ಕಲ್ಪ ಮೀಡಿಯಾ ಹೌಸ್ | ಕಾನೂನು ಕಲ್ಪ – ಪ್ರಶ್ನೋತ್ತರ ಅಂಕಣ |
ಹಿಂದೂ ಮಹಿಳೆ ತನ್ನ ನಿಧನದ ನಂತರ ತನ್ನ ಸ್ವಯಾರ್ಜಿತ ಆಸ್ತಿ #SelfAcquiredProperty ತನ್ನ ತವರಿನ ಕಡೆಯವರು ಅಥವಾ ತಾನು ಬಯಸಿದವರಿಗೆ ಸೇರಬೇಕೆಂದರೆ, ಆ ನಿಟ್ಟಿನಲ್ಲಿ ವಿಲ್ ರಚಿಸುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಹಿಂದೂ #Hindu ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 15 ರ ಪ್ರಕಾರ, ಹಿಂದೂ ಸ್ತ್ರೀ ಮರಣಶಾಸನರಹಿತಳಾಗಿ (intestate) ಮೃತಳಾದಲ್ಲಿ, ಆಕೆಯ ಆಸ್ತಿಯ ಮೇಲೆ ಆಕೆಯ ಪುತ್ರರು ಹಾಗು ಪುತ್ರಿಯರಿಗೆ ಮೊದಲ ಹಕ್ಕು ಇರುತ್ತದೆ. ಮೃತ ಮಹಿಳೆಗೆ ಮಕ್ಕಳಿಲ್ಲದಿದ್ದಲ್ಲಿ, ಆಕೆಯ ಗಂಡನ ವಾರಸುದಾರರು ಆಕೆಯ ಆಸ್ತಿಗೆ ವಾರಸುದಾರರಾಗುತ್ತಾರೆ. ಇವರು ಇರದಿದ್ದಲ್ಲಿ, ಮೃತ ಮಹಿಳೆಯ ತಂದೆ ತಾಯಿ ಆಸ್ತಿ ಪಡೆಯಬಹುದು. ಇವರ ನಂತರದ ಆದ್ಯತೆಯಲ್ಲಿ ಆಕೆಯ ತಂದೆಯ ಹಾಗು ತಾಯಿಯ ವಾರಸುದಾರರು ಬರುತ್ತಾರೆ.
ಮೃತ ಮಹಿಳೆಗೆ ಮಕ್ಕಳಿಲ್ಲದಿದ್ದಲ್ಲಿ, ಆಕೆಯ ಗಂಡನ ವಾರಸುದಾರರು ಆಕೆಯ ಆಸ್ತಿಗೆ ವಾರಸುದಾರರಾಗುತ್ತಾರೆ ಎಂದು ತಿಳಿಸುವ ಸದರಿ ಕಾಯಿದೆಯ ಸೆಕ್ಷನ್ 15(1)(b) ಮಹಿಳಾ ಸಮಾನತೆಯ ಆಶಯಗಳಿಗೆ ವಿರುದ್ಧವಾಗಿರುವುದರಿಂದ ಇದನ್ನು ಅಸಾಂವಿಧಾನಿಕ ಎಂದು ಪರಿಗಣಿಸಬೇಕು ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗು ನ್ಯಾಯಮೂರ್ತಿ ಆರ್ ಮಹಾದೇವನ್ ಅವರಿದ್ದ ನ್ಯಾಯಪೀಠ, ಮೃತ ಮಹಿಳೆಯ ತಂದೆ ತಾಯಿ ಆಕೆಯ ಆಸ್ತಿಗೆ ದಾವೆ ಸಲ್ಲಿಸಿದರೆ, ಅಂತಹ ಪ್ರಕರಣಗಳನ್ನು ಆರಂಭಿಕ ಹಂತದಲ್ಲಿಯೇ ಮಧ್ಯಸ್ಥಿಕೆ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕು. ಹಿಂದೂ ಮಹಿಳೆಯರು ಕೂಡ ತಮ್ಮ ನಿಧನದ ನಂತರ ತಮ್ಮ ಆಸ್ತಿ ಯಾರಿಗೆ ಸೇರಬೇಕು ಎಂದು ವಿಲ್ ರಚಿಸಿದರೆ, ನಂತರ ಎದುರಾಗಬಹುದಾದ ಸಂಭಾವ್ಯ ಗೊಂದಲಗಳನ್ನು ತಪ್ಪಿಸಬಹುದು ಎಂದಿದೆ.
