ಕಲ್ಪ ಮೀಡಿಯಾ ಹೌಸ್ | ಸೊರಬ |
ಕುಡಿಯುವ ನೀರು ಪೂರೈಸಲು ಆಗ್ರಹಿಸಿ ತಾಲ್ಲೂಕಿನ ಶಕುನವಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಗ್ರಾಮದ ಮಹಿಳೆಯರು ಸೇರಿದಂತೆ ಅನೇಕರು ಸಮಸ್ಯೆ ಹೇಳಿಕೊಳ್ಳಲು ಪಂಚಾಯಿತಿ ಕಚೇರಿಗೆ ಹೋದರು. ಆದರೆ ಸಮಸ್ಯೆಗೆ ಸ್ಪಂದನೆ ಸಿಗದ ಕಾರಣ ಸ್ಥಳದಲ್ಲೇ ಕೆಲ ಹೊತ್ತು ಧರಣಿ ಕುಳಿತು ಸಂಬಂಧಿತ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.
ಶಕುನವಳ್ಳಿ ಹಾಗೂ ಸುತ್ತಲಿನ ಗ್ರಾಮದ ಸುಮಾರು 1400 ಕುಟುಂಬಗಳಿಗೆ ಕಳೆದ ಒಂದೂವರೆ ತಿಂಗಳಿಂದ ಸಮರ್ಪಕವಾಗಿ ಕುಡಿಯುವ ನೀರಿನ ಸೌಲಭ್ಯ ದೊರೆಯುತ್ತಿಲ್ಲ. ಗ್ರಾಮದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಮಾರಿ ಜಾತ್ರೆಯ ಸಮಯದಲ್ಲೂ ನೀರು ಲಭಿಸಲಿಲ್ಲ. ಖಾಸಗಿಯವರ ಬೊರ್ ವೆಲ್ ಮೊರೆ ಹೊಗುವ ಸನ್ನಿವೇಶ ನಿರ್ಮಾಣವಾಯಿತು. ಇದಲ್ಲದೇ ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯ ಮಕ್ಕಳ ಬಿಸಿಯೂಟಕ್ಕೂ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
Also read: ಸೊರಬ | ಮುಸ್ಲಿಂ ಮೀಸಲಿಗೆ ಸಂವಿಧಾನ ಬದಲಾವಣೆ ಹೇಳಿಕೆ | ಡಿಸಿಎಂ ಡಿಕೆಶಿ ವಿರುದ್ಧ ಬಿಜೆಪಿ ಪ್ರತಿಭಟನೆ
ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಪ್ರತಿಕ್ರಿಯಿಸಿದ ಗ್ರಾಪಂ ಪಿಡಿಓ ರಮೇಶಪ್ಪ ಮಾತನಾಡಿ, ಗ್ರಾಮದಲ್ಲಿ ನೀರಿನ ಸಮಸ್ಯೆಯ ಕುರಿತು ಈವರೆಗೂ ಮಾಹಿತಿ ಇರಲಿಲ್ಲ. ನೀರು ಗಂಟಿಗಳನ್ನು ಕರೆಸಿ, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಚಂದ್ರಶೇಖರ್ ಹೆಂಡಗಾರ್, ರಮೇಶ್ ನಾಡಿಗೇರ್, ಮಾಲತೇಶ್ ಚೌರದಾರ್, ವಾಣಮ್ಮ ಮಂಜುನಾಥ, ಗ್ರಾಮಸ್ಥರಾದ ಅಜ್ಜಪ್ಪ ಬನವಾಸೇರ್, ಗುಡ್ಡಪ್ಪ ಶಾನಳ್ಳಿ, ಮಾಲತೇಶ್, ಮನೋಜ್ ಬನವಾಸೇರ್, ಸಾವಿತ್ರಮ್ಮ ಬನವಾಸೇರ್, ಗಣೇಶ್ ಮುಳ್ಳಿರ್, ಎಲ್ಲಪ್ಪ ಸೇರಿದಂತೆ ಇತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post