ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ರಿಂಗ್ ರೋಡ್ ಮುಂದುವರೆದ ಕಾಮಗಾರಿ, ತುಮಕೂರು-ಶಿವಮೊಗ್ಗ, ಶಿವಮೊಗ್ಗ-ಚಿತ್ರದುರ್ಗ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಈ ಕಾಮಗಾರಿಗಳಿಗೆ ವಿಶೇಷ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ವೇಗ ಪಡೆದುಕೊಳ್ಳಲಿದೆ. ಇದರೊಂದಿಗೆ ಕೊಡಚಾದ್ರಿ-ಕೊಲ್ಲೂರು ನಡುವೆ ಸಂಪರ್ಕ ಕಲ್ಪಿಸಲು ಕೇಬಲ್ಕಾರ್ ನಿರ್ಮಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ
ಸಮಾಜದ ಕಟ್ಟಕಡೆಯ ವ್ಯಕಿಗೂ ಆರೋಗ್ಯ ಸೇವೆ ನೀಡುವ ಸದುದ್ದೇಶದಿಂದ ಕೇಂದ್ರ ಸರ್ಕಾರವು ಜೀವನಾವಶ್ಯಕ ಮತ್ತು ಗುಣಮಟ್ಟದ ಔಷಧಿಗಳನ್ನು ಅತ್ಯಂತ ಕಡಿಮೆ ದರದಲ್ಲಿ ಒದಗಿಸಲು ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಸಾರ್ವಜನಿಕರು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಹೇಳಿದರು.
ರಾಷ್ಟ್ರವೊಂದು ಅಭಿವೃದ್ಧಿ ಹೊಂದಬೇಕಾದಲ್ಲಿ ರಾಷ್ಟ್ರದ ಪ್ರಜೆಗಳು ಕೂಡ ಆರೋಗ್ಯವಂತರಾಗಿರುವುದು ಕೂಡ ಮುಖ್ಯವಾದುದು ಎಂದರು.
ಸ್ವತಂತ್ರ್ಯಾ ನಂತರದ ಹಲವು ದಶಕಗಳಲ್ಲಿ ಅನುಷ್ಠಾನಗೊಳಿಸಲಾದ ಅತ್ಯಪರೂಪದ ಯೋಜನೆಗಳಲ್ಲೊಂದಾಗಿದ್ದು, ಶೇ.30ರಿಂದ ಶೇ.80ರ ರಿಯಾಯಿತಿ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಜನಸಾಮಾನ್ಯರಿಗೆ ಒದಗಿಸಲಾಗುತ್ತಿದೆ. ಈ ಯೋಜನೆ ಕೇವಲ ಪ್ರಚಾರಕ್ಕಾಗಿ ಮಾತ್ರವಾಗಿರದೇ ಜನಸಾಮಾನ್ಯರ ಹಿತ, ಸುಖ ಕಾಪಾಡುವಲ್ಲಿ ಜನಪ್ರಿಯತೆ ಪಡೆದಿದೆ ಎಂದ ಅವರು, ಸಾಮಾನ್ಯ ಜನರಿಗೂ ಈ ಔಷಧಿಗಳು ತಲುಪಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜನೌಷಧಿ ಕೇಂದ್ರಗಳನ್ನು ಆರಂಭಿಸುವ ಚಿಂತನೆ ಇದೆ ಎಂದರು.
ಈ ಜನೌಷಧಿ ಕೇಂದ್ರಗಳಲ್ಲಿ ಸುಮಾರು 750ಕ್ಕೂ ಹೆಚ್ಚಿನ ಪ್ರಕಾರಗಳ ಔಷಧಗಳು ದೊರೆಯುತ್ತಿದ್ದು, ಅದರಲ್ಲಿ 166ರೀತಿಯ ಔಷಧಗಳು ಶೇ.10ರ ರಿಯಾಯ್ತಿ ದರದಲ್ಲಿ, ಸುಮಾರು 483 ಔಷಧಗಳು ಶೇ.50ರ ರಿಯಾಯ್ತಿ ದರದಲ್ಲಿ, 80ಔಷಧಿಗಳು ಶೇ.25ರ ರಿಯಾಯ್ತಿ ದರದಲ್ಲಿಯೂ ದೊರೆಯುತ್ತಿದೆ. ಈ ಯೋಜನೆಯ ಅನುಷ್ಠಾನದಿಂದಾಗಿ ರಿಯಾಯ್ತಿ ದರದಲ್ಲಿ ಔಷಧಗಳು, ಆರೋಗ್ಯವರ್ಧಕ ಮಾತ್ರೆಗಳು ದೊರೆಯಲಿವೆ ಅಲ್ಲದೇ ಲಕ್ಷಾಂತರ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳು ದೊರೆಯುತ್ತಿದೆ ಎಂದರು.
