ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತೀರ್ಥಹಳ್ಳಿ: ಇಡಿಯ ನಾಡಿನ ಬಹುತೇಕ ಪ್ರದೇಶಗಳಿಗೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಳ ಅಂಬುತೀರ್ಥಕ್ಕೆ ಈಗ ಅಭಿವೃದ್ಧಿಯ ಭಾಗ್ಯ ಬರುತ್ತಿದೆ.
ಹೌದು… ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಪಣ ತೊಟ್ಟಿರುವ ಕ್ರಿಯಾಶೀಲ ಸಂಸದ ಬಿ.ವೈ. ರಾಘವೇಂದ್ರ ಅವರ ಆಸಕ್ತಿಯ ಫಲವೇ ಇದು.
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಯ ಭಾಗವಾಗಿ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿರುವ ಸಲುವಾಗಿ ಸಂಸದ ಬಿ.ವೈ. ರಾಘವೇಂದ್ರ ಅವರು ನಿನ್ನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ನಾಡಿಗೆ ವಿದ್ಯುತ್ ನೀಡುವ ಶರಾವತಿ ನದಿ ಉಗಮ ಸ್ಥಳ ಅಂಬುತೀರ್ಥಕ್ಕೆ ನಮ್ಮ ಜಿಲ್ಲೆಯ ಹೆಮ್ಮೆ. ಶರಾವತಿ ನದಿಯಿಂದ ರಾಜ್ಯ ಬೆಳಕು ಕಾಣುತ್ತಿದೆ. ಇಂತಹ ಐತಿಹಾಸಿಕ ಕ್ಷೇತ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗುವುದು. ಇಲ್ಲಿನ ದೇಗುಲ, ಕಲ್ಯಾಣಿ, ತಡೆಗೋಡೆ ಸೇರಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ರಾಜ್ಯ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ಸದಸ್ಯ ಲಕ್ಷ್ಮೀ ನಾರಾಯಣ ಕಾಶಿ, ಸಂಸದರ ಆಸಕ್ತಿಯ ಫಲವಾಗಿ ಇಂದು ಜಿಲ್ಲಾ ಪ್ರವಾಸೋದ್ಯಮ ಹೊಸ ಭಾಷ್ಯ ಬರೆಯುವತ್ತ ದಾಪುಗಾಲಿಟ್ಟಿದೆ. ಶರಾವತಿಯ ಉಗಮ ಸ್ಥಳ ಅಂಬುತೀರ್ಥವನ್ನು ಅಭಿವೃದ್ಧಿಪಡಿಸುವ ಮೂಲಕ ಈ ಕ್ಷೇತ್ರಕ್ಕೆ ಹೆಚ್ಚಿನ ಪ್ರವಾಸಿಗರು ಬರುವಂತಾಗಬೇಕು. ಜೊತೆಯಲ್ಲಿ ನಾಡಿಗೆ ವಿದ್ಯುತ್ ನೀಡುವ ಶರಾವತಿ ನದಿಗೆ ಇದು ನಾವು ಸೂಚಿಸುವ ಗೌರವವೂ ಕೂಡ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಬಿಜೆಪಿ ಮುಖಂಡ ದತ್ತಾತ್ರಿ, ರಾಜ್ಯ ಕೋಣಂದೂರು ಮೋಹನ್, ಅಶೋಕಮೂರ್ತಿ, ಮಂಜುನಾಥ್, ಅಪೂರ್ವ ಶರಧಿ ಇತರರು ಇದ್ದರು.
ನಂತರ ತೀರ್ಥಹಳ್ಳಿಯಲ್ಲಿ ನಡೆದ ಆಶಾ ಕಾರ್ಯಕರ್ತೆಯರ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಸಂಸದರು, ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನಾ ಸಮುದಾಯದ ಹಂತದಲ್ಲಿದೆ. ಇದು ಅಪಾಯಕಾರಿ ಹಂತ. ಎಲ್ಲರೂ ವೈಯಕ್ತಿಕವಾಗಿ ಎಚ್ಚರ ವಹಿಸಬೇಕಿದೆ. ಆಶಾ ಕಾರ್ಯಕರ್ತೆಯರ ಕೊರೋನಾ ವಿರುದ್ಧದ ಹೋರಾಟಕ್ಕೆ ನಾವೆಲ್ಲರೂ ಎಂದಿಗೂ ಋಣಿಯಾಗಿರಬೇಕು ಎಂದರು.
Get In Touch With Us info@kalpa.news Whatsapp: 9481252093
















