ಕಲ್ಪ ಮೀಡಿಯಾ ಹೌಸ್
ಸೊರಬ: ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕೊರೋನ ಸೋಂಕಿನಿಂದಾಗಿ ಬಡವರು ಕೂಲಿ ಕಾರ್ಮಿ ಕರು ಕೆಲಸವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಜಾಗೃತಿಯನ್ನು ಹೊಂದಿ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ರೋಟರಿ ಕ್ಲಬ್ ನ ಟಿ. ಆರ್. ಅಧ್ಯಕ್ಷ ಸಂತೋಷ್ ಹೇಳಿದರು.

ತಾಲ್ಲೂಕಿನ ನಡಹಳ್ಳಿ ಗ್ರಾಮದ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಆಹಾರ ಕಿಟ್ ಗಳನ್ನು ರೋಟರಿ ಕ್ಲಬ್ ವತಿಯಿಂದ ವಿತರಿಸಿ ಮಾತನಾಡಿದ ಅವರು, ಕಳೆದೆರಡು ವರ್ಷಗಳಿಂದ ಕರೋನದಿಂದ ಜನರ ಆರ್ಥಿಕ ಜೀವನ ಸಂಪೂರ್ಣ ಹದಗೆಟ್ಟು ಚೇತರಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದೆ ಬಡವರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಈ ಆಹಾರದ ಕಿಟ್ಗಳನ್ನು ವಿತರಿಸಲಾಗುತ್ತಿದೆ. ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವ ಮೂಲಕ ಸರ್ಕಾ ರದ ನಿಯಮಗಳನ್ನು ಅನುಸರಿಸುವ ಮೂಲಕ ಕೊರೋನದಿಂದ ಮುಕ್ತರಾಗೋಣ ಎಂದರು.

ರಾಜು ಹಿರಿಯಾವಲಿ ಮಾತನಾಡಿ, ದುಡಿಯುವ ಕೈಗಳಿಗೆ ನೆರವು ನೀಡುವ ಕಾರ್ಯವನ್ನು ರೋಟರಿ ಸಂಸ್ಥೆ ಮಾಡುತ್ತಿದೆ ಜನತೆ ಕೊರೋನಗೆ ಧೃತಿಗೆಡದೆ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ತಮ್ಮ ಆರೋಗ್ಯದ ರಕ್ಷಣೆ ಮತ್ತು ತಮ್ಮ ಕುಟುಂಬದ ಸಂರಕ್ಷಣೆಗೆ ಜಾಗೃತರಾಗಬೇಕು. ಅನೇಕ ಸಂಘ-ಸಂಸ್ಥೆಗಳು ಸಹ ಸ್ವಯಂ ಪ್ರೇರಿತರಾಗಿ ಕೊರೋನ ಸಂಕಷ್ಟದಲ್ಲಿರುವರಿಗೆ ಸಹಾಯ ಹಸ್ತ ನೀಡುತ್ತಿವೆ. ಅಂತೆಯೇ ನಮ್ಮ ಕ್ಲಬ್ ವತಿಯಿಂದ ಆಯ್ದ ಬಡ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಸಂಸ್ಥಾಪಕ ಅಧ್ಯಕ್ಷ ದಂತ ವೈದ್ಯ ಜ್ಞಾನೇಶ್, ರೋಟರಿ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಗುತ್ತಿ, ವೇಣುಗೋಪಾಲ್, ರಾಘವೇಂದ್ರ, ಮನೋಹರ ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















