ಕಲ್ಪ ಮೀಡಿಯಾ ಹೌಸ್
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ|
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀಗುರುವೇ ನಮಃ/||
ಗುರುಗಳನ್ನು ತ್ರಿಮೂರ್ತಿಗಳಿಗೆ ಹೋಲಿಸುತ್ತ ವಂದಿಸುವ ಈ ಶ್ಲೋಕ ಬಹಳ ಅರ್ಥಪೂರ್ಣ ವಾಗಿದೆ. ನಾವು ಯಾವುದೇ ಶ್ಲೋಕಗಳನ್ನು ಪಠಣಮಾಡಲು ಆರಂಭಿಸುವಾಗ ‘ಶ್ರೀಗುರುಭ್ಯೋನಮಃ ಹರಿಃ ಓಂ”ಎಂದು ಭಕ್ತಿಯಿಂದ ಹೇಳುವುದನ್ನು ಕೇಳಿದ್ದೇವೆ. ಗುರುವಿನ ಸ್ಥಾನ ಅಂತಹದು.
ಸಂಗೀತ ಪಿತಾಮಹ ಶ್ರೀಪುರಂದರದಾಸರು “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದು ಬಣ್ಣಿಸಿದ್ದಾರೆ.
“ಗು” ಎಂದರೆ ನೆರಳು “ರು” ಎಂದರೆ ಚದುರಿಸುವುದು ಎಂದರ್ಥ. ಯಾರು ಅಜ್ಞಾನದ ಅಂಧಕಾರವನ್ನು ಯಾರು ಹೋಗಲಾಡಿಸುತ್ತಾರೋ ಅವರೇ ನಿಜವಾದ ಗುರುಗಳು.
ಶಿಷ್ಯರಿಗೆ ಕಲಿಸಿಕೊಡುವ ಗುರುಗಳು ಸಾಮಾನ್ಯವಾಗಿ ಶಿಷ್ಯರಿಗೆ ಸರಿಯಾದ ಮಾರ್ಗದರ್ಶಕರಾಗಿರುತ್ತಾರೆ. ಗುರುಪೂರ್ಣಿಮೆಯ ದಿನ ನಮಗೆ ವಿದ್ಯೆಕಲಿಸಿದ ಗುರುಗಳನ್ನು ಅಭಿವಂದಿಸುವ ದಿನವಾಗಿದೆ. ಈಗೆಷ್ಟು ಕಲಿತಿದ್ದೇವೆ, ಮುಂದೆ ಏನು ಕಲಿಯಬೇಕು. ಮತ್ತು ಮುಂದಿನ ಜೀವನದ ದಾರಿಯನ್ನು ನಿರ್ಧಾರಮಾಡಿ ಅದರ ಬಗ್ಗೆ ಸಂಪೂರ್ಣ ಗಮನ ವಿಡುವುದು ಈ ಶುಭ ದಿನದ ಉದ್ದೇಶ.
ತಂದೆಯು ಮಗನಿಗೆ ಜನ್ಮದಾತನಾದರೆ, ಗುರುಗಳು ಆತನನ್ನು ಜನನ ಮರಣಗಳ ಸಂಕೋಲೆಯಿಂದ ಮುಕ್ತ ಗೊಳಿಸಲು ಸಹಕರಿಸುತ್ತಾರೆ. ಪೂಜನೀಯ ಸ್ಥಾನದಲ್ಲಿ ಗುರುಗಳನ್ನು ನೋಡಬೇಕು. ತಂದೆತಾಯಿಗಳ ನಂತರ ಪ್ರಮುಖ ಸ್ಥಾನ ನೀಡಿ ಆಚಾರ್ಯ ದೇವೋ ಭವ ಎಂದೇ ಗುರುಗಳನ್ನು ಪೂಜಿಸಿ, ಗೌರವಿಸುವ ಭವ್ಯ ಪರಂಪರೆ ನಮ್ಮದು.
ಪೂಜ್ಯ ವ್ಯಾಸ ಮಹರ್ಷಿಗಳು ಹಾಗೂ ಎಲ್ಲ ಗುರು ಪರಂಪರೆಯನ್ನೂ ವಂದಿಸಿ, ಗೌರವಿಸುವ ಗುರುಪೂರ್ಣಿಮಾ ಮಹಾ ಪರ್ವವನ್ನು ಆಷಾಢ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ.
ಗುರು ಪೂರ್ಣಿಮೆಯು ಕೇವಲ ವೇದ ಪಾಠಶಾಲೆ ಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಿಂದೂಗಳು ಈದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಜೈನ, ಬೌದ್ಧ ಧರ್ಮೀಯರು ಸಹ ಗುರುಪೂರ್ಣಿಮೆಯನ್ನು ಆಚರಿಸುವುದು ರೂಢಿಯಲ್ಲಿದೆ.
