ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ ತಾಲ್ಲೂಕು ಚಂದ್ರಗುತ್ತಿ ಪಂಚಾಯ್ತಿ ಬಸ್ತಿಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ಭಾರಿ ಕಲ್ಲುಗಣಿಗಾರಿಕೆಗೆ ಸಂಬಂಧಿಸಿದಂತೆ ಕೆಲವು ಗಂಭೀರ ವಿಷಯಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ರಾಜ್ಯ ಜೀವವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತಹೆಗಡೆ ಅಶೀಸರ ಕೋರಿದ್ದಾರೆ.
ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿರುವ ಅವರು, ಸೊರಬ ತಾಲ್ಲೂಕು ಚಂದ್ರಗುತ್ತಿ ಪಂಚಾಯ್ತಿ ಬಸ್ತಿಕೊಪ್ಪ ಗ್ರಾಮದಲ್ಲಿ ಭಾರಿ ಕಲ್ಲುಗಣಿಗಾರಿಕೆಯಿಂದ ಅಪಾರ ಹಾನಿ, ಅಪಘಾತಕ್ಕೆ ಒಳಗಾಗಿದೆ. ಈ ಬಗ್ಗೆ ನಮ್ಮ ವೃಕ್ಷಲಕ್ಷ ಆಂದೋಲನ ತಂಡ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಜನರ ಅಹವಾಲು ಆಲಿಸಿದೆ. ಪರಿಸ್ಥಿತಿ ಬಗ್ಗೆ ಶಿವಮೊಗ್ಗಾ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ವರದಿ ನೀಡಿದ್ದೇವೆ. ಮುಂದುವರೆದ ಭಾಗವಾಗಿ ಗಣಿ, ಅರಣ್ಯ, ಕಂದಾಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿನೀಡಿದೆ. ಇದೀಗ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಗಣಿ ಸ್ಪೋಟಕ ಬಳಸದಂತೆ, ಕಾಮಗಾರಿಗೆ ತಡೆ ಹಾಕಿದ್ದಾರೆ. ಬಸ್ತಿಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ತಿಳಿಸಿದ್ದಾರೆ.
Also read: ಏ.24ರಂದು ಕು. ಕವಿತಾ ಭರತನಾಟ್ಯ ರಂಗಪ್ರವೇಶ
500ಕ್ಕೂ ಹೆಚ್ಚು ಜನರಿರುವ ಗ್ರಾಮದಲ್ಲಿ ನೀರಿನ ಹಾಹಾಕಾರ, ಶುದ್ಧ ನೀರಿಲ್ಲ, ಬೋರ್ವೆಲ್ಗಳು ಬತ್ತಿವೆ. ಒಂದೆರಡು ಬಾವಿಗಳು ಇದ್ದರೂ ಕಲುಷಿತವಾಗಿದೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ರೈತರು ದಮ್ಮು, ಕ್ಷಯ, ಹೃದಯ ಕಾಯಿಲೆ, ಅಪೌಷ್ಟಿಕತೆಗೆ ಒಳಗಾಗಿದ್ದಾರೆ. ಗರ್ಭಪಾತ ಹೆಚ್ಚಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ, ತಕ್ಷಣ ಧಾವಿಸಬೇಕು. ಕೃಷಿ ತೋಟಗಾರಿಕೆ ಸಂಪೂರ್ಣ ಹಾಳಾಗಿದೆ, ಬೆಳೆ ಇಲ್ಲ, ನೀರಿಲ್ಲ, ಎಲ್ಲ ಧೂಳು, ಕಲುಷಿತ ವಾತಾವರಣ ಉಂಟಾಗಿದೆ. ಗ್ರಾಮ ರಸ್ತೆ ಸಂಪೂರ್ಣ ಹಾಳಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, ವೈದ್ಯರು ಗ್ರಾಮಕ್ಕೆ ಹೋಗಲು ಸಾಧ್ಯವಿಲ್ಲದಂತಾಗಿದೆ. ಶಾಲೆ, ಹಾಸ್ಟೆಲ್ ಹೊರ ಆವರಣ ಮತ್ತು ಒಳಗೆ ಎಲ್ಲವೂ ಧೂಳು ತುಂಬಿಕೊಂಡಿದ್ದು, ಮಲೀನವಾಗಿದೆ. ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡು ತುರ್ತು ಪರಿಹಾರ, ಗ್ರಾಮಕ್ಕೆ ಜನರಿಗೆ ಕನಿಷ್ಟ ಸೌಲಭ್ಯ ಕಲ್ಪಿಸಲು ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ, ಗ್ರಾಮ ಪಂಚಾಯತಗಳು ತಕ್ಷಣ ಕಾರ್ಯ ಪ್ರವೃತ್ತರಾಗಲು ನೇರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post