ಈ ಕೇಂದ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಜನೌಷಧಿ ಕೇಂದ್ರಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದ ಅವರು, ಜನೌಷಧಿ ಕೇಂದ್ರಗಳಲ್ಲಿ ಸೂಚಿಸಿರುವ ಔಷಧಗಳನ್ನಲ್ಲದೇ ಅನ್ಯ ಔಷಧಗಳನ್ನು ಮಾರಾಟ ಮಾಡದಂತೆ ಅವರು ಸೂಚಿಸಿದರು.
ಜನಸಾಮಾನ್ಯರಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಅನುಷ್ಠಾನಕ್ಕೆ ಬಂದಿರುವ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರತಿ ಬಿ.ಪಿ.ಎಲ್. ಕುಟುಂಬಕ್ಕೆ 5.00ಲಕ್ಷ ಹಾಗೂ ಎಪಿಎಲ್ ಕುಟುಂಬಕ್ಕೆ 1.50ಲಕ್ಷ ರೂ.ಗಳವರೆಗೆ ಸಹಾಯಧನ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವರ್ಗದವರಿಗೂ 15-20ಲಕ್ಷ ರೂ.ಗಳವರೆಗೂ ಆರ್ಥಿಕ ನೆರವು ದೊರೆಯುವಂತಾಗಬೇಕು. ಅದಕ್ಕಾಗಿ ಕೇಂದ್ರದಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಈ ಯೋಜನೆಯಡಿ ಇತ್ತೀಚೆಗೆ ಅಟಲ್ಜೀ ಜನ್ಮದಿನ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನ್ಮದಿನಾಚರಣೆ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದಡಿಯಲ್ಲಿ ಸುಮಾರು 1.50ಲಕ್ಷ ಕುಟುಂಬಗಳಿಗೆ ಆಯುಷ್ಮಾನ್ ಕಾರ್ಡ್ನ್ನು ವಿತರಿಸಲಾಗಿದೆ. ಈ ಕಾರ್ಯಕ್ರಮದ ಅನುಷ್ಠಾನದಲ್ಲಿ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು.
ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ನಲ್ಲಿ ಜಿಲ್ಲೆಯಲ್ಲಿ ಬುಡಕಟ್ಟು ವೈದ್ಯಪದ್ದತಿ ಕೇಂದ್ರ ಆರಂಭಿಸಲು ಉದ್ದೇಶಿಸಿದೆ. ಅಲ್ಲದೇ ಜಿಲ್ಲೆಯಲ್ಲಿ ಆಯುರ್ವೇದಿಕ್ ವಿಶ್ವವಿದ್ಯಾಲಯ ಆರಂಭಿಸಲು ಬಜೆಟ್ನಲ್ಲಿ ಅನುದಾನವನ್ನು ನಿಗಧಿಪಡಿಸಿದ್ದು, ಅದಕ್ಕಾಗಿ ಸೋಗಾನೆ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ ಸ್ಥಳವನ್ನು ಗುರುತಿಸಲಾಗಿದೆ. ಇರುವಕ್ಕಿ ನಿರ್ಮಾಣ ಹಂತದಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿವಿ.ಯ ಚಟುವಟಿಕೆಗಳಿಗೆ 150 ಕೋಟಿ. ರೂ., ಜೋಗ್ ಫಾಲ್ಸ್ ಪ್ರವಾಸೋದ್ಯಮ ಕಾರ್ಯಕ್ರಮಗಳಿಗೆ ವಿಶೇಷ ಯೋಜನೆ ಹಾಗೂ ಲಯನ್ ಸಫಾರಿ ಅಭಿವೃದ್ಧಿಗಗೆ 5.00ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಅಲ್ಲದೇ ಮಂಗನ ಕಾಯಿಲೆ ನಿಯಂತ್ರಣಕ್ಕೆ ವಿಶೇಷ ಅನುದಾನ ಘೋಷಿಸಿದೆ ಎಂದರು.
ಬಹುಮುಖ್ಯವಾಗಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ 1500ಕೋಟಿ ರೂ.ಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಸರ್ವಾಂಗೀಣ ವಿಕಾಸಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ಈ ಎಲ್ಲಾ ಅಭಿವೃದ್ದಿ ಚಟುವಟಿಕೆಗಳಿಗೆ ಅನುದಾನ ಕಾಯ್ದಿರಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು ಎಂದರು.
Get in Touch With Us info@kalpa.news Whatsapp: 9481252093
Discussion about this post