ಅನೇಕ ಹೋರಾಟ ಮಾಡಿದ್ದೇನೆ. ಮುಂದೆಯೂ ಸಹ ಸುಮ್ಮನೆ ಕೂರದೇ ಜನಪರ ಕೆಲಸದಲ್ಲಿ ಸದಾ ಇರುತ್ತೇನೆ ಎಂದು ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಿದರು.
ಪಕ್ಷ ನನ್ನನ್ನು ರಾಜ್ಯ ನಾಯಕನನ್ನಾಗಿ ಬೆಳೆಸಿದೆ. ರಾಮನಗರದಿಂದ ಸ್ಪರ್ಧೆ ಕೇವಲ ಸುಳ್ಳು ವದಂತಿ ಸೊರಬ ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸಂದೇಶಗಳನ್ನು ಹಾಕಬಾರದು. ತಾಲ್ಲೂಕಿನ ಜನ ನನಗೆ 58 ಸಾವಿರ ಮತ ನೀಡಿದ್ದಾರೆ. ನನ್ನ ಪರ ಮತ ಚಲಾಯಿಸಿದವರಿಗೂ ಚಲಾಯಿಸದೇ ಇರುವವರಿಗು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಕೆ.ಪಿ. ರುದ್ರಗೌಡ, ವಕ್ತಾರ ಎಂ.ಡಿ. ಶೇಖರ್, ಬಿಎಸ್ಪಿ ತಾಲೂಕು ಅಧ್ಯಕ್ಷ ಎಲ್.ಜಿ. ಗುಡ್ಡಪ್ಪ, ಡಿಎಸ್ಎಸ್ ರಾಜ್ಯವಿಭಾಗೀಯ ಸಂಚಾಲಕ ಗುರುರಾಜ್, ಜಿಪಂ ಸದಸ್ಯರಾದ ಶಿವಲಿಂಗಗೌಡ, ವೀರೇಶ್ ಕೊಟಗಿ, ತಾರಾ ಶಿವಾನಂದಪ್ಪ, ರಾಜೇಶ್ವರಿ, ತಾಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಸದಸ್ಯರಾದ ನಾಗರಾಜ್ಚಂದ್ರಗುತ್ತಿ, ಸುನೀಲಗೌಡ ಮತ್ತಿತರರಿದ್ದರು.
(ವರದಿ: ಮಧುರಾಮ್, ಸೊರಬ)
Discussion about this post