ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ವಿಜ್ಞಾನ ಮುಂದುವರೆದಂತೆಲ್ಲ ಹೊಸ-ಹೊಸ ಅವಿಷ್ಕಾರ ಹುಟ್ಟಿಕೊಂಡಿವೆ. ಯಂತ್ರಗಳ ಭರಾಟೆಗೆ ಸಿಲುಕಿ ರೈತರ ಕೃಷಿ ಚಟುವಟಿಕೆಗಳು ಹಾಗೂ ಪೂರ್ವಜರ ಕಾಲದ ಬೇಸಾಯ ಪದ್ದತಿಗಳು ಕಣ್ಮರೆಯಾಗುತ್ತಿವೆ ಎಂದು ಶಾಸಕ ಟಿ. ರಘುಮೂರ್ತಿ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಗ್ರಾಮಪಂಚಾಯತ್, ತಾಲೂಕು ಆಡಳಿತ ಹಾಗೂ ವಿವಿಧ ರೈತ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ರೈತರ ವರ್ಷದ ಮೊದಲನೇ ನೇಗಿಲು ಮನೆ ಮಾಡುವ ಹೊನ್ನಾರು ಭೂಮಿ ಉಳುಮೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಂತ್ರಗಳ ಸಹಾಯದಿಂದ ನಾವು ಬೇಸಾಯ ಕ್ರಮಗಳನ್ನು ಅನುಸರಿಸುತ್ತಿದ್ದು, ಇಂದಿನ ಸಂಪ್ರದಾಯವನ್ನು ಮರೆತು ಹೋಗುತ್ತಿದ್ದೇವೆ. ನಮ್ಮ ಪೂರ್ವಜರು ನಾಯನಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ ದಿನದಂದು ಹಾಗೂ ಯುಗಾದಿಯಂದು ಹೊನ್ನಾರ ಹೂಡಿ, ಎತ್ತುಗಳಿಗೆ ವಿಶೇಷ ಪೂಜೆ ಮಾಡಿ, ಮೊದಲು ಹೊಲಕ್ಕೆ ಒಂಡೆರಡು ಸಾಲು ಉಳುಮೆ ಮಾಡುತ್ತಿದ್ದರು. ಅದು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗಿವೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ತಾಲೂಕು ಆಡಳಿತದಿಂದ ಪೂರ್ವಜರ ಕೃಷಿ ಚಟುವಟಿಕೆ ಪದ್ಧತಿ ನೆನೆಪಿಸುವಂತೆ ಮಾಡಿದೆ. ನಾವು ಚಿಕ್ಕ ಹುಡುಗರಿದ್ದಾಗ ಮಾಡುತ್ತಿದ್ದ ಅನೇಕ ಕಾರ್ಯಗಳು ಇಂದು ನೆನಪಿಸಿಕೊಳ್ಳುವಂತೆ ಆಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಮಾತನಾಡಿ, ಈ ಕಾರ್ಯಕ್ರಮದ ವಿಚಾರವಾಗಿ ನಮಗೆ ತಿಳಿಸಿದಾಗ ನನಗೆ ಆಶ್ಚರ್ಯವಾಗಿತ್ತು. ಇಲ್ಲಿ ಬಂದು ನೋಡಿದಾಗ ಒಂದು ಹಬ್ಬದ ವಾತಾವರಣವೇ ಸೃಷ್ಟಿಯಾಯಿತು. ರೈತರಿಲ್ಲದೆ ನಾವಿಲ್ಲ ದೇಶಕ್ಕೆ ಅನ್ನ ನೀಡುವ ರೈತರು ಅತಿವೃಷ್ಠಿ ಅನಾವೃಷ್ಠಿಗೆ ಸಿಲುಕಿ ಬೆಳೆದ ಬೆಳೆಗಳು ನಷ್ಟವಾಗಿ, ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಅತಿ ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ಬೆಳೆಯುವ ಬೆಳೆ ಪದ್ದತಿಗಳನ್ನು ರೈತರು ಅಳವಡಿಸಿ ಕೊಳ್ಳಬೇಕು. ರೈತರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದೆ ಬರುವಂತೆ ತಿಳಿಸಿದರು.

