Read - 2 minutes
ಚೆನ್ನೈ, ಅ.7: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಖ್ಯಾತ ಚಿತ್ರನಟ ಅಜಿತ್ ಅಮ್ಮನ ಉತ್ತರಾಧಿಕಾರಿ ಆಗುವುದು ಬಹುತೇಕ ಖಚಿತವಾಗಿದೆ. ಈ ಮಹತ್ವದ ಬೆಳವಣಿಗೆ ಹಿನ್ನೆಲೆಯಲ್ಲಿ ಅಣ್ಣಾ ಡಿಎಂಕೆ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.
ಅಧಿನಾಯಕಿ ಜಯಲಲಿತಾ ಸುದೀರ್ಘಕಾಲ ವಿಶ್ರಾಂತಿ ಪಡೆಯುವ ಅಗತ್ಯವಿದೆ ಎಂದು ವೈದ್ಯರು ಈಗಾಗಲೇ ಸಲಹೆ ಮಾಡಿದ್ದಾರೆ. ಎಐಎಡಿಎಂಕೆ ಧುರೀಣೆ ಅನಾರೋಗ್ಯ ಪೀಡಿತರಾಗಿ ಕಳೆದ 12 ದಿನಗಳಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ತಮಿಳುನಾಡಿನ ಆಡಳಿತ ಯಂತ್ರ ಬಹುತೇಕ ಸ್ಥಬ್ತಗೊಂಡಿದೆ. ಇನ್ನು ಮುಂದೆ ರಾಜಕಾರಣದಲ್ಲಿ ಅಮ್ಮಾ ಸಕ್ರಿಯವಾಗಿ ಭಾಗವಹಿಸುವುದು ಅನುಮಾನ. ಈ ಎಲ್ಲ ವಿದ್ಯಮಾನಗಳಲ್ಲಿ ತಮಿಳುಚಿತ್ರರಂಗದ ಹಿರಿಯ ನಟ ಅಜಿತ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ. ಜಯಲಲಿತಾ ಅವರ ಮನದಾಳದ ಇಚ್ಚೆಯೂ ಇದೆ ಆಗಿದೆ ಎಂಬುದು ಹಿರಿಯ ಸಚಿವರೊಬ್ಬರು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಈಗಾಗಲೇ ಮಹತ್ವದ ಚರ್ಚೆ ಮತ್ತು ಸಮಾಲೋಚನೆಗಳು ನಡೆದಿದ್ದು, ಕಾಲಿವುಡ್ ತಾರೆ ಅಜಿತ್ ಸರ್ವಸಮ್ಮತದ ಉತ್ತರಾಧಿಕಾರಿಯಾಗಿ ಪ್ರತಿಬಿಂಬಿಸಲ್ಪಟ್ಟಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಈ ಹಿಂದೆ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದಾಗ ಅವರ ಆಪ್ತ ಮತ್ತು ಹಿರಿಯ ಸಚಿವ ಪನ್ನೀರ್ ಸೆಲ್ವಂ ತಮಿಳುನಾಡು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಅಮ್ಮನಷ್ಟು ವರ್ಚಸ್ಸು ಅವರಿಗೆ ಇರಲಿಲ್ಲ. ಜತೆಗೆ ಒಂದೆರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸೆಲ್ವಂ ವಿರುದ್ಧ ಆರೋಗಳು ಕೇಳಿ ಬಂದಿದ್ದವು. ಜತೆಗೆ ದುರ್ಬಲ ಮತ್ತು ಅಸಮರ್ಥ ಎಂಬ ಕಪ್ಪು ಚುಕ್ಕೆಯೂ ಅವರಿಗೆ ಅಂಟಿದೆ. ಈ ಕಾರಣದಿಂದ ಪನ್ನೀರ್ ಸೆಲ್ವಂ ಬಗ್ಗೆ ಸ್ವತಃ ಜಯಲಲಿತಾರಿಗಾಗಲಿ, ಅಣ್ಣಾಡಿಎಂಕೆ ವರಿಷ್ಠರಿಗಾಗಲಿ ಅಥವಾ ಹಿರಿಯ ಸಚಿವರಿಗಾಗಲಿ ಒಲವು ಇಲ್ಲ.
