ಮಂಡ್ಯ: ರೈತರ ಹೆಸರಿನಲ್ಲಿ ರಾಜಕೀಯ ಮಾಡಬೇಡಿ ಎಂದು ಹೇಳಿರುವ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿರುವ ಸುಮಲತಾ ಅಂಬರೀಶ್, ರೈತರ ಪರವಾಗ ಮೊಸಳೆ ಕಣ್ಣೀರು ಸುರಿಸುವ ನಿಮಗೆ ರೈತರ ಆತ್ಮಹತ್ಯೆಯನ್ನು ತಡೆಯಲು ಸಾಧ್ಯವಾಗಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಮಾತನಾಡಿರುವ ಅವರು, 50 ವರ್ಷಗಳಿಂದ ಅಧಿಕಾರದಲ್ಲಿರುವ ನಿಮಗೆ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲವೇ? ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಹೋಗಿ ಸಾಂತ್ವನ ಹೇಳಿದರೆ ನಿಮ್ಮ ಜವಾಬ್ದಾರಿ ಮುಗಿಯಿತೇ? ರೈತರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದರೆ ಸಾಲದು. ಇಷ್ಟು ವರ್ಷ ಅಧಿಕಾರದಲ್ಲಿರುವ ತಮಗೆ ರೈತರ ಸಮಸ್ಯೆಗಳು ತಿಳಿದಿಲ್ಲವೇಕೆ? ರೈತರು ಆತ್ಮಹತ್ಯೆಯನ್ನು ತಡೆಯಲು ಮುಂದಾಗಿಲ್ಲವೇಕೆ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಇನ್ನು, ಕಲ್ಲುತೂರಾಟದ ಕುರಿತಾಗಿ ಮಾತನಾಡಿದ ಅವರು, ಕಲ್ಲು ತೂರಾಟ ರೀತಿಯ ತಂತ್ರ, ಪ್ರತಿತಂತ್ರ ನಮ್ಮ ಕಡೆಯಿಂದ ಆಗುತ್ತಿಲ್ಲ. ಒಂದು ವೇಳೆ ಅಂತಹ ಯೋಜನೆ ರೂಪಿಸಿದರೆ ಅವರಿಗೆ ತಿಳಿದೇ ತಿಳಿಯುತ್ತದೆ. ಗುಪ್ತಚರ ಇಲಾಖೆ ಅಧಿಕಾರಿಗಳು, ಪೊಲೀಸರನ್ನು ನಮ್ಮ ಸುತ್ತ ಛೂಬಿಟ್ಟು ಕೆಲಸ ಮಾಡಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

















