ನವದೆಹಲಿ: ಸುಪ್ರೀಂ ಕೋರ್ಟ್ ಅಂಗಳದಲ್ಲಿರುವ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಆದೇಶಕ್ಕಾಗಿ ನಾವು ಕಾಯುತ್ತೇವೆ. ಅಯೋಧ್ಯೆಯಲ್ಲಿ ಕಾನೂನಾತ್ಮಕವಾಗಿ ರಾಮ ಮಂದಿರ ನಿರ್ಮಾಣವಾಗಬೇಕೇ ಹೊರತು ಮಸೀದಿಯಲ್ಲ ಎಂದು ವಿಶ್ವ ಹಿಂದೂ ಪರಿಷತ್(ವಿಎಚ್ಪಿ) ಹೇಳಿದೆ.
ವಿಎಚ್ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಈ ಕುರಿತಂತೆ ಮಾತನಾಡಿದ್ದು, ಈ ವರ್ಷಾಂತ್ಯದಲ್ಲಿ ನ್ಯಾಯಾಲಯದ ಆದೇಶ ಬರುವ ನಿರೀಕ್ಷೆಯಿದ್ದು, ರಾಮ ಮಂದಿರ ಪರವಾಗಿಯೇ ತೀರ್ಪು ಬರುವುದು ಎಂಬ ಭರವಸೆಯಿದೆ ಎಂದಿದ್ದಾರೆ.
ಪ್ರಕರಣ ಕುರಿತಂತೆ ಜುಲೈ ತಿಂಗಳಿನಿಂದ ಸುಪ್ರೀಂ ಕೋರ್ಟ್ ಪ್ರತಿದಿನ ವಿಚಾರಣೆ ನಡೆಸಬೇಕು. ನಾವು ನಮ್ಮ ಪರವಾಗಿಯೇ ತೀರ್ಪು ಬರುತ್ತದೆ ಎಂಬ ನಿರೀಕ್ಷೆಯನ್ನು ಹೊಂದಿದ್ದು, ಮುಂದಿನ ವರ್ಷದಿಂದ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು.
ಭೂಮಿಯ ಒಡೆತನೆ ಕುರಿತಾಗಿ ವಿವಾದವಿದೆ. ಮಂದಿರ ಸ್ಥಳದ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಮಸೀದಿ ನಿರ್ಮಾಣ ಆಗಬಾರದು. ನಮ್ಮ ಮುಸ್ಲಿಂ ಸಹೋದರರರಿಗೆ ಮಸೀದಿ ನಿರ್ಮಾಣವಾಗಬೇಕಾದರೆ ಮಂದಿರ ವ್ಯಾಪ್ತಿಯಿಂದ ಹೊರಗೆ ನಿರ್ಮಾಣವಾಗಲಿ. ಈ ವಿಚಾರದಲ್ಲಿ ನಮಗೆ ಯಾವುದೇ ರೀತಿಯ ಅಭ್ಯಂತರವಿಲ್ಲ ಎಂದಿದ್ದಾರೆ.














