ನವದೆಹಲಿ: ಪುಲ್ವಾಮಾದಲ್ಲಿ ಪಾಕ್ ಉಗ್ರರು ದಾಳಿ ನಡೆಸಿ ಭಾರತೀಯ ಸೇನೆ 42 ಯೋಧರನ್ನು ಬಲಿ ಪಡೆದ ಘಟನೆಯ ಹಿನ್ನೆಲೆಯಲ್ಲಿ ಇಡಿಯ ದೇಶವೇ ಪಾಕ್ ವಿರುದ್ಧ ಭುಗಿಲೆದ್ದಿದೆ.
ಈಗಾಗಲೇ ಪಾಕಿಸ್ಥಾನ ವಿರುದ್ಧ ಕ್ರಿಕಟ್ ಆಡುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೆ, ಪ್ರತಿಕ್ರಿಯೆ ನೀಡಿರುವ ಸೌರವ್ ಗಂಗೂಲಿ, ಯಾವುದೇ ಕಾರಣಕ್ಕೂ ಪಾಕಿಸ್ಥಾನ ಜೊತೆಯಲ್ಲಿ ಕ್ರಿಕೆಟ್ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಮಗೆ ದೇಶ ಹಾಗೂ ದೇಶದ ಭದ್ರತೆ ಮುಖ್ಯ. ನಮ್ಮ ಯೋಧರನ್ನು ಬಲಿ ಪಡೆದ ಉಗ್ರರಿಗೆ ಬೆಂಬಲ ನೀಡುತ್ತಿರುವ ಪಾಕ್ ಜೊತೆಯಲ್ಲಿ ನಾವು ಯಾವುದೇ ಕಾರಣಕ್ಕೂ ಪಂದ್ಯ ಆಡುವುದಿಲ್ಲ ಎಂದಿದ್ದಾರೆ.
ಏಕದಿನ ಟೂರ್ನಿಯಿಂದ ಪಾಕ್ ನಿಷೇಧ?
ಈ ಬಾರಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನವನ್ನು ನಿಷೇಧಿಸಬೇಕು. ಇಲ್ಲವಾದಲ್ಲಿ ಟೂರ್ನಿಯಿಂದ ಟೀಂ ಇಂಡಿಯಾ ಹಿಂದೆ ಸರಿಯಲಿದೆ ಎಂಬ ಒಕ್ಕಣೆಯ ಪತ್ರವನ್ನು ಸುಪ್ರೀಂಕೋರ್ಟ್ ನೇಮಿಸಿರುವ ಆಡಳಿತಗಾರರ ಸಮಿತಿ (ಸಿಒಎ) ವಿಶ್ವ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಶಶಾಂಕ್ ಅವರಿಗೆ ಬರೆಯಲು ನಿರ್ಧರಿಸಿದೆ. ಪುಲ್ವಾಮಾದಲ್ಲಿನ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಸಿಇಒ ಇಂತಹ ಚಿಂತನೆ ನಡೆಸಿದೆ ಎನ್ನಲಾಗಿದೆ.
ಈ ಕುರಿತು ಸಿ ಒಎ ಚೇರ್ಮನ್ ವಿನೋದ್ ರಾಯ್ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಇಂಥ ಒಕ್ಕಣೆಯ ಪತ್ರವನ್ನು ಬರೆಯುವುದರ ಸಾಧಕಬಾಧಕಗಳ ಸಂಪೂರ್ಣ ಮಾಹಿತಿ ಪಡೆದುಕೊಂಡ ನಂತರದಲ್ಲಿ ವಿನೋದ್ ರಾಯ್ ಪತ್ರವನ್ನು ಐಸಿಸಿಗೆ ರವಾನಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
Discussion about this post