ಕಲ್ಪ ಮೀಡಿಯಾ ಹೌಸ್ | ಸೊರಬ |
ಮಲೆನಾಡು ಅರಣ್ಯ ಆಧಾರಿತ ಕೃಷಿಗೆ ಪೂರಕವಾಗಿರುವುದರಿಂದ ಅರಣ್ಯ ಕಳೆದುಕೊಂಡ ಕೃಷಿಕಾರ್ಯಕ್ಕೆ ಭವಿಷ್ಯವಿಲ್ಲ, ಅರಣ್ಯ ನಾಶಕ್ಕೆ ಪೈಪೋಟಿ ನಡೆಸಿದರೆ ಮೊದಲ ಬಲಿಪಶು ನಾವೇ ಆಗಿರುತ್ತೇವೆ ಎಚ್ಚರವಿರಲಿ ಎಂದು ಜೀವೈಮಂ ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ತಾಲ್ಲೂಕಿನ ದೂಗೂರು ಗ್ರಾಪಂ ಕಚೇರಿಯಲ್ಲಿ ಜಿಲ್ಲಾ ಸಾಮಾಜಿಕ ಅರಣ್ಯ, ಸಾಅ ಉಪವಿಭಾಗ ಸಾಗರ, ಸೊರಬ ಸಾಅ ಇಲಾಖೆ ಮತ್ತು ಗ್ರಾಪಂ ಸಹಯೋಗದಲ್ಲಿ ನಡೆದ ಆರ್ಕೆವಿವೈ ಯೋಜನೆಯಡಿಯ ರೈತರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಪರಿಸರ ಸಂರಕ್ಷಣೆ ಪರಿಸರ ಸ್ನೇಹಿ, ವಾದಿಗಳದ್ದಷ್ಟೆ ಅಲ್ಲ, ಅದು ಈ ಭೂಮಿ ನೀಡಿದ ಅನ್ನ ತಿನ್ನುವ ಎಲ್ಲರದ್ದು ನೆನಪಿಡಿ. ಪ್ರಕೃತಿಯೆ ಎಚ್ಚರಿಕೆಯ ಗಂಟೆ ಭಾರಿಸುತ್ತಿದ್ದರೂ ನಾವಿನ್ನೂ ಎಚ್ಚರವಾಗದಿದ್ದರೆ ನಾವು ಶಾಶ್ವತ ನಿದ್ರೆ ಮಾಡಬೇಕಾಗುತ್ತದೆ ಎಂದ ಅವರು ಇಲ್ಲಿನ ಅಸಂಖ್ಯ ಕೆರೆಗಳಿಗೆ ಅರಣ್ಯಗಳೇ ಆಧಾರ, ಕೃಷಿ ಕೊಳವೆ ಬಾವಿಗಳಿಗೆ ಕೆರೆ, ಕಾಡು ಆಧಾರ. ಪ್ರಸ್ತುತ ತಾಲ್ಲೂಕಿನ ಹಲವೆಡೆ ಅಂತರ್ಜಲದ ಕೊರತೆಯಿಂದಾಗಿ ಕೊಳವೆ ಬಾವಿಗಳು ನಿಷ್ಕ್ರಿಯವಾಗಿವೆ. ಶಾಶ್ವತ ಬೆಳೆಗಳು ತಮ್ಮ ಹಸಿರ ಉಸಿರನ್ನು ಕಳೆದುಕೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
Also read: ಶಿವಮೊಗ್ಗ | ಎನ್ಇಎಸ್ ಬಿಎಡ್ ಕಾಲೇಜಿಗೆ 2 ರ್ಯಾಂಕ್
ಸಾಅ ಇಲಾಖೆ ಆರ್ಎಫ್ಒ ಸಂಜಯ್ ಅವರು ಇಲಾಖೆಯಿಂದ ದೊರೆಯುವ ಗಿಡಗಳ ಕುರಿತು ಮಾಹಿತಿ ನೀಡಿ, ಅರಣ್ಯವೃದ್ಧಿಗೆ ಇಲಾಖೆ ಹಲವಾರು ಸವಲತ್ತುಗಳನ್ನು ನೀಡುತ್ತಿದ್ದು ಉಪಯೋಗಿಸಿಕೊಳ್ಳಬೇಕು. ಅತಿ ಕಡಿಮೆ ಬೆಲೆಗೆ ಬೆಲೆಬಾಳುವ ಗಿಡಗಳನ್ನು ಪ್ರತಿಯೊಬ್ಬರೂ ಪಡೆದು ಹಸಿರೀಕರಣಕ್ಕೆ ಮುಂದಾಗಬೇಕು ಎಂದರು.
ಗ್ರಾಪಂ ಅಧ್ಯಕ್ಷ ಫೈಯಾಜ್ ಅಹ್ಮದ್ ಅಧ್ಯಕ್ಷತೆ ವಹಿಸಿ ತಮ್ಮ ಗ್ರಾಪಂ ಜೀವವೈವಿಧ್ಯ ಸಂರಕ್ಷಣೆಗೆ ಬದ್ಧವಾಗಿದ್ದು ಪಂಚಾಯತಿ ವತಿಯಿಂದ ಕಠಿಣ ನಿಲುವಿನ ಮೂಲಕ ಅಮೂಲ್ಯ ಕೆರೆಗಳನ್ನು ಹಾಳು ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ. ಎನ್ಅರ್ಇಜಿ ಮೂಲಕ ಕೆರೆ ಸಂರಕ್ಷಣೆಗೂ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಗ್ರಾಪಂ ಪಿಡಿಒ ನಾಗರಾಜ್, ಸಾಅ ಅಧಿಕಾರಿ ರವೀಂದ್ರ, ಎನ್ಆರ್ಇಜಿ ಮೇಟಿ ರವಿಕುಮಾರ್, ಜಬಿಉಲ್ಲಾ ಟಿಎ ಸೊರಬ, ಫಾರೆಸ್ಟ್ ಗಾರ್ಡ್ ವಿರೂಪಾಕ್ಷಪ್ಪ, ಗ್ರಾಪಂ ಸದಸ್ಯರು, ಗ್ರಾಪಂ ವ್ಯಾಪ್ತಿಯ ಅನೇಕ ಗ್ರಾಮಸ್ಥರು ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post