ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ವೇಗವಾಗಿ ಬೆಳೆಯುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರು ಸುರಕ್ಷಿತ ಮತ್ತು ಆಹ್ಲಾದಕರ ವಾತಾವರಣದ ಸ್ಥಳದಲ್ಲಿ ನಿರ್ಮಾಣಗೊಂಡಿದ್ದು, ಇಲ್ಲಿ ಎಲ್ಲ ಜಾತಿ, ಮತ, ಪಂಥ, ಧರ್ಮದ ಜನರು ಬದುಕು ಕಟ್ಟಿಕೊಂಡಿದ್ದಾರೆ. ಇಂಥ ಸುಂದರ, ಸುಸಜ್ಜಿತ ನಗರ ನಿರ್ಮಾಣವಾಗಲು ಕೆಂಪೇಗೌಡರ ವಿವೇಚನೆ ಮತ್ತು ದೂರದೃಷ್ಟಿಯೇ ಕಾರಣ ಎಂದು ಶಾಸಕ ಟಿ. ರಘುಮೂರ್ತಿ MLA Raghumurthy ಹೇಳಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತ ಹಾಗೂ ಒಕ್ಕಲಿಗರ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು 1537ರಲ್ಲೇ ನಗರವನ್ನು ಕಟ್ಟಿದರು. ತದನಂತರ ಕೆಂಪೇಗೌಡರ ರಾಜಧಾನಿಯು ಯಲಹಂಕದಿಂದ ಬೆಂಗಳೂರಿಗೆ ಸ್ಥಳಾಂತರವಾಯಿತು. ನಗರವನ್ನು ಪ್ರಮುಖ ವಾಣಿಜ್ಯ ಕೇಂದ್ರವನ್ನಾಗಿ ಮಾಡಬೇಕೆಂಬುದು ಕೆಂಪೇಗೌಡರ ಮಹದಾಸೆಯಾಗಿತ್ತು. ಅದರಂತೆಯೇ ತಮ್ಮ ಕೋಟೆಯೊಳಗೆ ಆಯಾ ಕುಲ ಕುಸಬುದಾರರಿಗೆ ಅನುಗುಣವಾಗಿ ಪೇಟೆಗಳನ್ನು ಕಟ್ಟಿಕೊಂಡು, ವ್ಯಾಪಾರ-ವಹಿವಾಟಿಗೆ ಅನುವು ಮಾಡಿಕೊಟ್ಟಿದ್ದರು ಎಂದು ತಿಳಿಸಿದರು.
ಬೆಂಗಳೂರಿಗೆ ನದಿ ಮೂಲಗಳಿರಲಿಲ್ಲ. ಹೀಗಾಗಿ, ಕೃಷಿ ಮತ್ತು ಕುಡಿಯುವ ನೀರಿಗಾಗಿ ಧಮಾಂಬುಧಿ ಕೆರೆ, ಕೆಂಪಾಂಬುಧಿ ಕೆರೆ, ಹಲಸೂರು, ಸಂಪಂಗಿ ಕೆರೆ, ಕಾರಂಜಿ ಕೆರೆ, ಸಿದ್ಧಿಕಟ್ಟೆ, ಕೆಂಪಾಪುರ ಅಗ್ರಹಾರ ಕೆರೆ, ಜಕ್ಕರಾಯನಕೆರೆ ಸೇರಿದಂತೆ ನೂರಾರು ಕೆರೆ-ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಅವರ ಕಾಲದಲ್ಲಿ 347 ದೊಡ್ಡ ಕೆರೆಗಳು, 1200ಕ್ಕೂ ಅಧಿಕ ಸಣ್ಣ ಕೆರೆ-ಕಟ್ಟೆಗಳಿದ್ದವು ಎನ್ನಲಾಗಿದೆ. ಈ ಪೈಕಿ ಹಲವು ಕೆರೆಗಳು ಅಭಿವೃದ್ಧಿ ಹೆಸರಿನಲ್ಲಿ ಹೇಳ ಹೆಸರಿಲ್ಲದಂತಾಗಿವೆ. ಸಂಪಂಗಿ ಕೆರೆ ಜಾಗದಲ್ಲಿ ಕಂಠೀರವ ಕ್ರೀಡಾಂಗಣ, ಸಿದ್ಧಿಕಟ್ಟೆ ಇದ್ದ ಸ್ಥಳದಲ್ಲಿ ಕೆ.ಆರ್. ಮಾರುಕಟ್ಟೆ, ಧಮಾಂಬುಧಿ ಕೆರೆ ಜಾಗದಲ್ಲಿ ಕೆಂಪೇಗೌಡ ಬಸ್ ನಿಲ್ದಾಣ ನಿರ್ಮಾಣವಾಗಿದೆ ಎಂದು ಹೇಳಿದರು.
ನಗರೀಕರಣದ ಪರಿಣಾಮ, ಹಲವು ಕೆರೆಗಳು ಸಂಪೂರ್ಣ ಕಲುಷಿತಗೊಂಡಿವೆ. ಬಳಕೆಗಿರಲಿ, ಮುಟ್ಟಲು ಸಹ ಜನರು ಅಂಜುವಂತಾಗಿದೆ. ಇಂದು ಕರ್ನಾಟಕದ ರಾಜಧಾನಿ ಬೆಂಗಳೂರು ವಿಶ್ವದಲ್ಲೇ ಗುರುತಿಸಿಕೊಂಡಿದೆ. ಅವರು ಹಾಕಿ ಕೊಟ್ಟಂತಹ ಹಲವು ಕಾರ್ಯಗಳ ಮೂಲಕ ಇಂದು ನಾವು ಸಾಗಬೇಕಿದೆ ಎಂದರು.