ತಹಶೀಲ್ದಾರ್ ರಘುಮೂರ್ತಿ ಮಾತನಾಡಿ, ರೈತರು ಹಾಗೂ ಎತ್ತುಗಳು ಅಭಿನಾಭಾವ ಸಂಬಂಧ ಹೊಂದಿರುದ್ದು, ರೈತನ ಜೊತೆಗೂಡಿ ಎತ್ತುಗಳು ಸಹ ದುಡಿಯುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ರೈತನ ಬದುಕಿಗೆ ಯಂತ್ರಗಳ ಆಧಾರವಾಗಿವೆ. ಯಂತ್ರಗಳಿಗಿಂತ ಮೊದಲು ಭೂಮಿಗೆ ಪೂಜೆ ಮಾಡುವ ಹಳೇ ಪದ್ಧತಿಯನ್ನು ರೈತರಿಗೆ ನೆನಪಿಸುವ ಉದ್ದೇಶದಿಂದ ನಮ್ಮ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಅವರ ಆಶಯದಂತೆ ಇಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
Also read: ಯಡಿಯೂರಪ್ಪ ಅವರ ನಡೆ ಪ್ರಶಂಸನಾರ್ಹ: ಮಾಜಿ ಶಾಸಕ ಪ್ರಸನ್ನಕುಮಾರ್ ಪ್ರತಿಕ್ರಿಯೆ
ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ, ರೈತರ ಸಹಕಾರ, ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳ ಸಹಕಾರವಿದೆ. ಇಲ್ಲಿ ಮೊದಲನೆಯದಾಗಿ ಜೋಡೆತ್ತುಗಳಿಗೆ , ಭೂಮಿತಾಯಿಗೆ, ನೇಗಿಲಿಗೆ ಪೂಜೆ ಮಾಡಿ ನಂತರ ಇಲ್ಲಿ ನೆರೆದಿದ್ದ ಎಲ್ಲರಿಗೂ ಹಳ್ಳಿ ಊಟ ವ್ಯವಸ್ಥೆ ಮಾಡಲಾಗಿದೆ ಇದು ಒಂದು ರೈತರ ಹಬ್ಬವಾಗಿ ಖುಷಿ ತಂದಿದೆ ನಮಗೆ ಎಂದು ತಿಳಿಸಿದರು.


ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ, ಸೋಮಗುದ್ದು ರಂಗಸ್ವಾಮಿ, ಕೆ.ಪಿ. ಭೂತಯ್ಯ, ಕೃಷಿ ವಿಜ್ಞಾನಿ ಓಂಕಾರಪ್ಪ, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ. ವಿರುಪಾಕ್ಷಪ್ಪ, ಸಹಾಯಕ ಕೃಷಿ ವಿರ್ದೇಶಕ ಡಾ. ಅಶೋಕ್ ಮಾತನಾಡಿದರು.
ಕಾರ್ಯಕ್ರಮದ ಮೊದಲು ಪೂರ್ವಜರ ಕಾಲದಲ್ಲಿ ವರ್ಷ ಪ್ರಾರಂಭದಲ್ಲಿ ಮುಂಗಾರ ಮಳೆ ಆರಂಭದಲ್ಲಿ ಜಮೀನಿನಲ್ಲಿ ಎತ್ತುಗಳಿಗೆ, ಕೃಷಿ ಪರಿಕರಿಗಳಿಗೆ ಪೂಜೆ ಸಲ್ಲಿಸಿ ಉಳುಮೆ ಮಾಡಿದರೆ ಮಳೆ ಬೆಳೆ ಸಮೃದ್ಧವಾಗಿ ಬಂದು ರೈತ ನೆಮ್ಮದಿಯಿಂದ ಜೀವನ ಸಾಗಿಸಬಹುದು ಎಂಬ ನಂಬಿಕೆ ಪೂಜೆ ಸಲ್ಲಿ ಬೇಸಾಯಕ್ಕೆ ಚಾಲನೆ ನೀಡಿದರು.
ಸುಮಾರು ಹದಿನೈದಕ್ಕೂ ಹೆಚ್ಚು ಜೋಡಿ ಬೇಸಾಯ ಎತ್ತುಗಳು ಭಾಗವಹಿಸಿದ್ದವು. ಗ್ರಾಪಂ ಅಧ್ಯಕ್ಷ ಬಸವರಾಜ್, ಸದಸ್ಯರಾದ ಶಾರದಮ್ಮ, ಗೀತಮ್ಮ, ಚನ್ನಯ್ಯ, ದೊರೆಬೈಯಣ್ಣ, ಶಿವಮ್ಮ, ಪಾರಿಜಾತ, ದೊರೆನಾಗರಾಜ್ ಸೇರಿದಂತೆ ರೈತರು ಭಾಗವಹಿಸಿದ್ದರು.

ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















