ಉಡುಪಿ, ಸೆ.28: ನಾನಾ ರೀತಿಯ ವಿಕೃತಿಗಳಿಂದ ಸಂಶಯಕ್ಕೆ ಗುರಿಯಾಗಿರುವ ಸಾಮಾಜಿಕ ಮಾಧ್ಯಮ ವಾಟ್ಸಾಪ್ ನ್ನು ಮಾನವೀಯ ಉದ್ದೇಶಗಳಿಗೂ ಬಳಸಿಕೊಳ್ಳಬಹುದು ಎಂಬದಕ್ಕೆ ಉದಾಹರಣೆಯೊಂದು ಇಲ್ಲಿದೆ.
ಕುಲಾಲ ಚಾವಡಿ ಎಂಬ ವಾಟ್ಸಪ್ ತಂಡದ ಸದಸ್ಯರು ಇಲ್ಲಿನ ಮೂಳೂರು ಗ್ರಾಮದ ಅಂಗವಿಕಲ ದಯಾನಂದ ಎಂಬವರ ಮನೆಗೆ ಬೋರ್ ವೆಲ್ ತೋಡಿಸಿಕೊಟ್ಟು ವಿದ್ಯುತ್ ಪಂಪು ಅಳವಡಿಸಿ, ಅವರ ಬಹಳ ದಿನ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ನೀಡಿದ್ದಾರೆ.
ಸುಮಾರು 12 ವರ್ಷಗಳ ಹಿಂದೆ ಮಧುಮೇಹದಿಂದಾಗಿ ಎಡಕಾಲನ್ನು ಕಳೆದುಕೊಂಡಿಂರುವ ದಯಾನಂದ ದುಡಿಯಲಾಗದೇ ಅತಂತ್ರ ಸ್ಥಿತಿಯಲ್ಲಿದ್ದಾರೆ. ಪತ್ನಿ ಗಿರಿಜಾ ಬೀಡಿ ಕಟ್ಟಿ ಅದರಲ್ಲಿ ಬರುವ ಆದಾಯದಲ್ಲಿ ಜೀವನ ಸಾಗಿಸಬೇಕಾಗಿದೆ.ಅವರಿಗೆ 2 ವರ್ಷದ ಹೆಣ್ಣು ಮಗುವಿದೆ. ತಮ್ಮದೆನ್ನುವ 6 ಸೆಂಟ್ಸ್ ಜಮೀನಿನಲ್ಲಿ ಸಣ್ಣ ಮನೆಯೊಂದನ್ನು ಕಟ್ಟಿಕೊಂದು ಬದುಕು ಸಾಗಿಸುತ್ತಿದ್ದಾರೆ.
ಇದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯಿಂದಾಗ ಸಂಕಷ್ಟು ಇನ್ನೂ ಹೆಚ್ಚಾಗಿದೆ. ಕುಡಿುವುದಕ್ಕೆ, ಆಡುಗೆ ಮಾಡುವುದಕ್ಕೆ, ಬಟ್ಟೆ ಬರೆ – ಪಾತ್ರೆ ತೊಳೆಯುವುದಕ್ಕೆ ಸ್ವಂತ ಬಾವಿ ಇಲ್ಲದ ಅವರು ದೂರದ ಬಾವಿಯೊಂದರಿಂದ ನೀರನ್ನು ಕಷ್ಟಪಟ್ಟು ಸೇದಿ ತರಬೇಕಾಗಿತ್ತು.
ಈ ವಿಷಯ ತಿಳಿದ ಕುಲಾಲ ಚಾವಡಿ ವಾಟ್ಸಪ್ ತಂಡದ ಸದಸ್ಯರು ಪರಸ್ಪರ ಮಾಹಿತಿಯನ್ನು ರವಾನಿಸಿದರು. ಇದಕ್ಕೆ ಸ್ಪಂದಿಸಿದ ಸದಸ್ಯರು ಕೆಲವೇ ದಿನಗಳಲ್ಲಿ ಒಂದಷ್ಟು ಹಣವನ್ನು ಸಂಗ್ರಹಿಸಿ, ದಯಾನಂದ ಅವರ ಮನೆಗೆ ತೆರಳಿ, ಬೋರ್ವೆಲ್ ತೋಡಿಸಿ, ಅದಕ್ಕೆ ವಿದ್ಯುತ್ ಚಾಲಿತ ಪಂಪು ಅಳವಡಿಸಿದ್ದಾರೆ. ದಯಾನಂದ ಅವರ ಕುಟುಂಬದ ಬಹಳ ದೊಡ್ಡ ಸಮಸ್ಯೆಗೆ ಪರಿಹಾರ ಒದಗಿಸಿದ್ದಾರೆ.
