ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ರಸ್ತೆ ಸುರಕ್ಷತೆ ಬಗ್ಗೆ ಅರಿವು ಹೊಂದುವುದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು. ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ನಿಯಮಗಳ ಬಗ್ಗೆ ತಿಳವಳಿಕೆ ಮೂಡಿಸಬೇಕು ಎಂದು ಸೆಕ್ಯೂರ್ ಆಸ್ಪತ್ರೆಯ ಸಹ ಪ್ರಾಧ್ಯಾಪಕ ಡಾ. ಬಿ. ಸುರೇಶ್ ಹೇಳಿದರು.
ನಗರದ ಸಹ್ಯಾದ್ರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಅಖಿಲ ವೀರಶೈವ ಮಹಾಸಭಾ ತಾಲೂಕು ಘಟಕದ ವತಿಯಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ “ರಸ್ತೆ ಸುರಕ್ಷತೆ, ರಸ್ತೆ ನಿಯಮಗಳು ಹಾಗೂ ಜೀವನ ಕೌಶಲ್ಯ ಆಹಾರ ಪದ್ಧತಿ” ಬಗ್ಗೆ ಹಮ್ಮಿಕೊಳ್ಳಲಾದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಲ್ಯದಿಂದ ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು. ಜೀವನ ಕೌಶಲ್ಯ ಹಾಗೂ ನಿಯಮಿತ ವ್ಯಾಯಾಮ, ಪೌಷ್ಠಿಕಾಂಶ ಆಹಾರ ಸೇವನೆ ಅಭ್ಯಾಸ ಮಾಡಬೇಕು. ಯಾವುದೇ ಕಾಯಿಲೆ ಬರದಂತೆ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

ಕಾನೂನಿನ ಪ್ರಕಾರ ಅಪಘಾತವಾದ ವ್ಯಕ್ತಿಗಳಿಗೆ ಸಹಾಯ ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಅಪಘಾತಗೊಂಡ ಸ್ಥಳಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡದೇ ತಕ್ಷಣ ಪ್ರಥಮ ಚಿಕಿತ್ಸೆ ಮಾಡಿದಲ್ಲಿ ಜೀವ ಉಳಿಸಲು ಸಾಧ್ಯವಿರುತ್ತದೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಉಪಾಧ್ಯಕ್ಷೆ ಪುಷ್ಪಾ ಹಾಲಪ್ಪ, ಕಾರ್ಯದರ್ಶಿ ಸಂಗಮೇಶ್ ಮಠದ್, ಎನ್.ಬಿ. ಮಂಜುನಾಥ್, ನಿರ್ದೇಶಕರಾದ ಕೋಕಿಲ ಚಂದ್ರಶೇಖರ್, ಮುಖ್ಯಶಿಕ್ಷಕ ಗುರುಮೂರ್ತಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.










Discussion about this post