ನವದೆಹಲಿ: ಶತ್ರುಗಳೊಂದಿಗಿನ ಏಕಾಂಗಿ ಕಾಳಗದಲ್ಲಿ ಪಾಕಿಗಳೊಂದಿಗೆ ಸಿಲುಕಿ 48 ಗಂಟೆಯ ನಂತರ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಭದ್ರತಾ ಪಡೆಗಳು ತಮ್ಮ ವಶದಲ್ಲೇ ಇರಿಸಿಕೊಂಡಿದ್ದು, ಇಂದು ದಿನ ಪೂರ್ತಿ ಅವರನ್ನು ತೀವ್ರ ವಿಚಾರಣೆ ಹಾಗೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಇಷ್ಟಕ್ಕೂ ಸುರಕ್ಷಿತವಾಗಿ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ ಅಭಿನಂದನ್’ಗೆ ಸಂಪೂರ್ಣ ವೈದ್ಯಕೀಯ ತಪಾಸಣೆ ಹಾಗೂ ತೀವ್ರತರವಾದ ವಿಚಾರಣೆಯನ್ನು ಯಾಕೆ ನಡೆಸಲಾಗುತ್ತಿದೆ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ವೈದ್ಯಕೀಯ ತಪಾಸಣೆ ಏತಕ್ಕಾಗಿ?
ಸೇನಾ ನಿಯಮಗಳ ಪ್ರಕಾರ ನಮ್ಮ ಯಾವುದೇ ಯೋಧ ಶತ್ರುಗಳ ಕೈಗೆ ಸಿಲುಕಿ, ಹಿಂತಿರುಗಿ ಬಂದರೆ ಅವರನ್ನು ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದು ಕಡ್ಡಾಯ.
ಶತ್ರುಗಳ ವಶದಲ್ಲಿದ್ದಾಗ ಅವರಿಗೆ ಯಾವುದಾದರೂ ರೀತಿಯಲ್ಲಿ ದೈಹಿಕ ಅಥವಾ ಮಾನಸಿಕವಾಗಿ ಘಾಸಿ ಮಾಡಲಾಗಿದೆಯೇ ಎಂಬುದನ್ನು ತಿಳಿಯಲಾಗುತ್ತದೆ.
ದೇಹದಲ್ಲಿ ಯಾವುದಾದರೂ ಟ್ರ್ಯಾಕಿಂಗ್ ಡಿವೈಸ್ಗಳನ್ನು ಅಳವಡಿಸಲಾಗಿದೆಯೇ ಎಂಬುದನ್ನು ಸ್ಕ್ಯಾನಿಂಗ್ ಮೂಲಕ ಪತ್ತೆ ಮಾಡಲಾಗುತ್ತದೆ.
ಉಗ್ರವಾದದ ಇನ್ನೊಂದು ಕ್ರೂರ ಹಾದಿಯೇ ಆದ ವಿಚಿತ್ರ ರೋಗಗಳ ವೈರಸ್’ಗಳನ್ನು ದೇಹದಲ್ಲಿ ಹರಡಿಸಿರುವ ಸಾಧ್ಯತೆಯನ್ನೂ ಸಹ ತಳ್ಳಿ ಹಾಕುವಂತಿಲ್ಲ. ಇದನ್ನೂ ಸಹ ಪರೀಕ್ಷೆ ಮಾಡಲಾಗುತ್ತದೆ.
ಅಭಿನಂದನ್ ವಿಚಾರದಲ್ಲಿ ಅವರು ವೈರಿ ರಾಷ್ಟ್ರದಲ್ಲಿ ಏಕಾಂಗಿಯಾಗಿದ್ದರು. ಭಾರತದ ಭದ್ರತಾ ರಹಸ್ಯಗಳನ್ನು ಹೇಳುವಂತೆ ಅಲ್ಲಿನ ಅಧಿಕಾರಿಗಳು ಒತ್ತಡ ಹೇರಿರುವ ಸಾಧ್ಯತೆ ಇರುತ್ತದೆ. ಹಾಗಾಗಿ, ಈ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ.
ಮಾನಸಿಕವಾಗಿ ಅವರನ್ನು ಮಂಪರು ಪರೀಕ್ಷೆಯಂತಹ ವಿಧಾನಗಳಿಗೆ ಒಳಪಡಿಸಿರುವ ಸಾಧ್ಯತೆಯೂ ಇದ್ದು, ಮೂಲಕ ಬಂಧನದಲ್ಲಿದ್ದಾಗ ಪಾಕಿಸ್ಥಾನ ಯಾವ ರೀತಿಯ ಮಾಹಿತಿಗಳನ್ನು ಕೇಳಿತ್ತು ಎಂಬುದನ್ನು ತಿಳಿದುಕೊಳ್ಳುವ ಪರೀಕ್ಷೆಗಳನ್ನು ಮಾಡಲಾಗುತ್ತದೆ.
ವಿಚಾರಣೆ ಯಾತಕ್ಕಾಗಿ?