ಭಾನುವಾರ ಬೋರ್ ವೇಲ್ ಮತ್ತು ಪಂಪನ್ನು ಚಾವಡಿ ಸದಸ್ಯರೆಲ್ಲರೂ ಸೇರಿ ದಯಾನಂದ ಕುಲಾಲ್ ಅವರಿಗೆ ಹಸ್ತಾಂತರಿಸಿದ್ದಾರೆ. ಕಣ್ಣಲ್ಲಿ ನೀರು ತುಂಬಿಕೊಂದು ದಯಾನಂದ ಮತ್ತು ಗಿರಿಜಾ ಅವರು ಕೃತಜ್ಞತೆಯಿಂದ ಈ ಕೊಡುಗೆಯನ್ನು ಸ್ವೀಕರಿಸಿದ್ದಾರೆ.
ಈಗ ಬದುಕುವ ಭರವಸೆ ಸಿಕ್ಕಿದೆ
ಕುಲಾಲ ಚಾವಡಿ ವಾಟ್ಸಾಪ್ ತಂಡದ ಸದಸ್ಯರು ನಮ್ಮ ಕಷ್ಟಗಳ ಬಗ್ಗೆ ಕೇಳಿ ತಿಳಿದುಕೊಂಡು ತಾವಾಗಿಯೇ ಇಲ್ಲಿಗೆ ಬಂದು ನನ್ನಂತಹ ಅಸಹಾಯಕನಿಗೆ ಸಹಾಯ ಮಾಡಿದ್ದಾರೆ, ನಮ್ಮ ಕುಟುಂಬದ ಕಣ್ಣೀರು ಒರೆಸಿದ್ದಾರೆ. ಈಗ ಬದುಕು ಸಾಗಿಸಬಹುದೆಂಬ ಭರವಸೆ ಮೂಡಿದೆ, ಅವರ ಸಹಾಯವನ್ನು ಎಂದೂ ಮರೆಯಲಾರೆ ಎಂದು ದಯಾನಂದ – ಗಿರಿಜಾ ದಂಪತಿ ಸಂತಸ ವ್ಯಕ್ತಪಡಿಸಿದರು.
ಇನ್ನಷ್ಟು ಸಹಾಯ ಮಾಡುತ್ತೇವೆ
ವಾಟ್ಸಾಪ್ ಉತ್ತಮ ಕೆಲಸಗಳಿಗೂ ಬಳಸಿಕೊಳ್ಳುವುದಕ್ಕೆ ಸಾಧ್ಯವಿದೆ. ಪರಸ್ಪರ ಪರಿಚಯಕ್ಕಾಗಿ ಆರಂಭವಾದ ನಮ್ಮ ವಾಟ್ಸಾಪ್ ತಂಡದ ಸದಸ್ಯರು ದಯಾನಂದ ಅವರಿಗೆ ಸಹಾಯ ಮಾಡಿದ್ದಾರೆ. ಇದು ಆರಂಭ ಮುಂದೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಉದ್ದೇಶ, ಕಳಕಳಿ ತಂಡಕ್ಕಿದೆ ಎಂದು ಕುಲಾಲ ಚಾವಡಿ ವಾಟ್ಸಾಪ್ ತಂಡದ ಅಡ್ಮಿನ್ ಸಂತೋಷ್ ಕುಲಾಲ್ ಪದವು ಹೇಳಿದರು.
ಈ ಸಂದರ್ಭದಲ್ಲಿ ಕಾಪು ಕುಲಾಲ ಸಂಘದ ಅಧ್ಯಕ್ಷ ರಾಜೇಶ್ ಬಬ್ಬೆಟ್ಟು, ಕರಾವಳಿ ಕುಲಾಲ ಯುವ ವೇದಿಕೆ ಕಾಪು ಅಧ್ಯಕ್ಷ ಉದಯ ಕುಲಾಲ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
Discussion about this post