ನವದೆಹಲಿ, ಅ.8: ಭಾರತ ಹಾಗೂ ಪಾಕಿಸ್ಥಾನ ನಡುವಿನ ವಿವಾದ ಒಂದೆಡೆಯಾದರೆ, ಪಿಒಕೆ ದಾಳಿ ಕುರಿತಂತೆ ಸಾಕ್ಷಿ ಕೇಳುತ್ತಿರು ವ್ಯಕ್ತಿ ಹಾಗೂ ರಾಜಕೀಯ ಪಕ್ಷಗಳ ವಿರುದ್ಧ ಚಾಟಿ ಬೀಸಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಸಾಕ್ಷಿ ಕೇಳುವವರಿಗೆ ಮಾನ, ಮರ್ಯಾದೆಯಿಲ್ಲ ಎಂದು ಕಿಡಿ ಕಾರಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ದೇಶದ ರಕ್ಷಣೆ ದೃಷ್ಠಿಯಿಂದ ಭಾರತೀಯ ಸೇನೆ ಈ ದಾಳಿಯನ್ನು ನಡೆಸಿ ಯಶಸ್ವಿಯಾಗಿದೆ. ಆದರೆ, ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ಕೆಲ ರಾಜಕೀಯ ನಾಯಕರು ಸಾಕ್ಷ್ಯಾಧಾರಗಳನ್ನು ಕೇಳುತ್ತಿದ್ದಾರೆ. ನಾಯಕರು ಸಾಕ್ಷ್ಯಾಧಾರಗಳಿಗೆ ಒತ್ತಾಯಿಸುತ್ತಿರುವುದು ದೇಶದ ಕೆಚ್ಚೆದೆಯ ವೀರ ಯೋಧರನ್ನು ಕುಗ್ಗಿಸಿದಂತಾಗುತ್ತದೆ. ಸಾಕ್ಷ್ಯಾಧಾರ ಕೇಳುತ್ತಿರುವ ನಾಯಕರಿಗೆ ಸ್ವಲ್ಪ ಕೂಡ ಮರ್ಯಾದೆ ಎಂಬುದಿಲ್ಲ ಎಂದಿದ್ದಾರೆ.
ಶತ್ರುಗಳ ಮೇಲೆ ಸೇನೆ ದಾಳಿ ನಡೆಸಿ, ಯಶಸ್ವಿಯಾಗಿರುವ ಶೇ.೧೦೦ರಷ್ಟು ಸತ್ಯ. ಇದರಲ್ಲಿ ಸೈನಿಕರ ತ್ಯಾಗ ಹಾಗೂ ಶೌರ್ಯ ದೊಡ್ಡದು. ಆದರೆ, ದೇಶದ ಒಳಗಿರುವ ನಿಷ್ಠಾವಂತರ ಸಂಖ್ಯೆ ಕಡಿಮೆಯಿದ್ದು ಇಂತಹ ವರ್ಗದ ವ್ಯಕ್ತಿಗಳೇ ಈ ರೀತಿ ಟೀಕೆ ಮಾಡುವುದು ಹಾಗೂ ಸಾಕ್ಷಿ ಕೇಳುವುದನ್ನು ಮಾಡುತ್ತಿದ್ಧಾರೆ ಎಂದು ಕಿಡಿ ಕಾರಿದರು.
ಸಾಕ್ಷ್ಯಾಧಾರಕ್ಕಾಗಿ ನಾಯಕರು ಒತ್ತಾಯಿಸುತ್ತಿರುವುದರಿಂದ ನನಗೆ ಬಹಳ ನೋವಾಗಿದೆ. ಅಂತಹವರಿಗೆ ಸರಿಯಾದ ರೀತಿಯಲ್ಲಿ ಪ್ರತ್ಯುತ್ತರ ನೀಡಬೇಕೆಂದು ಅನಿಸುತ್ತಿದೆ. ಆದರೆ, ಒಬ್ಬ ರಕ್ಷಣಾ ಸಚಿವನಾಗಿ ನಾನು ಕೂಡ ಕೆಲವು ಮರ್ಯಾದೆಯಿಂದ ನಡೆದುಕೊಳ್ಳಬೇಕಿದೆ. ಹೀಗಾಗಿ ಅದು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
Discussion about this post