ವೈದ್ಯಕೀಯ ಪರೀಕ್ಷೆಯಂತೆಯೇ ಈ ಹಂತದಲ್ಲಿ ಸಂಪೂರ್ಣ ವಿಚಾರಣೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಪ್ರಸ್ತುತ ಅಭಿನಂದನ್ ಅವರನ್ನು ಇನ್ನೂ ಕೆಲವು ದಿನಗಳ ಕಾಲ ಭಾರತೀಯ ಸೇನಾಪಡೆಗಳು ತಮ್ಮಲ್ಲಿಯೇ ಉಳಿಸಿಕೊಂಡು ಅವರು ಪಾಕಿಸ್ಥಾನದಲ್ಲಿ ಕಳೆದ ಅಷ್ಟೂ ಸಮಯ ಮತ್ತು ಪಾಕ್ ಅಧಿಕಾರಿಗಳ ವಿಚಾರಣೆ ಕುರಿತು ಪ್ರಶ್ನೆ ಮಾಡಲಿದ್ದಾರೆ.
ಮೂಲಗಳ ಮಾಹಿತಿಯಂತೆ ಪಾಕಿಸ್ಥಾನ ಅಭಿನಂದನ್’ರನ್ನು ಭಾರತಕ್ಕೆ ಹಸ್ತಾತಂತರಿಸಿದ ನಂತರ ವಾಯುಸೇನೆ ಅಧಿಕಾರಿಗಳು ಅವರನ್ನು ವಾಯುಸೇನೆಯ ಗುಪ್ತಚರ ಘಟಕಕ್ಕೆ ಕರೆದೊಯ್ದಿದ್ದಾರೆ.
ಭಾರತದ ಭದ್ರತಾ ರಹಸ್ಯಗಳನ್ನು ಹೇಳುವಂತೆ ಪಾಕ್ ಅಧಿಕಾರಿಗಳು ಒತ್ತಡ ಹೇರಿರುವ ಸಾಧ್ಯತೆ ಇರುತ್ತದೆ. ಹಾಗಾಗಿ, ಅವರನ್ನು ವಿಚಾರಣೆ ಮಾಡಲಾಗುತ್ತದೆ.
ಬಂಧನದಲ್ಲಿದ್ದಾಗ ಪಾಕಿಸ್ಥಾನ ಯಾವ ರೀತಿಯ ಮಾಹಿತಿಗಳನ್ನು ಕೇಳಿತ್ತು. ಅದರಲ್ಲಿ ಯಾವ ಪ್ರಶ್ನೆಗಳಿಗೆ ಇವರು ಉತ್ತರ ನೀಡಿದರು ಎನ್ನುವ ಬಗ್ಗೆ ಅಭಿನಂದನ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿರುತ್ತದೆ.
ಇನ್ನೊಂದು ಮಹತ್ವದ ವಿಚಾರವೆಂದರೆ, ಮಾಹಿತಿ ಸಂಗ್ರಹಣೆಗೆ ವೈರಿ ರಾಷ್ಟ್ರದವರು ತನ್ನನ್ನು ನೇಮಕ ಮಾಡಿಕೊಂಡಿಲ್ಲ ಎಂಬ ಖಾತ್ರಿಯನ್ನು ಅಭಿನಂದನ್ ವಾಯುಸೇನೆ ಅಧಿಕಾರಿಗಳಿಗೆ ನೀಡಬೇಕು. ಇದು ಬೇಸರದ ಸಂಗತಿಯಾದರೂ, ದೇಶದ ಭದ್ರತಾ ಹಿತದೃಷ್ಟಿಯಿಂದ ಅನಿವಾರ್ಯದ ಪ್ರಕ್ರಿಯೆಯಾಗಿರುತ್ತದೆ.
ಇನ್ನು ಅಭಿನಂದನ್ ಅವರನ್ನು ಸೇನಾ ವಿಚಾರಣೆಯ ನಂತರ ಗುಪ್ತಚರ ಇಲಾಖೆಗೆ ಅಥವಾ ರಾ ಸಂಸ್ಥೆಗೆ ಅವರನ್ನು ಹಸ್ತಾಂತರ ಮಾಡುವ ಸಾಧ್ಯತೆಯೂ ಇದೆ. ಈ ಮೊದಲು ವೈರಿ ರಾಷ್ಟ್ರಗಳಿಂದ ಬಂಧನಕ್ಕೊಳಗಾದವರನ್ನು ಐಬಿ ಹಾಗೂ ರಾ ಸಂಸ್ಥೆಗಳು ತನಿಖೆ ನಡೆಸಿದ ಉದಾಹರಣೆಗಳಿವೆ. ಆದರೆ, ಈ ಪ್ರಕರಣಗಳದಲ್ಲೂ ಹಾಗೆಯೇ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಕರಣದಿಂದ ಪ್ರಕರಣಕ್ಕೆ ಇವು ಭಿನ್ನವಾಗಿರುತ್ತದೆ.
ಒಟ್ಟಾರೆಯಲ್ಲಿ ರಾಷ್ಟ್ರದ ಭದ್ರತೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ವಿಚಾರವಾದ್ದರಿಂದ ಇಂತಹ ವಿಚಾರಣೆ ಹಾಗೂ ವೈದ್ಯಕೀಯ ತಪಾಸಣೆ ನಡೆಸುವುದು ತೀರಾ ಅನಿವಾರ್ಯ. ಈ ಎಲ್ಲಾ ವಿಚಾರಣೆ ಮುಕ್ತಾಯವಾಗುವವರೆಗೂ ಅಭಿನಂದನ್ ಅವರ ಕುಟಂಬಸ್ತರನ್ನೂ ಸಹ ಏಕಾಂಗಿಯಾಗಿ ಭೇಟಿಯಾಗಲು ಅವಕಾಶ ಕಲ್ಪಿಸಿರುವುದಿಲ್ಲ…
Discussion about this post