ಜಯಾ ಸಾಕುಪುತ್ರ ಸುಧಾಕರ್ ವರ್ತನೆ ಬಗ್ಗೆ ಅಮ್ಮಾ ರೋಸಿ ಹೋಗಿದ್ದಾರೆ. ಇದೇ ಕಾರಣಕ್ಕಾಗಿ ಆಸ್ಪತ್ರೆಗೆ ಭೇಟಿ ನೀಡಲು ಅವರಿಗೆ ಅವಕಾಶ ನೀಡಲಾಗಿಲ್ಲ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಗ ಎಲ್ಲರ ಕಣ್ಣು ಜಯಲಲಿತಾರ ಮಾನಸಪುತ್ರ ಎಂದೇ ಗುರುತಿಸಿಕೊಂಡಿರುವ ಅಜಿತ್ ರತ್ತ ನೆಟ್ಟಿದೆ. ಈ ಬಗ್ಗೆ ಅಮ್ಮಾ ಕಂಡ ಸ್ಪಷ್ಟ ನಿಲುವು ಹೊಂದಿದ್ದು, ಈಗಾಗಲೇ ಈ ವಿಷಯದಲ್ಲಿ ಸ್ಪಷ್ಟ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಅವರ ಮುಂಗಡ ಉಯಿಲು ಪ್ರಕಾರ ಅಜಿತ್ ಅಮ್ಮಾನ ಉತ್ತರಾಧಿಕಾರಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ನಟ ಅಜಿತ್ ಮೊದಲಿನಿಂದಲೂ ಜಯಲಲಿತಾರ ಪರಮ ಅಭಿಮಾನಿ. ಅವರ ಸಭೆ-ಸಮಾರಂಭಗಳಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಸಿನಿಮಾಗಳ ಮುಹೂರ್ತ, ಶತದಿನೋತ್ಸವ ಸಮಾರಂಭಗಳಿಗೆ ಅಮ್ಮನ ಕೃಪಾಶೀರ್ವಾದ ಪಡೆದು ಪರೋಕ್ಷವಾಗಿ ರಾಜಕೀಯ ಒಡನಾಡಿ ಹೊಂದಿದ್ದಾರೆ. ಪಕ್ಷದ ಬಹುತೇಕ ಎಲ್ಲ ಕಾರ್ಯಕರ್ತರೂ ಸಹ ಅಜಿತ್ ಬಗ್ಗೆ ವಿಶೇಷ ಒಲವು ಹೋಂದಿದ್ದಾರೆ.
ಅಜಿತ್ರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿ ನಂತರ ಎಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕರಾಗಿ ಒಮ್ಮತದಿಂದ ಆರಿಸಿ ಜಯಾ ಉತ್ತರಾಧಿಕಾರಿಯಾಗಿ ನೇಮಿಸಲು ಬಿರುಸಿನ ಚಟುವಟಕೆಗಳು ಆರಂಭವಾಗುವ ಸ್ಪಷ್ಟ ಸೂಚನೆಗಳೂ ಲಭಿಸಿವೆ.
ತಮಿಳುನಾಡಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸೃಷ್ಟಿಸಿಕೊಂಡು ವಿಶೇಷ ವರ್ಚಸ್ಸು ಗಳಿಸಿರುವ ಅಜಿತ್ ಮುಖ್ಯಮಂತ್ರಿಯಾದರೆ ಪಕ್ಷದ ಪ್ರತಿಷ್ಠೆ ಹೆಚ್ಚಾಗುವ ಜತೆಗೆ ಮುಂದಿನ ಚುನಾವಣೆಗಳನ್ನು ಎಐಎಡಿಎಂಕೆ ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂಬ ರಾಜಕೀಯ ಲೆಕ್ಕಾಚಾರಗಳೂ ನಡೆದಿವೆ.
ಒಂದು ವೇಳೆ ಅಜಿತ್ ಮುಖ್ಯಮಂತ್ರಿ ಆಗಲು ಸಾಧ್ಯವಾಗದಿದ್ದರೆ ಪನ್ನೀರ್ ಸೆಲ್ವಂರನ್ನು ವಿಧಿ ಇಲ್ಲದೆ ಉತ್ತರಾಧಿಕಾರಿಯನ್ನಾಗಿ ಮಾಡುವ ಪರ್ಯಾಯ ಆಯ್ಕೆ ಬಗ್ಗೆಯೂ ಚಚರ್ೆ ನಡೆದಿದೆ.
Discussion about this post