ಪ್ರತಿಭೆ ಹೊಂದಿರುವ ಸಾಧನೆ ಮಾಡಬೇಕು ಎಂಬ ಆಸೆ, ಕನಸು ಕಾಣುವ ವ್ಯಕ್ತಿಗಳು ಅದೆಷ್ಟು ಅಡ್ಡಿ ಆಂತಕಗಳಿದ್ದರೂ ಅವನೆಲ್ಲ ತುಳಿದು ಮುಂದೆ ಹೋಗುತ್ತಾರೆ. ಈ ಮಾತಿಗೆ ಸಾಕ್ಷಿ ಸುಜಾತ ಜೈನ್.
ಹೌದು, ಈ ಪುಟ್ಟ ಪ್ರತಿಭೆ ಹುಟ್ಟಿದ್ದು ಮಲೆನಾಡಿನ ಹೆಬ್ಬಾಗಿಲು ಎಂದೇ ಕರೆಯಿಸಿಕೊಳ್ಳುವ ಪ್ರಕೃತಿಯ ಮಡಿಲಲ್ಲಿ ಇದ್ದುಕೊಂಡು ಪ್ರಕೃತಿ ರಸಿಕರನ್ನು ಕೈ ಬಿಸಿ ಕರೆಯುವ, ನಾಡಿಗೆ ಶ್ರೇಷ್ಠ ಕವಿಗಳನ್ನು ಕೊಟ್ಟ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಟ್ಟಿನಕಾರು ಎಂಬ ಪುಟ್ಟ ಹಳ್ಳಿಯಲ್ಲಿ. ಈಕೆ ದೇವಯ್ಯ ಜೈನ್ ಮತ್ತು ಕೋಮಲ ಜೈನ್ ಅವರ ಪುತ್ರಿ.
ಕಡುಬಡತನದಲ್ಲಿ ಅರಳಿದ ಇವರಿಗೆ, ನಳ-ನಳಿಸುವ ಪ್ರಕೃತಿ ಮತ್ತು ಮಲೆನಾಡ ಮೈಸಿರಿ ಇವರ ಸಾಹಿತ್ಯ ಬರವಣಿಗೆಯ ವರ ಎನ್ನುವುದೇ ಹರ್ಷನೀಯ. ಅಂತಹ ಒಂದು ಪುಟ್ಟ ಹಳ್ಳಿಯ ಕಾಡು ಕುಸುಮ! ಇಂದಿಗೂ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ಕಾಣದಿರುವ ಹಳ್ಳಿಯಲ್ಲಿ ಬೆಳೆದವರು. ಚಿಕ್ಕಂದಿನಿಂದಲೂ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡ ಇವರು ಓದಿನಲ್ಲೂ ಮುಂದು.
ಪಠ್ಯೇತರ ಚಟುವಟಿಕೆಗಳು ಎಲ್ಲಿ ತಮ್ಮ ಓದಿಗೆ ಅಡ್ಡಿಯಾದರೇ ಎಂದು ತಿಳಿದು ಎಲ್ಲರ ವಿರೋಧದ ನಡುವೇ ಅವರು ಹವ್ಯಾಸವಾಗಿ ತಮ್ಮ ಕಲೆಯನ್ನು ಕೂಡಿಟ್ಟಿದ್ದಾರೆ! ತಮ್ಮ 23ರ ಹರೆಯದಲ್ಲಿಯೇ 250 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇದಲ್ಲದೆ ನಾಟಕ, ಜಾನಪದ ಹಾಡುಗಾರಿಕೆ, ಪ್ರಬಂಧ ಮತ್ತು ಕ್ರೀಡೆಯಲ್ಲಿ ಕೋ ಕೋ, ರಿಲೆಯಲ್ಲಿ ಮತ್ತು ಯೋಗಾಸನದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ ಇವರು ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾಷೆಯ ಮೇಲಿನ ಅಭಿಮಾನ ಅಪಾರವಾಗಿ ಇವರಲ್ಲಿ ಕಾಣುತ್ತದೆ, ಇವರ ಪ್ರತಿಯೊಂದು ಕೃತಿಗಳು ಏನನ್ನೋ ಹೇಳ ಹೊರಟಂತೆ ಇವೆ. “ಈ ನಾಡ ಜನರ ಸ್ಥಿತಿ”, “ಕಂದಿರುವ ಈ ಸಂಜೆ”, “ನನ್ನೂರಿನ ಸಂಕಟ”, “ನೆರೆಹಾವಳಿ”,”ಸವಾಲು”, “ಪ್ರಶಾಂತತೆಯ ಉತ್ತರ”, ಹೀಗೆ ಹಲವಾರು ಕೃತಿಗಳಿಂದ ಓದಿನ ದಿನಗಳಲ್ಲೇ ಉಪನ್ಯಾಸಕರ ನೆಚ್ಚಿನ ವಿದ್ಯಾರ್ಥಿ ಎನಿಸಿಕೊಂಡಿದ್ದರು.
ಪುಟ್ಟ ಹಳ್ಳಿಯಲ್ಲಿ ಎಲೆಮರೆಯ ಕಾಯಿಯಂತೆ ಇದ್ದ ಇವರನ್ನು ಕಳೆದ ದಿನಗಳಲ್ಲಿ ಮುಕ್ತ ವಾಹಿನಿಯವರ “ಅನ್ವೇಷನ್” ಕಾರ್ಯಕ್ರಮದಲ್ಲಿ ಪರಿಚಯಿಸಿ ಬೆಳಕಿಗೆ ತಂದ ಹಿರಿಮೆಯು ವಾಹಿನಿಯವರಿಗೆ ಸಲ್ಲುತ್ತದೆ. ಶಿಕ್ಷಕರ ಅಭಾವದಿಂದಲೇ ಓದಿದ ಇವರಿಗೆ ತಾನು ಶಿಕ್ಷಕಿಯಾಗಿ ತನ್ನೂರಿಗೆ ನೆರಳಾಗಬೇಕು ಎಂಬುದು ಅನವರ ಮನದ ಆಸೆ. ಅದೇಷ್ಟೋ ಏಳು ಬೀಳುಗಳ ದಾಟಿ ಇಂದು ಬಿಇಡಿ ಪದವೀಧರೆಯಾಗಿ ತನ್ನೂರಿನ ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಕಲಾ ಸೇವೆ ಹೀಗೆ ಮುಂದುವರೆಯಲಿ ಇವರ ಕೀರ್ತಿ ಇನ್ನಷ್ಟು ಹೆಚ್ಚಲಿ ಇವರ ವೈಯಕ್ತಿಕ ಜೀವನ ಕೂಡಾ ಸುಖಕರವಾಗಲಿಯೆಂದು ಶುಭ ಹಾರೈಸುತ್ತೇವೆ.
ಮಾಹಿತಿ: ಸುದೇಶ್ ಜೈನ್ ಮಕ್ಕಿಮನೆ
ಲೇಖನ ಮತ್ತು ಚಿತ್ರಕೃಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post