ಎಲ್ಲಾ ವಯೋಮಾನದ ಮಹಿಳೆಯರು ವಿಲ್ ಬರೆಯುವುದನ್ನು ಗಂಭೀರವಾಗಿ ಪರಿಗಣಿಸಬೇಕು. ವಿಲ್ ಬರೆಯುವುದರ ಮೂಲಕ, ಭವಿಷ್ಯದಲ್ಲಿ ಎದುರಾಗಬಹುದಾದ ವ್ಯಾಜ್ಯಗಳನ್ನು ತಪ್ಪಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹಿಂದೂ ಉತ್ತರಾಧಿಕಾರ ಕಾಯಿದೆಯ ಪ್ರಕಾರ, ವಿಲ್ ಇಲ್ಲದೇ ಹಾಗು ಮಕ್ಕಳಿಲ್ಲದೇ ಹಿಂದೂ ಮಹಿಳೆ ನಿಧಾನಳಾದಲ್ಲಿ, ಆಕೆಯ ಆಸ್ತಿ ಆಕೆಯ ಪತಿಯ ವಾರಸುದಾರರಿಗೆ ಹೋಗುತ್ತದೆ.
ಆತ್ಮೀಯ ಓದುಗರೇ,
ಕಲ್ಪ ಮೀಡಿಯಾ ಹೌಸ್(ರಿ.) ಅಡಿಯಲ್ಲಿ ಪ್ರಕಟವಾಗುತ್ತಿರುನ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ನಮ್ಮ ಓದುಗರಿಗಾಗಿ `ಕಾನೂನು ಕಲ್ಪ’ ಎಂಬ ಹೊಸ ಅಂಕಣವನ್ನು ಆರಂಭಿಸಲಾಗಿದ್ದು, ಪ್ರತಿ ಶುಕ್ರವಾರ ಪ್ರಕಟವಾಗಲಿದೆ. ಶಿವಮೊಗ್ಗ-ಭದ್ರಾವತಿಯ ಖ್ಯಾತ ವಕೀಲರು ಹಾಗೂ ಹಿರಿಯ ಪತ್ರಕರ್ತರೂ ಆಗಿರುವ ಶ್ರೀ ವೀರೇಂದ್ರ ಪಿ.ಎಂ. ಅವರು ಯಾವುದೇ ರೀತಿಯ ಕಾನೂನು ಸಮಸ್ಯೆಗಳು, ಕಾನೂನಿನ ಕುರಿತಾಗಿನ ಮಾರ್ಗದರ್ಶನ ಮಾಡಲಿದ್ದಾರೆ. ಸಾರ್ವಜನಿಕರು ತಮಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ ನಮಗೆ ಕಳುಹಿಸಬಹುದು. ಆ ಪ್ರಶ್ನೆಗಳಿಗೆ ವಕೀಲರಾದ ಶ್ರೀ ವೀರೇಂದ್ರ ಪಿ.ಎಂ. ಅವರು ಉತ್ತರ ನೀಡಲಿದ್ದಾರೆ. ನಿಮ್ಮ ಪ್ರಶ್ನೆಗಳು ಸ್ಪಷ್ಟ, ಸ್ಪುಟ, ನೇರವಾಗಿರಲಿ.
ನಿಮ್ಮ ಪ್ರಶ್ನೆಗಳನ್ನು ಈ ಕೆಳಗಿನ ವಾಟ್ಸಪ್ ಸಂಖ್ಯೆ 9481252093 (ವಾಟ್ಸಪ್ ಮಾತ್ರ) ಅಥವಾ ಇ-ಮೇಲ್ info@kalpa.news ಗೆ ಕಳುಹಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















