ನವದೆಹಲಿ: ಹೌದು, ಕನ್ನಡಿಗರ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ನವದೆಹಲಿಯಲ್ಲಿರುವ ಕರ್ನಾಟಕ ಸಂಘದ ಮುಂದೆ ನಿರ್ಮಾಣವಾಗಿರುವ ಮೆಟ್ರೋ ನಿಲ್ದಾಣಕ್ಕೆ ಹೆಮ್ಮೆಯ ಕನ್ನಡಿಗ ವಿಶ್ವೇಶ್ವರಯ್ಯ ಅವರ ಹೆಸರನ್ನು ನಾಮಕರಣ ಮಾಡಿದೆ.
ದೆಹಲಿ ಕರ್ನಾಟಕ ಸಂಘದ ಮುಂಭಾಗದಲ್ಲಿರುವ ಮೋತಿ ಬಾಗ್ ಪಿಂಕ್ ಲೈನ್ ಮೆಟ್ರೋ ನಿಲ್ದಾಣಕ್ಕೆ ವಿಶ್ವೇಶ್ವರಯ್ಯ ಅವರ ಹೆಸರು ನಾಮಕರಣ ಮಾಡಲಾಗಿದ್ದು, ನಿಲ್ದಾಣವನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇಂದ್ರ ಸಚಿವ ಅನಂತಕುಮಾರ್ ಉದ್ಘಾಟಿಸಿದರು.

ಇನ್ನು, ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಸದಾನಂದ ಗೌಡ, ರಾಜ್ಯದ ಜನರ ಭಾವನೆಗೆ ಇಂದು ರಾಷ್ಟ್ರ ರಾಜಧಾನಿಯಲ್ಲಿ ಬೆಲೆ ಸಿಕ್ಕಿದೆ. ಕರ್ನಾಟಕದವರ ವಿಚಾರಗಳನ್ನು ದೆಹಲಿಯಲ್ಲಿ ಬಿಂಬಿಸಲು ಸಾಧ್ಯವಾಗಿದೆ. ದೆಹಲಿ ಮೆಟ್ರೋ ನಿಲ್ದಾಣಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಹೆಸರಿಡಲಾಗಿದೆ. ದೆಹಲಿ ಮೆಟ್ರೋದಲ್ಲಿ ಪ್ರತಿ ದಿನ 35 ಲಕ್ಷ ಜನ ಓಡಾಡುತ್ತಾರೆ. ಅವರೆಲ್ಲರಿಗೂ ವಿಶ್ವೇಶ್ವರಯ್ಯ ಅವರನ್ನು ಪರಿಚಯಿಸಿದಂತಾಗುತ್ತದೆ. ದೆಹಲಿ ಕರ್ನಾಟಕ ಸಂಘದ ಪ್ರಯತ್ನದಿಂದ ಈ ಕೆಲಸ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ನಿಲ್ದಾಣವು ದೆಹಲಿ ಕರ್ನಾಟಕ ಸಂಘದ ಮುಂಭಾಗವೇ ಇದ್ದುದರಿಂದ ವಿಶ್ವೇಶ್ವರಯ್ಯ ಹೆಸರಿಡಲು ದೆಹಲಿ ಕರ್ನಾಟಕ ಸಂಘ ಮತ್ತು ಕನ್ನಡಿಗರು ಮನವಿ ಮಾಡಿದ್ದರು.
ಡೆಲ್ಲಿ ಮೆಟ್ರೋದ ಮೋತಿ ಬಾಗ್ ನಿಲ್ದಾಣಕ್ಕೆ ಭಾರತ ರತ್ನ ಮೋಕ್ಷ ಗುಂಡು ಸರ್ ಎಂ ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣವೆಂದು ಹೆಸರಿಟ್ಟಿರುವುದು ಮಾನ್ಯರಿಗೆ ಸಂದ ಗೌರವ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಷಯ . ಈ ಸಂದರ್ಭದಲ್ಲಿ ಡೆಲ್ಲಿ ಕನ್ನಡ ಸಂಘ ನಿಲ್ದಾಣದ ಎದುರುಗಡೆ ಏರ್ಪಡಿಸಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದೆ pic.twitter.com/ikd5tpU6o3
— Sadananda Gowda (@DVSBJP) August 6, 2018