ಸಿದ್ಧಾರ್ಥ ಗೌತಮ ಬುದ್ಧನಾಗಿ ಮೊದಲ ಧರ್ಮ ಪ್ರವಚನವನ್ನು ಮಾಡಿದಂತಹ ದಿನ ಗುರುಪೂರ್ಣಿಮೆ. ಈ ದಿನ ಶಂಕರನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಉಪದೇಶಿಸಿ ಪ್ರಥಮ ಗುರು ಎಂದೆನಿಸಿಕೊಂಡ ದಿನ ಗುರು ಪೂರ್ಣಿಮ. ಈ ದಿನ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ ಗುರುವೃಂದಕ್ಕೆ ಕೃತಜ್ಞತೆ ಸಲ್ಲಿಸುವ ಸಂಪ್ರದಾಯವೂ ನಡೆದು ಬಂದಿರುತ್ತೆ. ಗುರುಗಳು ತಮ್ಮ ಶಿಷ್ಯರಿಗೆ ಸಹಾಯ ಮಾಡಿದ ಒಂದು ಪ್ರಸಂಗ ನೆನಪಿಗೆ ಬರುತ್ತೆ.
ಒಮ್ಮೆ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಗೆ ತನ್ನ ಪಿ.ಯು.ಸಿ ಪರೀಕ್ಷೆಗೆ ಹಣ ಕಟ್ಟಲು ಪರದಾಡುತ್ತಿದ್ದಾಗ ಅವನಿಗೆ ಪಾಠ ಹೇಳಿಕೊಡುತ್ತಿದ್ದ ಗುರುಗಳು ಶಿಷ್ಯನಿಗೆ ಪರೀಕ್ಷೆಯ ಫೀಸನ್ನು ಕಟ್ಟಲು ತಾವೇ ಸಹಾಯ ಮಾಡುತ್ತಾರೆ. ಪರೀಕ್ಷೆಯ ಫಲಿತಾಂಶ ಹೊರಬಂದಾಗ ಆ ವಿದ್ಯಾರ್ಥಿ ಆ ಶಾಲೆಗೇ ಮೊದಲ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾನೆ. ಇದನ್ನು ಕೇಳಿದ ಗುರುಗಳಿಗೆ ಬಹಳ ಸಂತೋಷವಾಗುತ್ತದೆ ಮತ್ತು ಆ ವಿದ್ಯಾರ್ಥಿ ಗುರುಗಳಿಗೆ ತನ್ನ ಕೃತಜ್ಞತೆಗಳನ್ನು ವ್ಯಕ್ತ ಪಡಿಸುತ್ತಾನೆ. ಹೀಗೆ ಗುರುಗಳು ಪಾಠ ಹೇಳಿಕೊಡುವುದು ಮಾತ್ರವಲ್ಲದೆ ಪರೀಕ್ಷೆಗೆ ಕೂಡಲು ಹಣದ ಸಹಾಯವನ್ನು ಸಹ ಮಾಡುತ್ತಾರೆ.
ಇಂದು ಸೂಕ್ತ ಮಾರ್ಗದರ್ಶಕರ ಕೊರತೆ ಕಂಡು ಬರುತ್ತಿದೆ. ಹಾಗಾಗಿ ಸತ್ಯ,ಧರ್ಮ ಮಾರ್ಗದಲ್ಲಿ ನಡೆಯುವವರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ. ಸರಿಯಾದ ಮಾರ್ಗ ದರ್ಶನ ಸಿಕ್ಕು ಜನತೆ ಧರ್ಮ ಮಾರ್ಗದಲ್ಲಿ ನಡೆದು ಮಾನವೀಯ ಮೌಲ್ಯಗಳನ್ನು
ಮೈಗೂಡಿಸಿಕೊಂಡು ಸೌಹಾರ್ದತೆಯಿಂದ ಬಾಳಿದಾಗ ಪ್ರತಿಯೊಬ್ಬರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ.
ಈ ಬಾರಿ ಬಂದಿರುವ ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ ಜಗತ್ತಿನ ಎಲ್ಲಾ ಗುರು ಶ್ರೇಷ್ಠರಿಗೂ ನಮ್ಮ ಅನಂತ ನಮಸ್ಕಾರಗಳನ್ನು
ಅರ್ಪಿಸೋಣ.
-ಎನ್. ಜಯಭೀಮ್ ಜೊಯ್ಸ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post