Also read: ನಿತ್ಯ ಜೀವನದಲ್ಲಿ ಯೋಗ ಶಾಸ್ತ್ರ ಅಳವಡಿಕೆಯಿಂದ ಮನಸ್ಸು ಸದೃಢ: ಯೋಗ ಶಿಕ್ಷಕ ಡಾ. ಅರವಿಂದ್
ಗ್ರೇಡ್-2 ತಾಹಶೀಲ್ದಾರ್ ಎನ್. ಸಂಧ್ಯಾ ಮಾತನಾಡಿ, ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿರುವ ಎಲ್ಲರೂ ಇಂದು ಗೌರವಭಾವದಿಂದ ಸ್ಮರಿಸಬೇಕಾದ ದಿನ. ಏಕೆಂದರೆ ಬೆಂಗಳೂರಿನಂತಹ ಮಹಾಮಹಿಮ ನಗರಕ್ಕೆ ತಳಪಾಯ ಹಾಕಿದ ನಾಡಪ್ರಭು ಕೆಂಪೇಗೌಡರನ್ನು ನೆನೆಸಿಕೊಳ್ಳುವಂತಹ ಸುದಿನವಿದು. ಕೆಂಪೇಗೌಡರು ಕಟ್ಟಿಸಿದ ಕೋಟೆಗಳು, ಕೆರೆಗಳು ಪಾರಂಪರಿಕ ತಾಣಗಳಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿವೆ ಎಂದರು.
ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ರಮೇಶ್ ಕುಮಾರ್ ಮಾತನಾಡಿ, ಕೆಂಪೇಗೌಡರ ತಾಯಿ ಕ್ಯಾಂಬೆ ಮತ್ತು ಪತ್ನಿ ಚನ್ನಮ್ಮ (ಸೋದರ ಮಾವ ಮಗಳು) ಇವರು ಹಳೇ ಬೆಂಗಳೂರಿನವರು. ಹಾಗಾಗಿ ಇಬ್ಬರೂ ಪ್ರೀತಿಯ ನೆನಪಿಗಾಗಿ ತಾವು ನಿರ್ಮಿಸಿದ ಪಟ್ಟಣಕ್ಕೆ ಬೆಂಗಳೂರು ಎಂದು ಹೆಸರು ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ ಎಂದರು.
ಬಾಲ್ಯದಿಂದ ಶ್ರೀಕೃಷ್ಣದೇವರಾಯರ ಆಡಳಿತಾವಧಿ ಧಾರ್ಮಿಕ-ಸಾಂಸ್ಕೃತಿಕ ಸಿರಿಯನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡರಿಗೆ ಈ ಎಲ್ಲಾ ವೈಭವಗಳನ್ನು ತಮ್ಮ ನಾಡಿನಲ್ಲಿ ಪ್ರತಿಷ್ಠಾಪಿಸುವ ಬಯಕೆಯಿತ್ತು ಇದರಿಂದಾಗಿ ಹಲವು ಬಾರಿ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆಗಳನ್ನು ಮನದಟ್ಟು ಮಾಡಿಕೊಂಡು ಬಂದಿದ್ದರು. ನಂತರ ನಗರ ನಿರ್ಮಾಣಕ್ಕೆ ಪ್ರದೇಶದ ಆಯ್ಕೆ ಮಾಡುವ ಜವಾಬ್ದಾರಿಯನ್ನು ಕೆಂಪೇಗೌಡರ ವಹಿಸಿಕೊಂಡಿದ್ದರು. ಅದರಂತೆ ನಗರವನ್ನು ಸಹ ಕಟ್ಟಿ ಬೆಳೆಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಕವಿತಾ ಬೋರಣ್ಣ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಚನ್ನಕೇಶವ ಮುಖಂಡರಾದ ಚಂದ್ರಯ್ಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮ, ಉಪಾಧ್ಯಕ್ಷರಾದ ಮಂಜುಳಾ ಆರ್. ಪ್ರಸನ್ನ ಕುಮಾರ್, ನಗರಸಭೆ ಸದಸ್ಯರಾದ ರಮೇಶ್ ಗೌಡ, ಸಾವಿತ್ರಮ್ಮ ಸುಮಾ ಭರಮಣ್ಣ, ಜೈತುನ್ಬಿ, ಸುಜಾತ, ನಾಮನಿರ್ದೇಶನ ಸದಸ್ಯರಾದ ಇಂದ್ರೇಶ್, ಒಕ್ಕಲಿಗರ ಸಂಘದ ಮುಖಂಡರಾದ ಕಾಮೇಗೌಡ, ಶಿವಣ್ಣ, ಸುರೇಶ್, ಮಧು ಮಹಾಲಿಂಗಪ್ಪ, ಹೆಗ್ಗೆರೆ ಆನಂದಪ್ಪ ಹಾಗೂ ಪೌರಾಯುಕ್ತ ಟೀ ಲಿಲಾವತಿ, ಪಶು ಸಂಗೋಪನಾ ಇಲಾಖೆ ಅಧಿಕಾರಿ ರೇವಣ್ಣ, ರೇಷ್ಮೆ ಇಲಾಖೆ ಅಧಿಕಾರಿ ಕೆಂಚೆ ಜಿ. ರಾವ್, ರಾಜಸ್ವ ನಿರೀಕ್ಷಕ ಲಿಂಗೇಗೌಡ, ವಿ ಎ ಪ್ರಕಾಶ್, ಕಚೇರಿ ಸಿಬ್ಬಂದಿಯಾದ ಶ್ರೀನಿವಾಸ್ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post