ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಸಂಗೀತದಂತಹ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಕುಟುಂಬದಲ್ಲಿ ಉತ್ತಮ ವಾತಾವರಣ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತ ಗಾಯಕ ಶಿವರಾಜ್ ಹೇಳಿದರು.
ವೀರಶೈವ ಲಿಂಗಾಯಿತ ಮಹಿಳಾ ವೇದಿಕೆ ವತಿಯಿಂದ ಹಳೇನಗರದ ಶ್ರೀ ವೀರಶೈವ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಚನ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ನಾವು ಪಾಶ್ಚಿಮಾತ್ಯ ಸಂಗೀತದ ಕಡೆ ಹೆಚ್ಚಿನ ಒಲುವು ತೋರುತ್ತಿದ್ದೇವೆ. ಆದರೆ ಅದಕ್ಕಿಂತ ನಮ್ಮ ಭಾರತೀಯ ಸಂಗೀತ, ವಚನಗಳು ಮನಸ್ಸಿಗೆ ನೀಡುವ ಸಂತೋಷ, ನೆಮ್ಮದಿ ಅವುಗಳು ನೀಡುವುದಿಲ್ಲ ಎಂದರು.
ಸಂಗೀತದಿಂದ ಹಲವು ಖಾಯಿಲೆಗಳಿಗೆ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿದ ಹಲವಾರು ಉದಾಹರಣೆಗಳಿದ್ದು, ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇಂತಹ ವಿಶಿಷ್ಟವಾದ ಮಾಂತ್ರಿಕ ಶಕ್ತಿ ಹೊಂದಿರುವಂತಹ ಕ್ಷೇತ್ರದತ್ತ ಒಲವು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಸಂಗೀತ ವಿದೂಷಿ ಗಾಯಿತ್ರಿ ಹಾಗು ಗಿರಿಜಾ ಮಾತನಾಡಿ, ಮಹಿಳೆಯರು ರಾಗ, ತಾಳ, ಭಾವ, ಸಾಹಿತ್ಯದೊಂದಿಗೆ ಸಂಗೀತದ ಜೊತೆ ವಚನಗಳನ್ನು ಹೇಳುವ ಅಭ್ಯಾಸ ಬೆಳೆಸಿಕೊಂಡಾಗ ಮಾತ್ರ ತಮ್ಮ ಸಾಮರ್ಥ್ಯ ವನ್ನು ಸಮಾಜಕ್ಕೆ ಪ್ರದರ್ಶಿಸಲು ಉತ್ತಮ ವೇದಿಕೆಗಳು ದೊರೆಯುತ್ತವೆ ಎಂದರು.
ಸಂಗೀತ ಹಾಗು ವಚನಗಳನ್ನು ಕಲಿಯಲು ವಯಸ್ಸಿನ ಮಿತಿ ಇಲ್ಲ. ಆದರೆ, ಆಸಕ್ತಿ ಬಹುಮುಖ್ಯ. ಇಂತಹ ಕಾರ್ಯಕ್ರಮ ಮತ್ತು ಶಿಬಿರಗಳಲ್ಲಿ ಭಾಗವಹಿಸಿದಾಗ ಮನಸ್ಸಿಗೆ ನೆಮ್ಮದಿ, ಆನಂದ ದೊರೆಯುತ್ತದೆ. ಅಲ್ಲದೆ ಪರಸ್ಪರರಲ್ಲಿ ಸ್ನೇಹ ಭಾವದ ಸಂಬಂಧ ಹೆಚ್ಚಾಗುತ್ತದೆ ಎಂದರು.
Also read: ಎಲೆಕ್ಟ್ರಿಕ್ ವಾಹನ ಅವಘಡ: ಗುಣಮಟ್ಟ ಕೇಂದ್ರಿತ ಮಾರ್ಗಸೂಚಿ ಬಿಡುಗಡೆಗೆ ಮುಂದಾದ ಕೇಂದ್ರ ಸರ್ಕಾರ
ಆರ್.ಎಸ್. ಶೋಭಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಲೋಚನಾ ಪ್ರಾರ್ಥಿಸಿದರು. ನಾಗರತ್ನ ವಿ ಕೋಠಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಂತ ವಂದಿಸಿದರು. ಭಾಗ್ಯ, ಪುಟ್ಟಮ್ಮ, ಉಷಾ, ಶೃತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post