ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿವಾಹದ ವಿಚಾರವೇ ಯುಪಿಎ ಸಭೆಗಳಲ್ಲಿ ಪ್ರಮುಖ ವಿಚಾರವಾಗಿದೆ ಎಂಬ ಸುದ್ದಿ ಈಗ ಹೊರಬಿದ್ದಿದ್ದು, ಹಲವಾರು ಮುಖಂಡರು ರಾಹುಲ್ಗೆ ವಧು ಸೂಚಿಸುತ್ತಿದ್ದಾರೆ.
ಈ ಕುರಿತಂತೆ ಮಾಹಿತಿಯನ್ನು ಹೊರ ಹಾಕಿರುವ ಟಿಡಿಪಿ ಸಾಂಸದ ಜೆ.ಸಿ. ದಿವಾಕರ್ ರೆಡ್ಡಿ, ನಾನು ಸೋನಿಯಾ ಗಾಂಧಿಯವರ ಕುಟುಂಬದ ಹಿತೈಷಿಯಾಗಿದ್ದು, ರಾಹುಲ್ ವಿವಾಹದ ಕುರಿತಾಗಿ ಸಾಕಷ್ಟು ಬಾರಿ ಸಲಹೆ ನೀಡಿದ್ದೇನೆ ಎಂದಿದ್ದಾರೆ.
ಎಐಸಿಸಿ ಹಾಗೂ ಯುಪಿಎ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿವಾಹ ಕುರಿತಾಗಿ ಅವರ ತಾಯಿ ಸೋನಿಯಾಗಾಂಧಿಯವರೊಂದಿಗೆ ನಾನು ಮಾತನಾಡಿದ್ದೆ. ರಾಹುಲ್ಗೆ ಉತ್ತರ ಪ್ರದೇಶದಲ್ಲಿನ ಬ್ರಾಹ್ಮಣ ಸಮುದಾಯದ ಉತ್ತಮ ವಧುವನ್ನು ವಿವಾಹ ಮಾಡಿಕೊಳ್ಳುವಂತೆ ಹೇಳಿದ್ದೆ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಬ್ರಾಹ್ಮಣ ಸಮುದಾಯ ಪ್ರಾತಿನಿಧ್ಯವಿದೆ. ಹೀಗಾಗಿ, ಬ್ರಾಹ್ಮಣ ಸಮುದಾಯದ ವಧುವನ್ನು ವಿವಾಹ ಮಾಡಿಕೊಳ್ಳುವಂತೆ ನಾನು ಹೇಳಿದ್ದೆ. ಆದರೆ, ನನ್ನ ಸಲಹೆಯನ್ನು ಸೋನಿಯಾಗಾಂಧಿಯವರು ಪರಿಗಣಿಸಲಿಲ್ಲ ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನು, ಈ ಬೆಳವಣಿಗೆಗಳ ನಡುವೆಯೇ, ರಾಯ್ ಬರೇಲಿಯ ಎಂಎಲ್ಎ ಸರ್ದಾರ್ ಅದಿತಿ ಸಿಂಗ್ ಅವರನ್ನು ರಾಹುಲ್ ಗಾಂಧಿ ವಿವಾಹವಾಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಈ ಕುರಿತಂತೆ ಮಾತನಾಡಿದ್ದ ಅದಿತಿ, ರಾಹುಲ್ ನನಗೆ ಸಹೋದರನ ಸಮಾನ ಎಂದಿದ್ದರು.

















